ಶಿರಾ ಬೈ ಎಲೆಕ್ಷನ್ಗೆ ಕಾಂಗ್ರೆಸ್ ರಣಕಹಳೆ: ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಉಸ್ತುವಾರಿ ನೇಮಕ
ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಆರಂಭಿಕ ತೊಡಕಾಗಿದ್ದ ಕೆ.ಎನ್.ರಾಜಣ್ಣ ಬಂಡಾಯ ಸದ್ಯಕ್ಕೆ ಶಮನವಾಗಿದೆ. ಈ ಚುನಾವಣೆ ಉಸ್ತುವಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತುಮಕೂರು ಜಿಲ್ಲೆಯ ಇಬ್ಬರು ನಾಯಕರ ಹೆಗಲಿಗೆ ಹಾಕಿದ್ದಾರೆ. ಅಲ್ಲದೆ ಇಂದಿನಿಂದಲೇ(ಬುಧವಾರ) ಚುನಾವಣಾ ಚಟುವಟಿಕೆ ಶುರು ಮಾಡುವ ಮುನ್ಸೂಚನೆಯನ್ನೂ ಕೊಟ್ಟಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು (ಬುಧವಾರ) ತುಮಕೂರು ಕಾಂಗ್ರೆಸ್ ನಾಯಕರ ಸಭೆ ನಡೆಯಿತು.
ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಮಾಜಿ ಸಚಿವ ಟಿ.ಬಿ ಜಯಚಂದ್ರ, ಮಾಜಿ ಸಂಸದ ಮುದ್ದಹನುಮೇಗೌಡ, ಬಿ.ಎನ್ ಚಂದ್ರಪ್ಪ, ಮಾಜಿ ಶಾಸಕ ಕೆ.ಎನ್ ರಾಜಣ್ಣ ಸೇರಿದಂತೆ ಮತ್ತಿತರರ ನಾಯಕರು ಪಾಲ್ಗೊಂಡಿದ್ದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಟಿ.ಬಿ. ಜಯಚಂದ್ರ ಅವರನ್ನು ಶಿರಾ ಬೈ ಲೆಕ್ಷನ್ಗೆ ಕಾಂಗ್ರೆಸ್ನ ಅಭ್ಯರ್ಥಿಯನ್ನಾ ಆಯ್ಕೆ ಮಾಡಲಾಗಿದೆ.
ಶಿರಾ ಕ್ಷೇತ್ರದ ಉಪಚುನಾವಣೆಯನ್ನು ಡಾ. ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ಎದುರಿಸಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಇನ್ನು ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಕೋಚೇರ್ಮನ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ತನ್ನ ಸೋಲಿಗೆ ನಮ್ಮದೇ ಪಕ್ಷದ ನಾಯಕರ ಕೈವಾಡವಿತ್ತು ಎಂದೂ ಅಸಮಾಧಾನ ಹೊರಹಾಕಿದ್ದರು. ರಾಜಣ್ಣ ಕೈ ಬಂಡಾಯ ಅಭ್ಯರ್ಥಿ ಆಗಲಿದ್ದಾರೆ ಎಂದೇ ಸುದ್ದಿಯಾಗಿತ್ತು. ಇದರಿಂದ ಪಕ್ಷಕ್ಕಾಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾದ ಡಿಕೆಶಿ, ಬುಧವಾರ ಬೆಳಗ್ಗೆ ತುಮಕೂರು ಜಿಲ್ಲೆಯ ಡಾ.ಜಿ. ಪರಮೇಶ್ವರ್, ಟಿ.ಬಿ.ಜಯಚಂದ್ರ, ಎಸ್.ಪಿ. ಮುದ್ದಹನುಮೇಗೌಡ, ಚಂದ್ರಪ್ಪ, ಷಡಕ್ಷರಿ ಹಾಗೂ ರಾಜಣ್ಣ ಪುತ್ರ ರಾಜೇಂದ್ರ ಅವರನ್ನೊಳಗೊಂಡ ಸಭೆ ನಡೆಸಿ, ರಾಜಣ್ಣ ಮತ್ತು ಪರಮೇಶ್ವರ್ ಹೆಗಲಿಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ವಹಿಸುವಲ್ಲಿ ಸಫಲರಾಗಿದ್ದಾರೆ.