‘ಗೂಂಡಾಗಿರಿ ರಾಜಕಾರಣ’ ನಿಲ್ಲಿಸಲು ಜನರ ನಿರ್ಧಾರ: ಕಾಂಗ್ರೆಸ್- ಜೆಡಿಎಸ್ ಮುಖಂಡರು ಬಿಜೆಪಿಗೆ ಸೇರ್ಪಡೆ
ಬೆಂಗಳೂರು(ಅ.19): ಕನಕಪುರ ಸೇರಿ ಎಲ್ಲೆಲ್ಲಿಂದಲೋ ಬಂದು ‘ಗೂಂಡಾಗಿರಿ ರಾಜಕಾರಣ’ ಮಾಡುವುದನ್ನು ನಿಲ್ಲಿಸಲು ರಾಜರಾಜೇಶ್ವರಿ ನಗರ ಕ್ಷೇತ್ರದ ಜನ ನಿರ್ಧರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಪರೋಕ್ಷವಾಗಿ ಡಿ.ಕೆ.ಸಹೋದರರ ವಿರುದ್ಧ ಕಿಡಿಕಾರಿದ್ದಾರೆ.
ಭಾನುವಾರ ಪಕ್ಷದ ಕಚೇರಿಯಲ್ಲಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಜಿ ಪಾಲಿಕೆ ಸದಸ್ಯರು ಹಾಗೂ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ಅವರು, ಸ್ವಾಮಿ ನಿಮ್ಮ ಬಳಿ ಬಂಡೆ ಇರಬಹುದು. ಆದರೆ, ಕಾಂಗ್ರೆಸ್ನಿಂದ ಬಂದ ಡೈನಮೆಟ್ಗಳು ನಮ್ಮ ಬಳಿ ಇವೆ. ಅವು ಬಂಡೆಯನ್ನು ಪುಡಿ ಮಾಡಲಿವೆ. ಕಾಂಗ್ರೆಸ್ ಗೂಂಡಾಗಿರಿ ರಾಜಕಾರಣವನ್ನು ಜನ ಸಹಿಸುತ್ತಿಲ್ಲ. ಇದರಿಂದ ಕಾಂಗ್ರೆಸ್ ಮನೆ ಈಗ ಖಾಲಿ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್.ಆರ್.ನಗರದ ಜನ ಅಭಿವೃದ್ಧಿ ಬಯಸಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ರಾಜ್ಯದಲ್ಲಿ ಹಿಂದಿನ ಆರು ವರ್ಷಗಳ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿತ್ತು. ರೈತರ ಆತ್ಮಹತ್ಯೆಗಳು ಹೆಚ್ಚಿದ್ದವು. ಸಮಾಜ ಒಡೆಯುವ ಪ್ರವೃತ್ತಿ ಇತ್ತು. ಆದರಿಂದ ಯಾವ ಬಂಡೆಯೂ ನಮಗೆ ಲೆಕ್ಕಕ್ಕಿಲ್ಲ ಎಂದು ಹೇಳಿದ್ದಾರೆ.
ತಿಹಾರ್ ಜೈಲಿನಲ್ಲಿ ಇದ್ದಾಗ ನೀವು ಇತಿಹಾಸ ಓದಿದ್ದೀರಾ ಅಥವಾ ಬರೆದಿದ್ದೀರಾ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, ಜೈಲಿಗೆ ಹೋದಾಗ ಮೆರವಣಿಗೆ, ಜೈಲಿನಿಂದ ಬಂದಾಗ ಮೆರವಣಿಗೆ ಮಾಡುತ್ತೀರಿ. ಜನ ಈಗಾಗಲೇ ನಿಮ್ಮನ್ನು ಮನೆಯಲ್ಲಿ ಕೂರಿಸಿ, ಬಿಜೆಪಿ ಗೆಲ್ಲಿಸಲು ತೀರ್ಮಾನ ಮಾಡಿದ್ದಾರೆ. ಮುನಿರತ್ನ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು, ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಔಷಧಿ, ಆಹಾರ ಪೊಟ್ಟಣ ವಿತರಣೆ ಮಾಡಿರುವುದನ್ನು ನೋಡಿದರೆ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಂದಾಯ ಸಚಿವ ಆರ್.ಅಶೋಕ, ಪಕ್ಷದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಅಭ್ಯರ್ಥಿ ಮುನಿರತ್ನ, ವಿಭಾಗ ಪ್ರಭಾರಿ ಗೋಪಿನಾಥ ರೆಡ್ಡಿ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಇದ್ದರು.
ಮಾಜಿ ಮೇಯರ್ ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀನಿವಾಸಮೂರ್ತಿ, ಜಿ.ಕೆ.ವೆಂಕಟೇಶ್, ಆಶಾ ಸುರೇಶ್, ವೇಲು ನಾಯ್ಕರ್, ಮಂಜುಳಾ ನಾರಾಯಣಸ್ವಾಮಿ, ಸಿದ್ಧಗೌಡ, ಮೋಹನ್ಕುಮಾರ್, ವೆಂಕಟೇಶ್ ಬಾಬು, ಗೋವಿಂದರಾಜು, ರಾಮಚಂದ್ರ, ನಗರಸಭಾ ಮಾಜಿ ಸದಸ್ಯ ಕಮಲೇಶ್ ಸೇರಿದಂತೆ ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಆರ್.ಆರ್.ನಗರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿಬಿಎಂಪಿಯ ಮಾಜಿ ಸದಸ್ಯರೂ ಆಗಿರುವ ರಾಮಚಂದ್ರ ಬಿಜೆಪಿಗೆ ವಾಪಸಾದರು.
ಸಂಜೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಹಾಲಿ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ರಾಮಚಂದ್ರ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸುವ ಮೂಲಕ ಮನವೊಲಿಸುವಲ್ಲಿ ಸಫಲರಾದರು. ಬಿಜೆಪಿಯಲ್ಲಿ ತಮಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿಯೇ ರಾಮಚಂದ್ರ ಅವರು ಕಳೆದ ಚುನಾವಣೆಯಲ್ಲಿ ಜೆಡಿಎಸ್ಗೆ ವಲಸೆ ಹೋಗಿದ್ದರು.