Asianet Suvarna News Asianet Suvarna News

India@75: ಕರ್ನಾಟಕದ ಪಾತ್ರ ಹೋರಾಟಗಾರರ ‘ತರಬೇತಿ ಕೇಂದ್ರ’ ವಿಜಯನಗರದ ಹರಪನಹಳ್ಳಿ

ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೊಡುಗೆಯೂ ಅಪಾರ ಎಂಬುದು ಹೆಮ್ಮೆಯ ಸಂಗತಿ. ಈ ಹಿಂದೆ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಯ ಊಟಿ ಎನ್ನುವ ಖ್ಯಾತಿ ಪಡೆದಿತ್ತು. ಭೌಗೋಳಿಕವಾಗಿ ಸಮುದ್ರ ಮಟ್ಟಕ್ಕಿಂತ ಹರಪನಹಳ್ಳಿ ಸಾಕಷ್ಟು ಎತ್ತರದಲ್ಲಿದೆ.

Role of Vijayanagara Harappana Halli in Freedom Struggle hls
Author
Bengaluru, First Published Aug 3, 2022, 11:33 AM IST

ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೊಡುಗೆಯೂ ಅಪಾರ ಎಂಬುದು ಹೆಮ್ಮೆಯ ಸಂಗತಿ. ಈ ಹಿಂದೆ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಯ ಊಟಿ ಎನ್ನುವ ಖ್ಯಾತಿ ಪಡೆದಿತ್ತು. ಭೌಗೋಳಿಕವಾಗಿ ಸಮುದ್ರ ಮಟ್ಟಕ್ಕಿಂತ ಹರಪನಹಳ್ಳಿ ಸಾಕಷ್ಟು ಎತ್ತರದಲ್ಲಿದೆ.

ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಉಗಮ ಸ್ಥಾನ ಹಾಗೂ ಯೋಧರ ತರಬೇತಿ ಕೇಂದ್ರ ಹರಪನಹಳ್ಳಿಯೇ ಆಗಿದೆ ಎಂಬುದು ಹಿರಿಯರ ಮಾತು. ಮಹಾತ್ಮ ಗಾಂಧೀಜಿ ಶಾಂತಿ ಮಾರ್ಗ ಹಾಗೂ ಸುಭಾಸ್‌ಚಂದ್ರ ಬೋಸ್‌ ಅವರ ಕ್ರಾಂತಿ ಮಾರ್ಗ ಇವೆರಡರ ಸಂಯೋಜನೆ ಹರಪನಹಳ್ಳಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇದ್ದುದು ಒಂದು ವಿಶೇಷ.

ಕಿಚ್ಚು ಹೆಚ್ಚಿಸಿದ ಗಾಂಧೀಜಿ ಭೇಟಿ:

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ದಾವಣಗೆರೆಯಿಂದ ಹರಪನಹಳ್ಳಿ ಮಾರ್ಗವಾಗಿ ಬಳ್ಳಾರಿ ಜಿಲ್ಲಾ ಸಂಚಾರ ಕೈಗೊಂಡಿದ್ದರು. ಆ ಸಂದರ್ಭದಲ್ಲಿ 1934 ಮಾರ್ಚ್ 2 ಶುಕ್ರವಾರ ಸಂಜೆ ಸುಮಾರು 4 ಗಂಟೆಗೆ ಗಂಗಾಧರ ರಾವ್‌ ದೇಶಪಾಂಡೆ, ಠಕ್ಕರ್‌ ಬಾಪಾ ಅವರೊಂದಿಗೆ ಈಗಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಒಂದು ಕೋಣೆಯಲ್ಲಿ ತಂಗಿ, ಇಲ್ಲಿಯ ಜನರಿಗೆ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿ ತುಂಬಿದ್ದರು.

India@75:ಸ್ವತಂತ್ರ್ಯ ಹೋರಾಟಗಾರರ ಜನ್ಮಭೂಮಿ ವಿಜಯಪುರದ ಚಡಚಣ

ತಾಲೂಕಿನಲ್ಲಿ ಒಟ್ಟು 69 ಜನ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅದರಲ್ಲಿ ಈಗ 99 ವರ್ಷದ ಎಚ್‌.ಎಂ.ವೀರಭದ್ರಯ್ಯ ನಮ್ಮ ನಡುವೆ ಇದ್ದಾರೆ. ಯುವ ಜನರಿಗೆ ಸ್ಫೂರ್ತಿಯಾಗಿದ್ದಾರೆ. 69 ಜನರಲ್ಲಿ ಇಜಾರಿ ವಸುಪಾಲಪ್ಪ, ಇಜಾರಿ ಸಿರಸಪ್ಪನವರು, ಇಜಾರಿ ವರ್ಧಮಾನಪ್ಪ, ಸೆಟ್ರ ಚೂಡಪ್ಪ, ಕಂಚಿನಕೋಟೆ ಬೊಮ್ಮಪ್ಪ, ಅರಳಿಕಟ್ಟಿಪೂರ್ಣಾಚಾರ, ಆರ್‌.ಹಯವದನರಾವ್‌, ತಾಂಬ್ರಪರ್ಣಿ ವೆಂಕೋಬರಾವ್‌ ಸೇರಿ 16 ಜನರು ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಇವರಲ್ಲದೆ ಕಟ್ಟಿಸೇತುರಾಮಚಾರ್‌, ತೆಗ್ಗಿಮಠದ ಪಂಚಾಕ್ಷರಯ್ಯ, ಪಿ.ಎಲ್‌.ಭೋಜನಾಯ್ಕ, ಕುಂಚೂರು ಸಿದ್ದಪ್ಪ, ಎಬಿಆರ್‌ ಕೊಟ್ರಗೌಡ, ಕಂಚಿಕೇರಿ ಭಾಷ್ಕರಚಾರ್ಯ, ಬೂದಿ ರಾಮಭಟ, ಟಿಎಚ್‌ಎಂ ಶಿವಯ್ಯ, ಮುದುಗಲ್‌ ನಾಗಪ್ಪ, ಹಿರೇಮೇಗಳಗೇರಿ ರೇವಣಗೌಡ, ಇಜಂತಕರ್‌ ಸತ್ಯನಾರಾಯಣರಾವ್‌, ಕಂಚಿಕೇರಿ ಸಿದ್ದಪ್ಪ ಸೇರಿದಂತೆ ಬಹಳಷ್ಟುಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು.

ಬಸ್ಸಿನ ಟಪಾಲು ಒಡೆಯುವುದು, ಈಚಲ ಮರ ಕಡಿಯುವ ಚಳವಳಿ, ಮೈಸೂರು ಚಲೋ ಸತ್ಯಾಗ್ರಹ, ಟೆಲಿಗ್ರಾಫ್‌ ತಂತಿ ಕತ್ತರಿಸುವುದು, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ಸೇರಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡು ಶಿಕ್ಷೆ ಸಹ ಅನುಭವಿಸಿದ್ದಾರೆ. ಮಹಾತ್ಮಾ ಗಾಂಧೀಜಿ ಇಲ್ಲಿಗೆ ಬಂದು ಹೋದ ಸವಿನೆನಪಿಗಾಗಿ ಗಾಂಧೀಜಿ ವಿಶ್ರಾಂತಿ ಪಡೆಯುತ್ತಿರುವ ಕೃಷ್ಣಶಿಲೆಯ ಏಕಶಿಲಾ ಮೂರ್ತಿಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಒಂದು ಕೋಣೆಯ ಮಧ್ಯೆ ಪ್ರತಿಷ್ಠಾಪನೆ ಮಾಡಲಾಗಿದೆ.

ತಲುಪುವುದು ಹೇಗೆ?

ಹರಪನಹಳ್ಳಿ ತಾಲೂಕು ಕೇಂದ್ರವಾಗಿದ್ದು, ರಾಜಧಾನಿ ಬೆಂಗಳೂರಿನಿಂದ 291 ಕಿ.ಮೀ. ದೂರವಿದೆ. ಬಸ್‌ ಮತ್ತು ರೈಲು ಸಂಪರ್ಕವಿದೆ.

- ಬಿ.ರಾಮಪ್ರಸಾದ್‌ ಗಾಂಧಿ

Follow Us:
Download App:
  • android
  • ios