ಸೂರು ಇಲ್ಲದವರು ಮನೆ ಕಟ್ಟಿಸಿಕೊಳ್ಳಲು 5 ಲಕ್ಷ: ವಸತಿ ಸಚಿವ ವಿ.ಸೋಮಣ್ಣ
ಬೆಂಗಳೂರು(ಆ.30): ರಾಜಧಾನಿಯಲ್ಲಿ ಸೂರು ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರು. ನೀಡಲಾಗುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಶನಿವಾರ ಗೋವಿಂದರಾಜನಗರ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡ್ನಲ್ಲಿ ಶನಿವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ನಾನಾ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಹಾಗೂ ಪ್ರಧಾನಮಂತ್ರಿ ಆವಾಜ್ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಿಸಿದ ಸಚಿವ ವಿ.ಸೋಮಣ್ಣ
ಬಡವರು ಆರ್ಥಿಕವಾಗಿ ಸಬಲರಾಗಿ ಉನ್ನತಮಟ್ಟದ ಜೀವನ ಸಾಗಿಸಲು ಅನುವಾಗುವಂತೆ ರಾಜ್ಯ ಸರ್ಕಾರವು ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಅಗ್ರಹಾರ ದಾಸರಹಳ್ಳಿ ವಾರ್ಡಿನಲ್ಲಿ ಸುಮಾರು ಆರು ಕೋಟಿ ರು. ವೆಚ್ಚ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹಕ್ಕುಪತ್ರ ಇಲ್ಲದ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಸೂರು ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರು. ನೀಡಲಾಗುತ್ತಿದೆ ಎಂದು ತಿಳಿಸಿದ ಸೋಮಣ್ಣ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ದನಿ ಇಲ್ಲದ ಮಂದಿಗೆ ಆಸರೆಯಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೂರು ಲಕ್ಷ ಕುಟುಂಬಗಳು ಹಾಗೂ ಬೆಂಗಳೂರು ನಗರದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ವಾರ್ಡಿನ ಬಸವನ ಪಾರ್ಕ್, ಕ್ರೀಡಾ ಸಂಕೀರ್ಣ ಹಾಗೂ ಜ್ಞಾನ ಮಂದಿರ ಕಾಮಗಾರಿಗಳನ್ನು ಸಚಿವ ವಿ.ಸೋಮಣ್ಣ ಪರಿಶೀಲಿಸಿದರು. ಬಿಬಿಎಂಪಿ ಸದಸ್ಯೆ ಶಿಲ್ಪಾ ಶ್ರೀಧರ್, ಬಿಜೆಪಿ ಮುಖಂಡರಾದ ಶ್ರೀಧರ್, ವಿಶ್ವನಾಥ್ಗೌಡ ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.