* ಪಂಜಾಬ್‌ನ ಭರ್ಜರಿ ಗೆಲುವಿನ ಬೆನ್ನಲ್ಲೇ ದಕ್ಷಿಣದತ್ತ ಚಿತ್ತ* ದಕ್ಷಿಣಕ್ಕೆ ಆಪ್‌: ಬೃಹತ್‌ ಸದಸ್ಯತ್ವ* ಆಂದೋಲನ, ಪಾದಯಾತ್ರೆಗೆ ಸಿದ್ಧತೆ 

ನವದೆಹಲಿ(ಮಾ.13): ಪಂಜಾಬ್‌ನಲ್ಲಿ ದೊರೆತ ಅಭೂತ ಜಯದಿಂದ ಉತ್ತೇಜಿತವಾಗಿರುವ ಆಮ್‌ ಆದ್ಮಿ ಪಕ್ಷ (ಆಪ್‌) ಇದೀಗ ದಕ್ಷಿಣ ಭಾರತದತ್ತ ಗಮನ ಹರಿಸಿದೆ. ದಕ್ಷಿಣದ ರಾಜ್ಯಗಳಲ್ಲಿ ಬೃಹತ್‌ ಸದಸ್ಯತ್ವ ಆಂದೋಲನ ಹಾಗೂ ಪಾದಯಾತ್ರೆಗಳನ್ನು ಕೈಗೊಳ್ಳಲು ಪಕ್ಷದ ನಾಯಕತ್ವ ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ದೆಹಲಿಯಲ್ಲಿ ಸತತ ಎರಡನೇ ಬಾರಿ ಸರ್ಕಾರ ರಚಿಸಿ, ಪಂಜಾಬ್‌ನಲ್ಲಿ ದೊಡ್ಡ ಜಯ ಸಾಧಿಸಿದ ನಂತರ ದೇಶಾದ್ಯಂತ ಪಕ್ಷವನ್ನು ಬೆಳೆಸಲು ಮುಂದಾಗಿರುವ ನಾಯಕರು, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಹಾಗೂ ಲಕ್ಷದ್ವೀಪದಲ್ಲಿ ಸದಸ್ಯತ್ವ ಆಂದೋಲನಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಸೋಮನಾಥ್‌ ಭಾರ್ತಿ ತಿಳಿಸಿದ್ದಾರೆ.

ಜನರ ಮನಸ್ಥಿತಿಯನ್ನು ಗಮನಿಸಿದರೆ ಆಪ್‌ನ ರಾಜಕಾರಣದತ್ತ ಅವರು ಒಲವು ತೋರುತ್ತಿರುವುದು ಕಂಡುಬರುತ್ತಿದೆ. ದಕ್ಷಿಣ ಭಾರತದಿಂದ ನಮಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಪಕ್ಷದ ಸ್ಥಳೀಯ ತಂಡಗಳು ದೊಡ್ಡ ಪ್ರಮಾಣದಲ್ಲಿ ಶೀಘ್ರದಲ್ಲೇ ಸದಸ್ಯತ್ವ ಆಂದೋಲನ ಆರಂಭಿಸಲಿವೆ ಎಂದು ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಆಪ್‌ ಸಕ್ರಿಯವಾಗಿದ್ದು, ಮುಂಬರುವ ಬೆಂಗಳೂರು ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.