ಕ್ವಾರಂಟೈನ್ ಸಮಯದಲ್ಲಿ ಅಶ್ವಥ್ ನಾರಾಯಣ್ ಬರೆದ್ರು 'ನನ್ನ ಕ್ವಾರಂಟೈನ್ ಡೈರಿ'
ಕೊರೋನಾ ಸೋಂಕಿತ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದರಿಂದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ಕ್ವಾರಂಟೈನ್ಗೆ ಒಳಗಾಗಿದ್ದ, ಇದೀಗ ಅವರ ಕ್ವಾರಂಟೈನ್ ಮುಗಿದೆ. ಹಾಗಾದ್ರೆ ಅಶ್ವಥ್ ನಾರಾಯಣ್ ಕ್ವಾರಂಟೈನ್ ಸಮಯವನ್ನು ಹೇಗೆಲ್ಲಾ ಕಳೆದರು ಎಂಬುವುದರ ಬಗ್ಗೆ 'ನನ್ನ ಕ್ವಾರಂಟೈನ್ ಡೈರಿ'ಯಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಏನೆಲ್ಲಾ ಬರೆದಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.
ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರ 'ನನ್ನ ಕ್ವಾರಂಟೈನ್ ಡೈರಿ' ಇಲ್ಲಿಂದ ಆರಂಭ
ಕ್ವಾರಂಟೈನ್ ನಲ್ಲಿ ಕೆಲವು ದಿನಗಳು ಕಳೆದಿರುವುದು ಒಂದು ಹೊಸ ರೀತಿಯ ಅನುಭವವಾಗಿತ್ತು. ಈ ಬಗ್ಗೆ ನನ್ನ ಹಲವು ವಿಚಾರಗಳನ್ನು ಒಂದು ಸಣ್ಣ ಡೈರಿ ಬರವಣಿಗೆಯ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.
ರಾಜಕಾರಣಕ್ಕೆ ಬರುವ ಮುನ್ನ, ಬಂದ ನಂತರ ಸದಾ ಕ್ರಿಯಾಶೀಲನಾಗಿರುವ ನನಗೆ ಕೋವಿಡ್ ಕಾರಣಕ್ಕೆ ಸ್ವತಃ ಕ್ವಾರಂಟೈನ್ಗೆ ಒಳಗಾಗಿ ಹಲವು ದಿನ ಮನೆಯಲ್ಲೇ ಉಳಿಯಬೇಕಾಗಿ ಬಂದಿದ್ದು ನನ್ನನ್ನು ನಾನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಸಿಕ್ಕಿದ ಅವಕಾಶ ಎಂದು ನಿಸ್ಸಂಶಯವಾಗಿ ಹೇಳಬಲ್ಲೆ.
ಸಾಮಾನ್ಯ ವ್ಯಕ್ತಿ ಇರಲಿ, ರಾಜಕಾರಣಿಯೇ ಇರಲಿ ಅಥವಾ ಇನ್ನು ಯಾವುದೇ ಕ್ಷೇತ್ರದ ಪ್ರಮುಖನೇ ಆಗಲಿ, ಯಾರೇ ಆದರೂ ಸ್ವಯಂ ದಿಗ್ಭಂಧನಕ್ಕೆ ಒಳಗಾಗಿ ಮನೆಯ ಹೊಸಿಲು ದಾಟದೇ ಹತ್ತಾರು ದಿನ ಗೋಡೆಗಳ ಮಧ್ಯೆಯೇ ಒತ್ತಾಯಪೂರ್ವಕವಾಗಿ ಉಳಿಯುವುದು ಸಾಮಾನ್ಯ ಸಂಗತಿಯಲ್ಲ.
ನಾನೊಬ್ಬ ರಾಜಕಾರಣಿ, ಶಾಸಕ, ಉಪ ಮುಖ್ಯಮಂತ್ರಿ ಎನ್ನುವ ಟ್ಯಾಗ್ಲೈನುಗಳನ್ನು ಆಚೆಗಿಟ್ಟು ಸಾಮಾನ್ಯನಂತೆ ಕ್ವಾರಂಟೈನ್ ನ ರೀತಿ-ರಿವಾಜುಗಳನ್ನು ಅನುಸರಿಸಿದ್ದೇನೆ. ಅದರ ಅಗತ್ಯಗಳನ್ನು, ನಿಬಂಧನೆಗಳನ್ನು ಶಿರಸಾ ಪಾಲಿಸಿದ್ದೇನೆ.
ಕೆಲವೊಮ್ಮೆ ಇಂಥ ಸಂದರ್ಭಗಳು ವ್ಯಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಹಾಗೂ ಪಾಲೀಶ್ ಮಾಡುತ್ತವೆ ಎಂಬ ಬಲವಾದ ಭಾವನೆ ನನ್ನದು. ಆದರೂ, ಒಂದೆಡೆ ರಾಜ್ಯವನ್ನು ಕೋವಿಡ್ ಮಾರಿ ಆವರಿಸಿದ್ದ ಹೊತ್ತಿನಲ್ಲಿ ಹಗಲಿರುಳು ಜನಸೇವೆ ಮಾಡಬೇಕಾಗಿದ್ದ ನಾನು ಸ್ವತಃ ದಿಗ್ಭಂಧನಕ್ಕೆ ಸಿಲುಕಿದ್ದು ಅತೀವ ದುಃಖವನ್ನುಂಟು ಮಾಡಿತ್ತು.
ಮತ್ತೊಂದೆಡೆ ವಿವಿಧ ಜವಾಬ್ದಾರಿಗಳು, ನಿರ್ವಹಿಸಲೇಬೇಕಾದ ಹೊಣೆಗಾರಿಕೆಗಳು, ರಾಜ್ಯ ಮತ್ತು ಕ್ಷೇತ್ರದ ಕೆಲಸ, ಜನರು ಮತ್ತು ಪಕ್ಷದ ಕಾರ್ಯಕರ್ತರ ದಿನನಿತ್ಯದ ಪರಾಮರ್ಶೆ.. ಹೀಗೆ, ನನಗೆ ಕೊಂಚ ಆತಂಕ ಉಂಟಾದರೂ ಈ ಬಗೆಯ ಅನುಭವವೊಂದು ನನಗೂ ಅನಿವಾರ್ಯವಾಗಿತ್ತೇನೋ ಎಂಬ ಅನಿಸಿಕೆ ಈಗೀಗ ಬರುತ್ತಿದೆ.
ಅನಿರೀಕ್ಷಿತವಾಗಿ ನನ್ನ ಪಾಲಿಗೆ ಬಂದ ಈ ದಿಗ್ಭಂದನ ನನಗೆ ಹಲವು ಪಾಠಗಳನ್ನು ಕಲಿಸಿದೆ. ಆದರೂ ಇಂಥ ಪ್ರಮೇಯ ಎಲ್ಲರಿಗೂ ಬರುವುದು ಬೇಡ ಎಂಬುದು ನನ್ನ ಆಶಾಭಾವನೆ. ನನ್ನ ಕ್ವಾರಂಟನ್ ಡೈರಿ ತಮಗಿಷ್ಟವಾದರೆ ಒಂದು ಪ್ರೀತಿಯ ಪ್ರತಿಕ್ರಿಯೆ ಇರಲಿ. ಸದಾ ನಿಮ್ಮ ಸೇವೆಯಲ್ಲಿ…