ಲಂಡನ್ನಲ್ಲಿ ಎಂಬಿಎ ಓದಿದ 28 ವರ್ಷದ ಆಕಾಶ್ ಆನಂದ್ ಮಾಯಾವತಿಯ ರಾಜಕೀಯ ವಾರಸ್ದಾರ!
ಪಕ್ಷದ ಪದಾಧಿಕಾರಿಗಳ ಪ್ರಮುಖ ಸಭೆಯ ನಂತರ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಘೋಷಿಸಿದ್ದಾರೆ. ಈ ಹಿನ್ನೆಲೆ ಮಾಯಾವತಿರಾಜಕೀಯ ನಿವೃತ್ತಿ ಘೋಷಿಸ್ತಾರಾ ಎಂಬ ಮಾತೂ ಕೇಳಿಬರುತ್ತಿದೆ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಘೋಷಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಗೂ ಮುನ್ನ ಅಚ್ಚರಿಯ ಬೆಳವಣಿಗೆ ನಡೆದಿದೆ.
ಇಂದು ಬೆಳಿಗ್ಗೆ ನಡೆದ ಪಕ್ಷದ ಪದಾಧಿಕಾರಿಗಳ ಪ್ರಮುಖ ಸಭೆಯ ನಂತರ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಘೋಷಿಸಿದ್ದಾರೆ.
ಮಾಯಾವತಿ ನಂತರ ಅವರ ಸೋದರಳಿಯ, 28 ವರ್ಷದ ಆಕಾಶ್ ಆನಂದ್ ಪಕ್ಷದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಆದರೆ ಸದ್ಯಕ್ಕೆ ಯುಪಿ ಮಾಜಿ ಮುಖ್ಯಮಂತ್ರಿಯೇ ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.
ಆಕಾಶ್ ಆನಂದ್ ಯಾರು?
ಮಾಯಾವತಿಯವರ ರಾಜಕೀಯ ಉತ್ತರಾಧಿಕಾರಿ ಎಂದು ಹೆಸರಿಸಲಾದ ಆಕಾಶ್ ಆನಂದ್ ಅವರ ಸೋದರಳಿಯ. ಇವರು ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ.
ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಎಸ್ಪಿಯ ಉಸ್ತುವಾರಿಯಾಗಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರು ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ತೆಲಂಗಾಣದಲ್ಲಿ ಬಿಎಸ್ಪಿಗಾಗಿ ವ್ಯಾಪಕವಾಗಿ ಕೆಲಸವನ್ನೂ ಮಾಡಿದ್ದಾರೆ.
ದಲಿತರು, ಧಾರ್ಮಿಕ ಅಲ್ಪಸಂಖ್ಯಾತರು, ಒಬಿಸಿ ಮತ್ತು ಬುಡಕಟ್ಟು ಜನಾಂಗದವರ ಸಮಸ್ಯೆಗಳನ್ನು ಒಳಗೊಂಡ ಪಕ್ಷದ ಚುನಾವಣಾ ಪ್ರಚಾರವನ್ನು ತಯಾರಿಸಲು ಮತ್ತು ಪ್ರಾರಂಭಿಸಲು ನಿಯೋಗದ ಭಾಗವಾಗಿ ಮಾಯಾವತಿ ಆಕಾಶ್ ಆನಂದ್ ರನ್ನು ನಿಯೋಜಿಸಿದ್ದರು ಎಂದು ತಿಳಿದುಬಂದಿದೆ.
ಆಕಾಶ್ ಆನಂದ್ 2017 ರಲ್ಲಿ 22ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾಯಾವತಿಯವರೊಂದಿಗೆ ರಾಜಕೀಯ ಚೊಚ್ಚಲ ಪ್ರವೇಶ ಮಾಡಿದ್ದರು. ಅಲ್ಲಿ ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ರೊಂದಿಗೆ ವೇದಿಕೆ ಹಂಚಿಕೊಂಡರು.
ನಂತರ 2019 ರಲ್ಲಿ, ಆಕಾಶ್ ಆನಂದ್ ಉತ್ತರ ಪ್ರದೇಶದ ಆಗ್ರಾದಲ್ಲಿ ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಬಿಎಸ್ಪಿ ಆಗ ಮಹಾಘಟಬಂಧನ್ನ ಭಾಗವಾಗಿತ್ತು.
ಈ ವರ್ಷದ ಆರಂಭದಲ್ಲಿ, ಪಾದಯಾತ್ರೆಗಳನ್ನು ಆಯೋಜಿಸದಿರುವ ಪಕ್ಷದ ಸಾಮಾನ್ಯ ಕಾರ್ಯತಂತ್ರದಿಂದ ಪ್ರಮುಖ ಬದಲಾವಣೆಯಲ್ಲಿ, ಆಕಾಶ್ ಆನಂದ್ 14 ದಿನಗಳ 'ಸರ್ವಜನ್ ಹಿತಯ್, ಸರ್ವಜನ್ ಸುಖಯ್' ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಿದರು.
ಇದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಹಾಗೂ ಮುಂದಿನ ವರ್ಷ ನಡೆಯಲಿರುವ ಮಹತ್ವದ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಎಸ್ಪಿಯ ಕಾರ್ಯತಂತ್ರವನ್ನು ಮರುಸ್ಥಾಪಿಸುವ ಸಂಕೇತವಾಗಿದೆ.
ವರದಿಗಳ ಪ್ರಕಾರ, ಮಾಯಾವತಿ ಆಕಾಶ್ ಆನಂದ್ ರನ್ನು ದೀರ್ಘಾವಧಿಯಿಂದ ಸಿದ್ಧಗೊಳಿಸುತ್ತಿದ್ರು ಎಂದು ತಿಳಿದುಬಂದಿದೆ. ಮಾಯಾವತಿಯ ಸಹೋದರ ಆನಂದ್ ಕುಮಾರ್ ಪುತ್ರ, 28 ವರ್ಷದ ಆಕಾಶ್ ಆನಂದ್ ಬಿಎಸ್ಪಿ ವಲಯದಲ್ಲೀಗ ಹೆಚ್ಚು ಗುರುತಿಸಿಕೊಂಡಿದ್ದಾರೆ. Instagram ನಲ್ಲಿ, ಆಕಾಶ್ ಆನಂದ್ ಬಾಬಾ ಸಾಹೇಬ್ ಅವರ ದೃಷ್ಟಿಯ ಯುವ ಬೆಂಬಲಿಗರು. ನಾನು ಶಿಕ್ಷಣ, ಸಬಲೀಕರಣ ಮತ್ತು ಸಮಾನತೆಗಾಗಿ ನಿಲ್ಲುತ್ತೇನೆ ಎಂದು ಕರೆದುಕೊಂಡಿದ್ದಾರೆ.