15 ಬಾಂಗ್ಲಾ ಉಗ್ರರು ದೇಶಕ್ಕೆ ಪ್ರವೇಶ: ಆತಂಕ!
* ಕೋಲ್ಕತಾದಲ್ಲಿ ಮೂವರ ಭಯೋತ್ಪಾದಕರ ಬಂಧನ
* 15 ಬಾಂಗ್ಲಾ ಉಗ್ರರು ದೇಶಕ್ಕೆ ಪ್ರವೇಶ: ಆತಂಕ
* ಬಂಧಿತರಿಂದಲೇ ಇನ್ನೂ 12 ಉಗ್ರರ ಬಗ್ಗೆ ಮಾಹಿತಿ
ಕೋಲ್ಕತಾ(ಜು.14): ಭಯೋತ್ಪಾದನೆ ನಿಯಂತ್ರಣಕ್ಕೆ ಭಾರತ ಸರ್ಕಾರ ಹಗಲಿರುಳು ಶ್ರಮಿಸುತ್ತಿರುವ ನಡುವೆಯೇ, ‘ನೆರೆಯ ಬಾಂಗ್ಲಾದೇಶದ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ(ಜೆಎಂಬಿ) ಉಗ್ರ ಸಂಘಟನೆಯ 15 ಭಯೋತ್ಪಾದಕರು ದೇಶಕ್ಕೆ ನುಸುಳಿದಿದ್ದಾರೆ. ಈ ಪೈಕಿ ಇಬ್ಬರು ಬಂಗಾಳದಲ್ಲಿ ಹಾಗೂ 10 ಮಂದಿ ಅನ್ಯ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ’ ಎಂದು ಕೋಲ್ಕತಾ ವಿಶೇಷ ಪೊಲೀಸ್ ಕಾರ್ಯಪಡೆ (ಎಸ್ಟಿಎಫ್) ಹೇಳಿದೆ.
ಈ 15 ಮಂದಿಯ ಪೈಕಿ ಮೂವರನ್ನು ಭಾನುವಾರ ಬಂಧಿಸಲಾಗಿತ್ತು. ಇವರ ವಿಚಾರಣೆ ನಡೆಸಿದ ವೇಳೆ ಇನ್ನೂ 12 ಜನರು ತಲೆಮರೆಸಿಕೊಂಡ ವಿಷಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಂಗಳವಾರ ಮಾತನಾಡಿದ ಎಸ್ಟಿಎಫ್ ಅಧಿಕಾರಿಯೊಬ್ಬರು, ‘ಈ 15 ಮಂದಿ ಪೈಕಿ 10 ಮಂದಿ ಉಗ್ರರು ಒಡಿಶಾ, ಬಿಹಾರ ಮತ್ತು ಜಮ್ಮು-ಕಾಶ್ಮೀರ ಹಾಗೂ ಇತರ ರಾಜ್ಯಗಳಿಗೆ ಭೇಟಿ ನೀಡಿರಬಹುದು. ಇನ್ನುಳಿದ ಇಬ್ಬರಾದ ಶೇಖ್ ಶಕೀಲ್ ಮತ್ತು ಸಲೀಂ ಮುನ್ಷಿ ಎಂಬುವರು ಬಂಗಾಳದಲ್ಲೇ ಇದ್ದಾರೆ ಎಂದು ಬಂಧಿತ ಮೂವರೂ ಉಗ್ರರು ವಿಚಾರಣೆ ವೇಳೆ ತಿಳಿಸಿದ್ದಾರೆ’ ಎಂದು ಎಸ್ಟಿಎಫ್ ಅಧಿಕಾರಿ ತಿಳಿಸಿದ್ದಾರೆ.
ಏತನ್ಮಧ್ಯೆ, ಈ ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಪ್ರವೇಶ ನೀಡಿದ್ದು, ಉಗ್ರರ ಕುರಿತಾದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.