ಸಸ್ಯ ಆರೋಗ್ಯ ಚಿಕಿತ್ಸಾಲಯ-'ಕೃಷಿ ಸಂಜೀವಿನಿ' ಗೆ ಹಸಿರು ನಿಶಾನೆ: ಏನಿದರ ಉಪಯೋಗ..?
ಮುಖ್ಯಮಂತ್ರಿ ಬಿಎಸ್ ಯಡಿಯೂಪರಪ್ಪ ರವರು ಇಂದು (ಗುರುವಾರ) ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ - 'ಕೃಷಿ ಸಂಜೀವಿನಿ' ವಾಹನಗಳನ್ನು ಲೋಕಾರ್ಪಣೆ ಮಾಡಿದರು. ಹಾಗಾದ್ರೆ, ಏನಿದರ ಲಾಭ? ಯಾರಿಗೆಲ್ಲ ಉಪಯೋಗ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ರೈತರಿಗಾಗಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನವನ್ನು (ಕೃಷಿ ಸಂಜೀವಿನಿ) ಹಸಿರು ನಿಶಾನೆ ತೋರಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ಈ ವೇಳೆ DCM ಲಕ್ಷ್ಮಣ ಸವದಿ, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಚಿವ ಎಸ್.ಟಿ. ಸೋಮಶೇಖರ್ ಉಪಸ್ಥಿತರಿದ್ದರು.
ನೇರವಾಗಿ ಹೊಲಗಳಿಗೇ ಹೋಗುತ್ತವೆ 40 ಸಸ್ಯ ಆರೋಗ್ಯ ಚಿಕಿತ್ಸಾ ವಾಹನಗಳು..
ಈ ವೇಳೆ ಮಾತನಾಡಿದ ಸಿಎಂ B.S.ಯಡಿಯೂರಪ್ಪ “ರೈತರು ಬೆಳೆದ ಬೆಳೆಗಳ ಆರೋಗ್ಯ ತಪಾಸಣೆಗೆ ಈ ವಾಹನ ಸಹಕಾರಿಯಾಗಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ವಾಹನಗಳು ನೇರವಾಗಿ ಹೊಲಗಳಿಗೇ ಹೋಗುತ್ತವೆ. ಮಣ್ಣು, ನೀರು, ರೋಗ ಪರೀಕ್ಷೆ ಮಾಡುತ್ತವೆ. 40 ವಾಹನಗಳನ್ನು ಈಗ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ ” ಇದು ಸಿಎಂ ಬಿಎಸ್ವೈರ ಕನಸಿನ ಯೋಜನೆಯಾಗಿದೆ. ಬೆಳೆಗಳಲ್ಲಿ ಸಮಸ್ಯೆ ಇದ್ದರೆ ಸಹಾಯವಾಣಿ ಸಂಖ್ಯೆ- 155 313 ಕ್ಕೆ ಕರೆ ಮಾಡಬಹುದು ಎಂದು ಹೇಳಿದರು.
ನೇರವಾಗಿ ನಿಮ್ಮ ತೋಟದ ಬಳಿಯೇ ವಾಹನ ಬರುತ್ತೆ. ಬೆಳೆ ಸಮಸ್ಯೆ ಸಂಪೂರ್ಣ ಮಾಹಿತಿ ನೀಡಲಾಗುವುದು. ರಾಜ್ಯದ ಪ್ರತಿ ಜಿಲ್ಲೆಗೂ ಒಂದು ವಾಹನ ನೀಡಲಾಗಿದೆ” ಎಂದು ಹೇಳಿದ್ರು.