August 2023 ರಾಜಕೀಯ ಬೆಳವಣಿಗೆ: ರಾಜ್ಯದಲ್ಲಿ ಗೃಹಲಕ್ಷ್ಮಿ ಗಿಫ್ಟ್, ಇರಾನಿಗೆ ರಾಹುಲ್ ಫ್ಲೈಯಿಂಗ್ ಕಿಸ್!
2023ರ ಆಗಸ್ಟ್ ತಿಂಗಳಿನಲ್ಲಿ ಭಾರತ ಮತ್ತು ಕರ್ನಾಟಕದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ. ಏನೆಲ್ಲ ಘಟನೆಗಳು, ಬೆಳವಣಿಗೆಗಳು ನಡೆದವು ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.
ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ವದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30ರಂದು ಚಾಲನೆ ದೊರೆಯಿತು. ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ. ಸಹಾಯ ಧನವನ್ನು ಮಹಿಳೆಯರಿಗೆ ನೀಡುತ್ತಿದೆ. ಮೈಸೂರಿನಲ್ಲಿ ರಾಹುಲ್ ಗಾಂಧಿಯವರು ಯೋಜನೆಗೆ ಚಾಲನೆ ನೀಡಿದರು. ಇದಕ್ಕಾಗಿ ಹಣಕಾಸು ವರ್ಷದಲ್ಲಿ 17,500 ಕೋಟಿ ಖರ್ಚಾಗಲಿದೆ.
![article_image2](https://static-ai.asianetnews.com/images/01h9b8zyr63vtzkty8g15j4trr/dk_300x168xt.jpg)
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಆಗಸ್ಟ್ನಲ್ಲಿ ಭಾರತದ ವಿವಿಧ ರಾಜಕೀಯ ಪಕ್ಷಗಳ ಶಾಸಕರ ಆಸ್ತಿಗಳ ಸಮಗ್ರ ವಿವರ ಬಿಡುಗಡೆ ಮಾಡಿತು. ಅತಿ ಹೆಚ್ಚು ಕೋಟ್ಯಾಧಿಪತಿ ಶಾಸಕರನ್ನು ಹೊಂದಿರುವ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿತ್ತು. ಎಡಿಆರ್ ವರದಿ ಪ್ರಕಾರ ಭಾರತದಲ್ಲಿ ಒಬ್ಬ ಎಂಎಲ್ ಎ ಸರಾಸರಿ ಆಸ್ತಿ 13.63 ಕೋಟಿ ರೂ. ಆಸ್ತಿ ಹೊಂದಿದ್ದಾನೆ. ಕರ್ನಾಟಕದ 223 ಶಾಸಕರು ಸರಾಸರಿ 64.39 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಆಂಧ್ರಪ್ರದೇಶವು ಸರಾಸರಿ 28.24 ಕೋಟಿ ರೂಪಾಯಿಗಳೊಂದಿಗೆ 174 ಶಾಸಕರನ್ನು ಹೊಂದಿದೆ ಮತ್ತು ಮಹಾರಾಷ್ಟ್ರವು 23.51 ಕೋಟಿ ರೂಪಾಯಿಗಳೊಂದಿಗೆ 284 ಶಾಸಕರನ್ನು ಹೊಂದಿದೆ. ತ್ರಿಪುರಾ ಪ್ರತಿ ಎಂಎಲ್ಎಗೆ ಅತ್ಯಂತ ಕಡಿಮೆ ಸರಾಸರಿ ಆಸ್ತಿಯನ್ನು ಹೊಂದಿದೆ, 59 ಶಾಸಕರು ಸರಾಸರಿ 1.54 ಕೋಟಿ ರೂ.
ರಾಹುಲ್ ಗಾಂಧಿಯವರ ಲೋಕಸಭೆಯ ಸದಸ್ಯತ್ವ ಮರಳಿ ಬಂದಿದ್ದು ಕೂಡ ಆಗಸ್ಟ್ ತಿಂಗಳಿನಲ್ಲಿ. ಮೋದಿ ಉಪನಾಮಕ್ಕೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಲೋಕಸಭೆ ಸದಸ್ಯತ್ವ ಮರುಸ್ಥಾಪನೆಗೊಂಡಿತು. ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆಗಷ್ಟ್ 4 ರಂದು ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್ ದೊರೆತಿತು. 2019 ರ ಈ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ನ ತ್ರಿಸದಸ್ಯತ್ವ ಪೀಠ ತಡೆ ನೀಡಿತು.
ಮಣಿಪುರ ಹಿಂಸಾಚಾರ ವಿಚಾರವಾಗಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಆದರೆ, ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ಭಾರಿ ವಾಗ್ದಾಳಿ ನಡೆಸಿದರು, ಹಾಗೂ ಭಾಷಣದ ನಂತರ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಮತದಾನ ನಡೆದಿದ್ದು, ಇದಕ್ಕೆ ಹೀನಾಯ ಸೋಲು ಕಂಡಿತು. ಮೋದಿ ಭಾಷಣ ಮಾಡುವ ವೇಳೆ ಪ್ರತಿಪಕ್ಷಗಳ ಸಂಸದರು ಲೋಕಸಭೆಯಿಂದ ಹೊರ ನಡೆದ ಹಿನ್ನೆಲೆ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಯಿತು.
ಹಿಂದೊಮ್ಮೆ ಸದನದಲ್ಲಿ ಕಣ್ಣುಹೊಡೆದು ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆಂದು ದೇಶದಾದ್ಯಂತ ಸುದ್ದಿಯಾಗಿದ್ದರು. ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ 21 ಮಂದಿ ಮಹಿಳಾ ಸಂಸದರು ಸ್ಪೀಕರ್ ಓಂ ಬಿರ್ಲಾಗೆ ಈ ಬಗ್ಗೆ ಲಿಖಿತ ದೂರು ಕೂಡ ನೀಡಿದ್ದರು. ಇದರ ಮೂಲ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿರಲಿಲ್ಲ. ಲೋಕಸಭೆಯಿಂದ ಅವರು ಹೊರಹೋಗುವ ವೇಳೆ ಆಡಳಿತ ಪಕ್ಷದ ಮಹಿಳಾ ಸಂಸದರಿದ್ದ ಕಡೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.