ಪಟ್ನಾಯಕ್ ಕಾಮರಾಜ್ ಸೂತ್ರ: ಎಲ್ಲ 20 ಒಡಿಶಾ ಸಚಿವರ ರಾಜೀನಾಮೆ
* ಇಂದು ಹೊಸ ಸಂಪುಟ ಪ್ರಮಾಣವಚನ
* ಪಟ್ನಾಯಕ್ ಕಾಮರಾಜ್ ಸೂತ್ರ: ಎಲ್ಲ 20 ಒಡಿಶಾ ಸಚಿವರ ರಾಜೀನಾಮೆ
ಭುವನೇಶ್ವರ(ಜೂ.05): ಮಹತ್ವದ ವಿದ್ಯಮಾನವೊಂದರಲ್ಲಿ ತಮ್ಮ ಮಂತ್ರಿಮಂಡಲದ ಎಲ್ಲ 20 ಸಚಿವರ ರಾಜೀನಾಮೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ಪಡೆದಿದ್ದಾರೆ. ಈ ಮೂಲಕ ‘ಕಾಮರಾಜ್ ಮಾದರಿ’ ಸಂಪುಟ ಪುನಾರಚನೆಗೆ ಅವರು ಮುಂದಾಗಿದ್ದು, ಭಾನುವಾರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಎಲ್ಲ ಸಚಿವರ ರಾಜೀನಾಮೆ ಪಡೆದು ಹೊಸ ಸಂಪುಟ ರಚಿಸುವುದೇ ‘ಕಾಮರಾಜ್ ಸೂತ್ರ’. 60ರ ದಶಕದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಕೆ. ಕಾಮರಾಜ್ ಈ ಸೂತ್ರ ಜಾರಿಗೆ ತಂದಿದ್ದರು.
‘ಈಗ ಇದನ್ನೇ ಅನುಸರಿಸಲು ಪಟ್ನಾಯಕ್ ಮುಂದಾಗಿದ್ದಾರೆ. ಎಲ್ಲ ಸಚಿವರ ರಾಜೀನಾಮೆ ಪಡೆದು ನೂತನ ಮಂತ್ರಿಮಂಡಲ ರಚಿಸಲಿದ್ದಾರೆ. ಭಾನುವಾರ ಬೆಳಗ್ಗೆ 11.45ಕ್ಕೆ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ’ ಎಂದು ಮೂಲಗಳು ಹೇಳಿವೆ.
2024ರ ಚುನಾವಣೆಗೆ ಪಕ್ಷ ಬಲಪಡಿಸಲು ಈ ತಂತ್ರವನ್ನು ಪಟ್ನಾಯಕ್ ಅನುಸರಿಸಿದ್ದಾರೆ ಎಂದು ಅವು ಹೇಳಿವೆ.