ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ: ಸಿಎಂ ಬಿಎಸ್ವೈ ದಾಖಲೆ
ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಈ ನಡುವೆಯೇ ಇಂದು (ಶುಕ್ರವಾರ) ಸಿಎಂ ಬಿಎಸ್ ಯಡಿಯೂರಪ್ಪ ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ಈ ಮೂಲಕ ದಾಖಲೆ ಬರೆದಿದ್ದಾರೆ.
ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಕೆಆರ್ಎಸ್ನಲ್ಲಿ ಕಾವೇರಿ ಮಾತೆಗೆ ಐದನೇ ಬಾರಿ ಬಾಗಿನ ಸಮರ್ಪಣೆ ಮಾಡಿದರು.
ವೈದಿಕ ಭಾನುಪ್ರಕಾಶ್ ಶರ್ಮಾ ಅವರು ಬಾಗಿನ ಸಮರ್ಪಣೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಈಗಾಗಲೇ 4 ಬಾರಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸಿರುವ ಯಡಿಯೂರಪ್ಪ ಅವರು 5ನೇ ಬಾರಿ ಬಾಗಿನ ಅರ್ಪಿಸಿ ಹೆಗ್ಗಳಿಕೆಗೆ ಪಾತ್ರರಾದರು.
2018ರ ಆಗಸ್ಟ್ ತಿಂಗಳಿನಲ್ಲಿ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೂಲಕ ಹೆಚ್ಚಿನ ಬಾರಿ ಬಾಗಿನ ಅರ್ಪಿಸಿದ ಕೀರ್ತಿಗೆ ಯಡಿಯೂರಪ್ಪ ಪಾತ್ರರಾಗಿದ್ದಾರೆ.
ಕಳೆದ ವರ್ಷ ಆಗಸ್ಟ್ 21ರಂದು ಕೆಆರ್ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಬಾಗಿನ ಅರ್ಪಿಸಿದ್ದರು. ಕಾಕತಾಳೀಯವೆಂಬಂತೆ ಈ ವರ್ಷ ಕೂಡ ಜಲಾಶಯ ಆಗಸ್ಟ್ ತಿಂಗಳಿನಲ್ಲಿ ಪುನಃ ಭರ್ತಿಯಾಗಿರುವುದರಿಂದ ಮುಖ್ಯಮಂತ್ರಿಗಳು ಆಗಸ್ಟ್ 21 ರಂದು ಬಾಗಿನ ಅರ್ಪಿಸಿರುವುದು ವಿಶೇಷ.
ಸತತ 5 ಬಾರಿ ಸಿಎಂ ಬಿಎಸ್ವೈ ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದಾರೆ. ಇದರೊಂದಿಗೆ ಕಾವೇರಿ ನದಿಗೆ ಅತೀ ಹೆಚ್ಚು ಸಲ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಸಂಸದೆ ಸುಮಲತಾ ಅಂಬರೀಶ್ ಮತ್ತು ಇತರೆ ಗಣ್ಯರು ಸ್ಥಳದಲ್ಲಿ ಹಾಜರಿದ್ದರು.