ಸಕಲೇಶಪುರದಲ್ಲಿ ಆತಂಕ ಸೃಷ್ಟಿಸಿದ ನಾಲ್ಕು ಅಡಿ ಉದ್ದದ ನಾಗರ ಹಾವು ರಕ್ಷಣೆ, ಕಾಫಿ ತೋಟದಲ್ಲಿ ಕಾಣಿಸಿಕೊಂಡ ದೊಡ್ಡ ಗಾತ್ರದ ನಾಗರ ಹಾವನ್ನು ಯಶಸ್ವಿಯಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.

ಸಕಲೇಶಪುರ(ನ.23) ಕಾಫಿ ತೋಟದಲ್ಲಿ ಬರೋಬ್ಬರಿ ನಾಲ್ಕು ಅಡಿ ಉದ್ದದ ನಾಗರ ಹಾವು ಕಾಣಿಸಿಕೊಳ್ಳವು ಮೂಲಕ ಸಕಲೇಶಪುರದ ಕರಡಿಗಾಲ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿತ್ತು. ದೊಡ್ಡ ಗಾತ್ರದ ನಾಗರಹಾವಿನಿಂದ ಜನರು ಭಯಗೊಂಡಿದ್ದರು. ಇದೀಗ ಯಶಸ್ವಿ ಕಾರ್ಯಾಚರಣೆ ಮೂಲಕ ನಾಗರ ಹಾವನ್ನು ಸೆರೆ ಹಿಡಿಯಲಾಗಿದೆ. ಬಳಿಕ ಅರಣ್ಯಕ್ಕೆ ಸುರಕ್ಷಿತವಾಗಿ ಹಾವನ್ನು ಬಿಡಲಾಗಿದೆ. ಸ್ಥಳಕ್ಕೆ ಬಂದ ಉರಗ ತಜ್ಞ ಚಂಗಡಹಳ್ಳಿ ರವಿ ನಾಗರಹಾವು ಸೆರೆ ಹಿಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಎರಡು ದಿನಗಳಿಂದ ಕರಡಿಗಾಲ ಗ್ರಾಮದ ಕೆ. ಎ ಧರ್ಮಪಾಲ್ ತೋಟದಲ್ಲಿದ್ದ ನಾಗರಹಾವು ಕಾಣಿಸಿಕೊಂಡಿತ್ತು. ಹೀಗಾಗಿ ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿತ್ತು. ಎಲ್ಲಿ ಮನೆಯೊಳಗೆ ಹಾವು ಸೇರಿಕೊಳ್ಳುತ್ತೋ ಅನ್ನೋ ಭಯ ಕಾಡಿತ್ತು. ತೋಟದಲ್ಲಿ ಕೆಲಸ ಮಾಡುವಾಗ ಎಲ್ಲಿ ಹಾವು ದಾಳಿ ಮಾಡುತ್ತೋ ಅನ್ನೋ ಆತಂಕ ಜನರಿಗೆ ಎದುರಾಗಿತ್ತು. ಈ ಕುರಿತು ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಯಸಳೂರು ಅರಣ್ಯ ಅಧಿಕಾರಿಗಳು ಆಗಮಿಸಿದ್ದರು. ಬಳಿಕ ಉರಗ ತಜ್ಞರಾದ ಚoಗಡಿಹಳ್ಳಿ ರವಿ ರವರ ಸಹಾಯದಿಂದ ನಾಗರಹಾವು ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ನಾಗರಹಾವನ್ನು ಸುರಕ್ಷಿತವಾಗಿ ಬಿಸ್ಲೆ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ಬೈಕ್‌ನಲ್ಲಿ ಅಡಗಿ ಕುಳಿತ ಹಾವು

ಬಾದಾಮಿಯ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ನಾಗರ ಹಾವು ಪ್ರತ್ಯಕ್ಷಗೊಂಡಿದೆ.ಮಂಜು ಎಂಬುವರಿಗೆ ಸೇರಿದ್ದ ಆರ್‌ಎನ್‌ ಫೈವ್ ಬೈಕ್‌ನಲ್ಲಿ ಹಾವು ಸೇರಿಕೊಂಡಿದೆ. ನಿಲ್ಲಿಸಿದ್ದ ಬೈಕ್ ಒಳಗೆ ಹಾವು ಹೋಗುವುದನ್ನು ಸ್ಥಳೀಯರು ನೋಡಿದ್ದಾರೆ. ಹೀಗಾಗಿ ಸ್ಥಳೀಯರು ಸ್ನೇಕ್ ಮಹಾಂತೇಶ್‌ಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸ್ನೇಹ್ ಮಹಾಂತೇಶ್ ಬೈಕ್ ಒಳಗಿನಿಂದ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಕಾಳಿಂಗ ಸರ್ಪ ರಕ್ಷಣೆ

ಇತ್ತೀಚೆಗೆ ಕೊಡಗಿನ ಪೊನ್ನಂಪೇಟೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಪೊನ್ನಂಪೇಟೆ ತಾಲೂಕಿನ ವೆಸ್ಟ್‌ನೆಮ್ಮಲೆ ಗ್ರಾಮದ ಮನೆಯಲ್ಲಿ ಹಾವು ಪ್ರತ್ಯಕ್ಷಗೊಂಡಿತ್ತು. ಮನೆಯೊಳಗೆ ಹಾವು ನೋಡಿ ಜನರು ಕಂಗಾಲಾಗಿದ್ದರು. ಮಾದೇವಿ ಎಂಬವರ ಮನೆಯೊಳಗಿದ್ದ ಕಿಂಗ್ ಕೋಬ್ರಾ ಕಾಣಿಸಿಕೊಂಡಿತ್ತು. ದೇವರ ಫೋಟೋ ಮುಂಭಾಗದಲ್ಲಿ ದೀಪ ಇರಿಸುವ ಜಾಗದಲ್ಲಿ ಹಾವು ಮಲಗಿತ್ತು. 12 ಅಡಿ ಉದ್ದದ ‌ಕಾಳಿಂಗ ಸರ್ಪವನ್ನು ಉರಗ ತಜ್ಞ ಬೋಸ್ ಮಾದಪ್ಪ ಹಿಡಿದು ಬ್ರಹ್ಮಗಿರಿ ಅರಣ್ಯಕ್ಕೆ ಬಿಡಲಾಗಿದೆ.