ಪ್ರಜ್ಞಾವಂತರು ಹಣಕ್ಕೆ ಮತ ಮಾರಿಕೊಳ್ಳಲ್ಲ: ಡಿ.ಕೆ. ಶಿವಕುಮಾರ್
ಬೆಂಗಳೂರು(ನ.01): ಬಿಜೆಪಿಯವರು ರಾಜರಾಜೇಶ್ವರಿ ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳಲ್ಲೂ ಕಂತೆ ಕಂತೆ ಹಣ ಹಂಚುತ್ತಿದ್ದಾರೆ. ಅವರ ಹಣ ಹಂಚಿಕೆ ಬಗ್ಗೆ ನಮಗೆ ದಾಖಲೆಗಳು ಲಭ್ಯವಾಗಿದೆ. ಆದರೆ, ಪ್ರಜ್ಞಾವಂತ ಮತದಾರರು ಹಣಕ್ಕೆ ತಮ್ಮ ಅಮೂಲ್ಯ ಮತಗಳನ್ನು ಮಾರಿಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿದ ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಯಾವ ಕ್ಷೇತ್ರದಲ್ಲೂ ಯಾವುದೇ ಆಮಿಷವೊಡ್ಡಿ ಮತ ಕೇಳುತ್ತಿಲ್ಲ. ಜನಸೇವೆಗಾಗಿ ಬಂದಿರುವ ನಮ್ಮ ಪಕ್ಷಗಳ ಅಭ್ಯರ್ಥಿಗಳ ಮೇಲೆ ವಿಶ್ವಾಸವಿಟ್ಟು, ನಮ್ಮ ಪಕ್ಷದ ಸರ್ಕಾರ ಹಿಂದೆ ಮಾಡಿರುವ ಸಾಧನೆ, ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದೇವೆ. ಆದರೆ, ಬಿಜೆಪಿಯವರು ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಕೋಟಿ ಕೋಟಿ ಹಣ ಹಂಚಿ ಮತ ಖರೀದಿ ನಡೆಸುತ್ತಿದ್ದಾರೆ ಎಂದರು.
ಮುನಿರತ್ನ ಅವರು ರಾಜರಾಜೇಶ್ವರಿ ಆಣೆಗೂ ನಾನು ಹಣ ತೆಗೆದುಕೊಂಡು ಬಿಜೆಪಿ ಸೇರಿಲ್ಲ. ಈ ಬಗ್ಗೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದಿದ್ದಾರಲ್ಲಾ ಎಂಬ ಪ್ರಶ್ನೆಗೆ, ಆಣೆ ಪ್ರಮಾಣದ ಬಗ್ಗೆ ಉಪ ಚುನಾವಣೆ ಬಳಿಕ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು.
ಮುನಿರತ್ನ ಪರ ನಟ ದರ್ಶನ್ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ದರ್ಶನ್ ಓರ್ವ ಸಿನಿಮಾ ನಟ. ನನಗೂ ಸಹ ಅವರ ಪರಿಚಯ ಇದೆ. ನಾನು ಕರೆದರೂ ಬಂದು ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡುತ್ತಾರೆ. ಅವರ ಅಭಿಮಾನಿಗಳ ಮತ ಸೆಳೆಯುವ ಕೆಲಸ ಬಿಜೆಪಿಯವರು ಮಾಡಿದ್ದಾರೆ ಮಾಡಿಕೊಳ್ಳಲಿ ಎಂದು ಹೇಳಿದರು.