ಪ್ರಕೃತಿ ವಂದನಾ ಪೂಜೆ ನೆರವೇರಿಸಿದ ಶ್ರೀರಾಮುಲು, ಯುವ ಪೀಳಿಗೆಗೆ ಕರೆ ಕೊಟ್ಟ ಸಚಿವರು
ಹಿಂದೂ ಆಧ್ಯಾತ್ಮಿಕ ಸೇವಾ ಮೇಳ (HSSF) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಸರ ಸಂರಕ್ಷಣೆ ಗತಿವಿಧಿಯ ಜಂಟಿ ಸಹಭಾಗಿತ್ವದಲ್ಲಿ ಪ್ರಕೃತಿ ವಂದನಾ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಅಗಸ್ಟ್ 30, 2020ರ ಭಾನುವಾರದಂದು ಬೆಳಿಗ್ಗೆ 10 ರಿಂದ 12 ರ ತನಕ ರಾಷ್ಟ್ರದಾದ್ಯಂತ ಆಯೋಜಿಸಿತ್ತು. ಅದರಂತೆ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಸಚಿವ ಶ್ರೀರಾಮುಲು ಅವರು ಪ್ರಕೃತಿ ವಂದನಾ ಪೂಜೆ ನೆರವೇರಿಸಿದರು.
ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಇಂದು (ಭಾನುವಾರ) ತಮ್ಮ ನಿವಾಸದಲ್ಲಿ ವಿಶೇಷ ಪ್ರಕೃತಿ ವಂದನಾ ಪೂಜೆ ನೆರವೇರಿಸಿದರು.
ನಮ್ಮ ಪವಿತ್ರ ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿಯಲ್ಲಿಯೂ ದೈವ ಸ್ವರೂಪವನ್ನು ಕಾಣಲಾಗುತ್ತದೆ. ಇಂತಹ ಆಚರಣೆಗಳೇ ನಮ್ಮ ಯುವ ಪೀಳಿಗೆಗೆ ಪ್ರಕೃತಿಯ ಮಹತ್ವವನ್ನು ಸಾರುತ್ತವೆ. ಅವರಲ್ಲಿ ಆರೋಗ್ಯಯುತ ಪರಿಸರದ ಜಾಗೃತಿ ಬೆಳೆಸುತ್ತವೆ. ಗಿಡ ಮರಗಳನ್ನು ಪೋಷಿಸೋಣ, ಸ್ವಸ್ಥ ಸಮಾಜ ಕಟ್ಟೋಣ ಎಂದು ಕರೆ ಕೊಟ್ಟರು.
ಪೂಜೆ ಬಳಿಕ ಗೋಮಾತೆಗೆ ಫಲ ಆಹಾರ ನೀಡಿದ ರಾಮುಲು
ಇತ್ತ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಇಂದು (ಭಾನುವಾರ) 'ಪ್ರಕೃತಿ ವಂದನಾ' ಕಾರ್ಯಕ್ರಮ ಜರುಗಿತು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಲ್ವ ಸಸಿ ನೆಟ್ಟು ಪೂಜೆ ಸಲ್ಲಿಸಿದರು.