ರಾಜ್ಯಾದ್ಯಂತ ಅಕ್ರಮ ರಸಗೊಬ್ಬರ, ಕೀಟನಾಶಕ ಮಾರಾಟದ ಮೇಲೆ ದಾಳಿ; 8 ಟ್ರೇಡರ್ಸ್ ಪರವಾನಗಿ ರದ್ದು
ರಾಜ್ಯದಾದ್ಯಂತ ರಸಗೊಬ್ಬರ ಮತ್ತು ಕೀಟನಾಶಕ ಮಾರಾಟದಲ್ಲಿ ನಡೆಯುತ್ತಿರುವ ಉಲ್ಲಂಘನೆಗಳ ವಿರುದ್ಧ ಕೃಷಿ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಬನ್ನೂರು, ನಂಜನಗೂಡು ಮತ್ತು ದಾವಣಗೆರೆಯಲ್ಲಿ ದಾಳಿ ನಡೆಸಿ, ಅನಧಿಕೃತ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ ಮತ್ತು ಲೈಸೆನ್ಸ್ಗಳನ್ನು ರದ್ದುಗೊಳಿಸಲಾಗಿದೆ.

ಬೆಂಗಳೂರು (ಆ.02): ರಾಜ್ಯ ಕೃಷಿ ಇಲಾಖೆಯು ರಾಜ್ಯದಾದ್ಯಂತ ರಸಗೊಬ್ಬರ ಮತ್ತು ಕೀಟನಾಶಕ ಮಾರಾಟದಲ್ಲಿ ನಡೆಯುತ್ತಿರುವ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಮಾನ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರ ಮಾರ್ಗದರ್ಶನದಲ್ಲಿ, ಇಲಾಖೆಯು ರಾಜ್ಯದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ, ಫರ್ಟಿಲೈಸರ್ ಕಂಟ್ರೋಲ್ ಆರ್ಡರ್ (FCO) ಉಲ್ಲಂಘನೆ ಮತ್ತು ಅನಧಿಕೃತ ಕೀಟನಾಶಕ ತಯಾರಿಕೆಯನ್ನು ಪತ್ತೆಹಚ್ಚಿದೆ.
ಬನ್ನೂರಿನಲ್ಲಿ ಜಪ್ತಿ ಕಾರ್ಯಾಚರಣೆ: ಚಾಮುಂಡೇಶ್ವರಿ ಟ್ರೇಡರ್ಸ್ ಮತ್ತು ಗ್ರೀನ್ವೇ ಎಂಟರ್ಪ್ರೈಸಸ್, ಬನ್ನೂರು ಇಲ್ಲಿ FCO ಉಲ್ಲಂಘನೆ ಮಾಡಿ ಮಾರಾಟ ಮಾಡುತ್ತಿದ್ದ ಅಂದಾಜು ಒಟ್ಟು ₹5,29,900 ಮೌಲ್ಯದ ಬಯೋಸ್ಟಿಮುಲೆಂಟ್ಗಳನ್ನು ಜಪ್ತಿ ಮಾಡಲಾಗಿದೆ.
ಜಪ್ತಿಯಾದ ವಸ್ತುಗಳು & ಮೌಲ್ಯ:
- GROW-R: ₹58,000
- ABDA Gold: ₹1,52,000
- Zymegold: ₹30,800
- ಸಾಗರಿಕಾ: ₹23,100
- ಶಿವರಿಕಾ: ₹2,66,000
ನಂಜನಗೂಡಿನಲ್ಲಿ ಅನಧಿಕೃತ ಕೀಟನಾಶಕ ಜಪ್ತಿ: ವಿಚಕ್ಷಣ ದಳದ ಅಪರ ಕೃಷಿ ನಿರ್ದೇಶಕರಾದ ದೇವರಾಜು ಮಾರ್ಗದರ್ಶನದಲ್ಲಿ, ಶ್ರೀ ಇಂಡಸ್ಟ್ರೀಸ್, ನಂಜನಗೂಡಿನಲ್ಲಿ ಅನಧಿಕೃತವಾಗಿ ತಯಾರಿಸಲಾಗುತ್ತಿದ್ದ 160 ಲೀಟರ್ ಪ್ರೊಫೆನೊಫಾಸ್ ಕೀಟನಾಶಕವನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆಯಲ್ಲಿ ಲೈಸೆನ್ಸ್ ರದ್ದು ಮತ್ತು ಅಮಾನತು:
ದಾವಣಗೆರೆಯ ADA (ವಿಜಿಲೆನ್ಸ್ 1 & 2) ಶಿಫಾರಸಿನ ಮೇರೆಗೆ, ದಾವಣಗೆರೆಯ 5 ಚಿಲ್ಲರೆ ಮಾರಾಟಗಾರರು ಮತ್ತು ಜಗಳೂರಿನ 2 ಚಿಲ್ಲರೆ ಮಾರಾಟಗಾರರ ಲೈಸೆನ್ಸ್ಗಳನ್ನು ಅಮಾನತಿನಲ್ಲಿಡಲಾಗಿದೆ. ರಸಗೊಬ್ಬರವನ್ನು ನಿಗದಿತ ಬೆಲೆ (MRP)ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಚಿಲ್ಲರೆ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ, ರಸಗೊಬ್ಬರ ಸಗಟು ಮಾರಾಟಗಾರರು ಜಿಲ್ಲೆಯ ಚಿಲ್ಲರೆ ಮಾರಾಟಗಾರರಿಗೆ ಹಂಚಿಕೆಯಾದ ರಸಗೊಬ್ಬರವನ್ನು ಪೂರೈಕೆ ಮಾಡದೆ, ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡಿದ್ದರಿಂದ, ಸಗಟು ಮಾರಾಟಗಾರರ ಲೈಸೆನ್ಸ್ಗಳನ್ನು ರದ್ದುಗೊಳಿಸಲಾಗಿದೆ.
8 ಸಗಟು ವ್ಯಾಪಾರಿಗಳ ಲೈಸೆನ್ಸ್ ರದ್ದು:
- ಆಶಾಪೂರಿ ಫರ್ಟಿಲೈಸರ್ಸ್, ದಾವಣಗೆರೆ
- ರಾಥೋಡ್ ಫರ್ಟಿಲೈಸರ್ಸ್, ದಾವಣಗೆರೆ
- ಶ್ರೀ ಮಲ್ಲಿಕಾರ್ಜುನ ಫರ್ಟಿಲೈಸರ್ಸ್, ದಾವಣಗೆರೆ
- ದಿಬ್ಬದಹಳ್ಳಿ ಆಗ್ರೋ ಸರ್ವೀಸ್, ದಾವಣಗೆರೆ
- ಶ್ರೀ ಶ್ರೀನಿವಾಸ ಆಗ್ರೋ ಟ್ರೇಡರ್ಸ್, ದಾವಣಗೆರೆ
- ಕಿಶೋರ್ ಫರ್ಟಿಲೈಸರ್ಸ್, ದಾವಣಗೆರೆ
- ವೀರಭದ್ರೇಶ್ವರ ಫರ್ಟಿಲೈಸರ್ಸ್, ನಲ್ಲೂರು, ಚನ್ನಗಿರಿ ತಾಲೂಕು
- ವೀರಭದ್ರೇಶ್ವರ ಟ್ರೇಡರ್ಸ್, ಗೋಪನಹಳ್ಳಿ
ಕರ್ನಾಟಕ ಕೃಷಿ ಇಲಾಖೆಯು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಗುಣಮಟ್ಟದ ರಸಗೊಬ್ಬರ ಮತ್ತು ಕೀಟನಾಶಕಗಳ ಲಭ್ಯತೆಯನ್ನು ಖಾತ್ರಿಪಡಿಸಲು ಬದ್ಧವಾಗಿದೆ. ರಾಜ್ಯದಾದ್ಯಂತ ಕಂದಾಯ ಮತ್ತು ಕೃಷಿ ಅಧಿಕಾರಿಗಳು ಇಂತಹ ಉಲ್ಲಂಘನೆಗಳ ವಿರುದ್ಧ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದ್ದಾರೆ. ರೈತರಿಗೆ ನಿಗದಿತ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನಗಳು ದೊರೆಯುವಂತೆ ಮಾಡಲು ಇಲಾಖೆಯು ಕಟಿಬದ್ಧವಾಗಿದೆ.