ರಾಜೀವ್ ಗಾಂಧಿ ಆರೋಗ್ಯ ವಿವಿ ಶೀಘ್ರ ಕಾಮಗಾರಿ: ಡಾ. ಸುಧಾಕರ್
ಬೆಂಗಳೂರು(ಅ.14): ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕುಮಾರಕೃಪ ಅತಿಥಿಗೃಹದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಡಾ. ಕೆ.ಸುಧಾಕರ್
ರಾಮನಗರದಲ್ಲಿ ರಾಜೀವ್ಗಾಂಧಿ ವಿಶ್ವವಿದ್ಯಾಲಯ ನಿರ್ಮಾಣ ಆಗಬೇಕೆಂದು 2007ರಲ್ಲೇ ತೀರ್ಮಾನ ಆಗಿತ್ತು. 2019ರಲ್ಲಿ ಟೆಂಡರ್ಗೆ ಅನುಮೋದನೆ ಸಿಕ್ಕಿತ್ತು. ಆದರೆ ಜಮೀನು ಮಾಲಿಕರು ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ವಿಳಂಬವಾಯಿತು. ಇದೀಗ ಅದಕ್ಕೆ ಮತ್ತೆ ಜೀವ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಆರೋಗ್ಯ ಸೇವೆ ನೀಡಬೇಕೆಂಬ ಉದ್ದೇಶ ಹೊಂದಿದ್ದಾರೆ. ರಾಜೀವ್ಗಾಂಧಿ ವಿವಿಯ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಲಾಗಿದೆ. ಆದರೆ ವಿವಿಗೆ ಪ್ರತ್ಯೇಕ ಆಡಳಿತ ಕಟ್ಟಡ ಇಲ್ಲ ಎಂಬುದು ವಿಪರ್ಯಾಸ. ಶೀಘ್ರದಲ್ಲೇ ರಾಮನಗರದಲ್ಲಿ ವಿಶ್ವವಿದ್ಯಾಲಯ ಆರಂಭವಾಗಲಿದೆ ಎಂದ ಸಚಿವ ಡಾ. ಕೆ.ಸುಧಾಕರ್
ರಾಮನಗರದಲ್ಲಿ 2006-07ರಲ್ಲಿ ಪ್ರಾರಂಭವಾಗಬೇಕಿದ್ದ ವಿವಿ ಇದು. ಅನೇಕ ವರ್ಷಗಳಿಂದ ಅಡೆತಡೆ ಇತ್ತು. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಕ್ರಮ ಕೈಗೊಂಡಿದ್ದೆ. ಈಗಿನ ಬಿಜೆಪಿ ಸರ್ಕಾರ ಕೂಡಾ ನಮ್ಮ ಯೋಜನೆ ಮುಂದುವರೆಸುವ ಕೆಲಸ ಮಾಡುತ್ತಿದೆ. ಸಚಿವರು ಸೇರಿದಂತೆ ಮುಖ್ಯಮಂತ್ರಿಗಳು ಸಹಕಾರ ಕೊಡುತ್ತಿದ್ದಾರೆ. ತಕ್ಷಣ ಕೆಲಸ ಪ್ರಾರಂಭ ಮಾಡುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ. ಎಲ್ಲ ಸಮಸ್ಯೆ ಪರಿಹಾರ ಆಗಿದೆ. ಶೀಘ್ರವೇ ಯೋಜನೆ ಪ್ರಾರಂಭವಾಗಲಿದೆ ಎಂದು ಹೇಳಿದ ಕುಮಾರಸ್ವಾಮಿ