ಪೂಜ್ಯ ಕನ್ನಡಿಗರೇ,ಇಂದು ಹಂಸಲೇಖ ಅವರ ಹುಟ್ಟು ಹಬ್ಬ ಶುಭಾಶಯ ತಿಳ್ಸಿದ್ರಾ ?
ಪೂಜ್ಯ ಕನ್ನಡಿಗರೇ ನಮಸ್ಕಾರ ,ಇದು ಕನ್ನಡಿಗರು ಆಗಾಗ ಕೇಳುತ್ತಲೇ ಇರುವ ಮಾತು.ತಮ್ಮ ಸಾಹಿತ್ಯ,ಸಂಗೀತ ,ಮಾತು,ವಿಚಾರಗಳ ಮೂಲಕ ಜನರನ್ನು ತನ್ಮಯಗೊಳಿಸುತ್ತಾ ಅವಶ್ಯವಿದ್ದಾಗ ಬಡಿದೆಬ್ಬಿಸುತ್ತಾ ಸುಮಾರು ದಶಕಗಳಿಂದ ಕನ್ನಡದ ಸೇವೆ ಮಾಡುತ್ತಿರುವ ಸಂಗೀತದ ಮಹಾಗುರುಗಳಾದ ದೇಸಿ ದೊರೆ ಶ್ರೀ ನಾದಬ್ರಹ್ಮ ಹಂಸಲೇಖ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ನಾದಬ್ರಹ್ಮ ಖ್ಯಾತಿಯ ಹಂಸಲೇಖ ಇವರು ಜನಿಸಿದ್ದು ಜೂನ್ 23, 1951 ಮೈಸೂರಿನಲ್ಲಿ. ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಇವರ ಮೂಲ ಹೆಸರು "ಗಂಗರಾಜು".
1973 ರಲ್ಲಿ ಉದಯ ಕುಮಾರ್ ಅಭಿನಯದ "ತ್ರಿವೇಣಿ" ಚಿತ್ರದ "ನೀನಾ ಭಗವಂತ" ಹಾಡಿನ ಮೂಲಕ ಗೀತ ಸಾಹಿತಿಯಾಗಿ ಚಿತ್ರರಂಗವನ್ನು ಪ್ರವೇಶಿಸಿದರು.
ರಂಗಭೂಮಿ ಮತ್ತು ವಾದ್ಯಘೋಷ್ಠಿಗಳಲ್ಲಿ ವೃತ್ತಿ ಆರಂಭಿಸಿದ ಹಂಸಲೇಖ ಅವರು ರಾಹುಚಂದ್ರ ಚಿತ್ರದ ಮೂಲಕ ಸಿನಿವೃತ್ತಿ ಜೀವನ ಶುರುಮಾಡಿದರು.
ಹಂಸಲೇಖ ಅವರು ಕನ್ನಡ ಮಾತ್ರವಲ್ಲದೇ ದಕ್ಷಿಣಭಾರತದ ಇತರೆ ಭಾಷೆಗಳಲ್ಲಿಯೂ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕೇವಲ ಸಂಗೀತ ,ಸಾಹಿತ್ಯವಷ್ಟೇ ಅಲ್ಲ ಕಥೆ ,ಚಿತ್ರಕಥೆ ,ಸಂಭಾಷಣೆ ಹೀಗೆ ಎಲ್ಲಾ ವಿಭಾಗಗಳಲ್ಲೂ ದುಡಿದ ಹೆಗ್ಗಳಿಕೆ ಇವರದು.
1990ರಲ್ಲಿ ಹಿನ್ನಲೆ ಗಾಯಕಿ "ಲತಾ" ಅವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.ಲತಾ ಅವರು ಹಾಡಿರುವ "ಹಸಿರು ಗಾಜಿನ ಬಳೆಗಳೇ "ಹಾಡು ಕನ್ನಡದ ಜನಪ್ರಿಯ ಗೀತೆಗಳ ಪಟ್ಟಿಯಲ್ಲಿ ಇಂದಿಗೂ ಸ್ಥಾನ ಪಡೆದುಕೊಂಡಿದೆ.
ಈಶ್ವರಿ ಸಂಸ್ಥೆಯ ಕಾಣಿಕೆಯಾದ ಕನಸುಗಾರ ವಿ.ರವಿಚಂದ್ರನ್ ಅಭಿನಯದ, ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಪ್ರೇಮಲೋಕ ಚಿತ್ರದ ಹಾಡುಗಳು ಕನ್ನಡ ಸಿನಿಮಾ ಮತ್ತು ಹಾಡುಗಳ ಬಗೆಗಿದ್ದ ದೃಷ್ಠಿಕೋನವನ್ನೇ ಬದಲಿಸಿದ್ದು ಈಗ ಇತಿಹಾಸ .ಭಕ್ತಿ ,ಪ್ರೀತಿ,ವಿರಹ,ಪೋಲಿ ಹೀಗೆ ನಾನಾಬಗೆಯ ಹಾಡುಗಳನ್ನು ರಚಿಸಿ ,ಸಂಯೋಜಿಸಿದ ಕನ್ನಡ ಹೆಮ್ಮೆಯ ಪ್ರತಿಭೆ ಹಂಸಲೇಖ ಅವರು.
ಹಂಸಲೇಖ ಅವರಿಗೆ ಅಲಂಕಾರ್ ,ತೇಜಸ್ವಿನಿ ,ನಂದಿನಿ ಎಂಬ ಮೂವರು ಮಕ್ಕಳಿದ್ದಾರೆ .
ಕನ್ನಡ ಜನಪದಕ್ಕೆ ಹೊಸ ರೂಪ ನೀಡುವ ಸಲುವಾಗಿ ಹಂಸಲೇಖ ದೇಸಿ ಶಾಲೆಯನ್ನು ಸ್ಥಾಪಿಸಿದ್ದು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಹಂಸಲೇಖ ಅವರು ಸಂಗೀತ ನೀಡಿರುವ ಶಾಂತಿ ಚಿತ್ರ ಒಂದೇ ಪಾತ್ರವಿರುವ ಸಿನಿಮಾವೆಂದು ಗಿನ್ನೆಸ್ ದಾಖಲೆ ನಿರ್ಮಿಸಿದೆ.ಈ ಚಿತ್ರದ ನಿರ್ದೆಶಕರು ಬರಗೂರು ರಾಮಚಂದ್ರಪ್ಪ.
ಹಂಸಲೇಖ ಅವರ ಪ್ರತಿಭೆಯನ್ನು ಅದೆಷ್ಟೋ ಪ್ರಶಸ್ತಿ ಪುರಸ್ಕಾರಗಳು ಹುಡುಕಿ ಬಂದಿವೆ,ಈಗಲೂ ಬರುತ್ತಿವೆ.
ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ಹಾಡಿನ ಸ್ಪರ್ಧೆಯಲ್ಲಿ ಮಹಾಗುರುಗಳಾಗಿ ಸತ್ಯಪೀಠದಲ್ಲಿ ಕುಳಿತು ಸಾಹಿತ್ಯ ,ಸಂಗೀತ , ಹೋರಾಟ ಹೀಗೆ ಎಲ್ಲಾ ಬಗೆಯ ಜ್ಞಾನವನ್ನು ಸ್ಪರ್ಧಿಗಳಿಗಷ್ಟೆಯಲ್ಲದೇ ನೋಡುಗರಿಗೂ ತುಂಬುತ್ತಿದ್ದಾರೆ. ಇಂತಹ ಕನ್ನಡದ ಆಧುನಿಕ ಅಕ್ಷರಗಳ ಅಕ್ಕಸಾಲಿಗನಿಗೆ ಹುಟ್ಟು ಹಬ್ಬದ ಶುಭಾಶಯಗಳು.