ಅತ್ತ ಕೊರೋನಾ, ಇತ್ತ ಪ್ರವಾಹ: ಮನೆ ಕಳೆದುಕೊಂಡು ಬೀದಿಗೆ ಬಿದ್ದ ಜನ!
2020 ಆರಂಭವಾದಾಗ ಈ ವರ್ಷ ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟಗಳು ಎದುರಾಗುತ್ತವೆ ಎಂದು ಯಾರೂ ಯೋಚಿಸಿರಲಿಕ್ಕಿಲ್ಲ. ವರ್ಷದಾರಂಭದಲ್ಲಿ ಆಸ್ಟ್ರೇಲಿಯಾದ ಕಾಡ್ಗಿಚ್ಚು ಇಡೀ ದೇಶದ ಗಮನ ಸೆಳೆಯಿತು. ಆದರೆ ಅಷ್ಟರಲ್ಲಾಗಲೇ ಚೀನಾದಲ್ಲಿ ಮಹಾಮಾರಿಯೊಂದು ಹುಟ್ಟಿಕೊಂಡಿತ್ತು. ಆದರೀಗ ಕೊರೋನಾ ವೈರಸ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಮಹಾಮಾರಿ ಅವಾಂತರವನ್ನೇ ಸೃಷ್ಟಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಟ್ಟಹಾಸ ಮುಂದುವರೆಸಿದೆ. ಹಲವಾರು ದೇಶಗಳಲ್ಲಿ ಇದನ್ನು ನಿಯಂತ್ರಿಸಲು ಲಾಕ್ಡೌನ್ ಘೋಷಿಸಲಾಗಿದೆ. ಇದರಲ್ಲಿ ಮಲೇಷ್ಯಾ ಕೂಡಾ ಒಂದು. ಇಲ್ಲಿನ ಪೆನಾಂಗ್ ಎಂಬಲ್ಲಿ ಜನರು ಲಾಕ್ಡೌನ್ನಿಂದ ಮನೆಯಲ್ಲಿದ್ದರು. ಆದರೀಗ ಇಲ್ಲಿನ ಜನ ಮತ್ತೊಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿ ಭಾರೀ ಬಿರುಗಾಳಿ ಬಳಿಕ ಈಗ ಪ್ರವಾಹ ಜನರ ನಿದ್ದೆಗೆಡಿಸಿದೆ. ಬಿರುಗಾಳಿಗೆ ಹಲವಾರು ಮನೆಗಳ ಛಾವಣಿ ಹಾರಿಹೋಗಿದ್ದು, ಜನರು ರಸ್ತೆಯಲ್ಲಿ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿದೆ ಕೆಲ ಪೋಟೋಗಳು.
ಸದ್ಯ ವಿಶ್ವವಿಡೀ ಕೊರೋನಾ ವಿರುದ್ಧ ಸಮರ ಸಾರಿದೆ. ಆದರೀಗ ಈ ಮಹಾಮಾರಿ ನಡುವೆ ಬಿರುಗಾಳಿ ಹಾಗೂ ಪ್ರವಾಹ ಇಡೀ ದೇಶವನ್ನೇ ಇನ್ನಿಲ್ಲದಂತೆ ಕಂಗೆಡಿಸಿದೆ.
ಮಲೇಷ್ಯಾದಲ್ಲಿ ಸರ್ಕಾರ ಕೊರೋನಾ ನಿಯಂತ್ರಿಸಲು ಲಾಕ್ಡೌನ್ ಹೇರಿದ್ದು, ಜನರ ಬಳಿ ಮನೆಯಲ್ಲೇ ಇರುವಂತೆ ಮನವಿ ಮಾಡಿತ್ತು. ಆದರೀಗ ಈ ನಡುವೆ ಇಲ್ಲಿನ ಪೆನಾಂಗಾದಲ್ಲಿ ಬಿರುಗಾಳಿ ಬಂದಿದೆ.
ಈ ಬಿರುಗಾಳಿಯಿಂದಾಗಿ ಹಲವಾರು ಮನೆಗಳ ಛಾವಣಿ ಹಾರಿ ಹೋಗಿದೆ. ಬಿರುಗಾಳಿ ಬೆನ್ನಲ್ಲೇ ಪ್ರವಾಹ ಕೂಡಾ ಜನರ ನಿದ್ದೆಗೆಡಿಸಿದೆ.
ಛಾವಣಿ ಗಾಳಿಗೆ ಹಾರಿ ಹೋಗಿದ್ದು, ಭೀಕರವಾಗಿ ಸುರಿದ ಮಳೆಯಿಂದ ಮನೆಯೊಳಗೆಲ್ಲಾ ನೀರು ತುಂಬಿಕೊಂಡಿದೆ.
ಮಲಯ್ ಮೇಲ್ ವರದಿಯನ್ವಯ ಇಲ್ಲಿ ಭೀಕರ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಮಳೆಯಾದರೆ ಇಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡುವುದು ಖಚಿತ.
ಬಿರುಗಾಳಿಯಿಂದ ಮನೆಗಳಿಗೆ ಹಾನಿಯಾಗಿದೆ. ಅಕ್ಕ ಪಕ್ಕದ ಪ್ರದೇಶಗಳಲ್ಲಿ ಮಳೆಯಿಂದಾಗಿ ನೀರು ತುಂಬಿಕೊಂಡಿದೆ.
ಸ್ಟೇಟ್ ವೆಲ್ಫೇರ್ ಕೇರಿಂಗ್ ಸೊಸೈಟಿ ಸೇರಿದಂತೆ ಹಲವಾರು ಸಂಸ್ಥೆಗಳು ಜನರ ಸಹಾಯಕ್ಕೆ ಧಾವಿಸಿವೆ. ಶೀಘ್ರದಲ್ಲೇ ಎಲ್ಲಾ ಮನೆಗಳ ರಿಪೇರಿ ಕಾರ್ಯ ಆರಂಭವಾಗಲಿದೆ.
ಈವರೆಗೂ ಈ ಬಿರುಗಾಳಿ ಹಾಗೂ ಪ್ರವಾಹಕ್ಕೆ ಪ್ರಾಣಹಾನಿ ಸಂಭವಿಸಿಲ್ಲ ಎಂಬುವುದು ಸಮಾಧಾನದ ವಿಚಾರ.
ಕೊರೋನಾ ಪ್ರಕೋಪದಿಂದ ಈಗಾಗಲೇ ಈ ದೇಶ ನಲುಗಿದ್ದು, ಜನರ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ. ಜನರ ಬಳಿ ಮನೆಯಲ್ಲೇ ಉಳಿದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಬಂದ ಈ ಸಂಕಷ್ಟ ಜನರು ದಿನಗಳನ್ನು ಬೀದಿಯಲ್ಲಿ ಕಳೆಯುವಂತೆ ಮಾಡಿದೆ.
ಸೋಶಿಯಲ್ ಮಿಡಿಯಾದಲ್ಲಿ ಈ ವಿಪತ್ತಿನ ಫೋಟೋಗಳನ್ನು ಶೇರ್ ಮಾಡಲಾಗುತ್ತಿದ್ದು, ಎಲ್ಲರೂ ಇಲ್ಲಿನ ಜನರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಇನ್ನು ಯಾವುದೇ ವಿಪತ್ತು ಬೇಡ ಎಂದು ಭಗವಂತನಲ್ಲಿ ಜನರು ಮೊರೆ ಇಟ್ಟಿದ್ದಾರೆ. ಕೊರೋನಾದಿಂದ ಈಗಾಗಲೇ ಕಂಗೆಟ್ಟಿರುವ ಜನರಿಗೆ ಇದು ಇನ್ನೂ ಹೆಚ್ಚಿನ ಸಂಕಟ ಕೊಡಲಿದೆ.