ಆಂಧ್ರ ಗಡಿಗೆ ಗೋಡೆ ಕಟ್ಟಿದ ತಮಿಳುನಾಡು!
ಒಂದೆಡೆ ಕೇರಳ ಗಡಿಯನ್ನು ಮುಚ್ಚಿದ್ದ ದಕ್ಷಿಣ ಕನ್ನಡದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಸಿಎಂ ಪಿಣರಾಯಿ ಈಗ ಖುದ್ದು ಗಡಿ ಮುಚ್ಚಲು ಆದೇಶಿಸಿದ್ದಾರೆ. ಹೀಗಿರುವಾಗ ಅತ್ತ ತಮಿಳುನಾಡು ಕೂಡಾ ಅಕ್ರಮ ವಲಸಿಗರ ಸಂಚಾರ ತಡೆಯುವ ನಿಟ್ಟಿನಲ್ಲಿ ತಮಿಳುನಾಡಿನ ವೆಲ್ಲೂರು ಜಿಲ್ಲಾಡಳಿತವು ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗೋಡೆ ನಿರ್ಮಿಸಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ.
ಕೊರೋನಾ ಅಟ್ಟಹಾಸಕ್ಕೆ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಲಾಕ್ಡೌನ್ ಹೇರಿದೆ.
ಹೀಗಿದ್ದರೂ ಜನ ಸಾಮಾನ್ಯರ ಓಡಾಟಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ಹೀಗಿರುವಾಗ ಅಕ್ರಮ ವಲಸಿಗರ ಸಂಚಾರ ನಿಯಂತ್ರಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಗಡಿಯಲ್ಲಿ ಗೋಡೆ ನಿರ್ಮಿಸಿದೆ.
ಹೌದು ತಮಿಳುನಾಡಿನ ವೆಲ್ಲೂರು ಜಿಲ್ಲಾಡಳಿತವು ಆಂಧ್ರಪ್ರದೇಶ ಗಡಿ ರಸ್ತೆಯಲ್ಲಿ ತಾತ್ಕಾಲಿಕ ತಡೆಗೋಡೆಯೊಂದನ್ನು ನಿಲ್ಲಿಸಿದೆ.
ಆಂಧ್ರದೊಂದಿಗೆ ಗಡಿ ಹೊಂದಿರುವ ಸೈನಗುಂಡ ಮತ್ತು ಪೊನ್ನಾಯ್ ಪ್ರದೇಶದಲ್ಲಿ ಹಾಲೋಬ್ಲಾಕ್ ಬಳಸಿ ಈ ಗೋಡೆ ನಿರ್ಮಿಸಲಾಗಿದೆ.
ಉಭಯ ರಾಜ್ಯಗಳ ನಡುವೆ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈಗಾಗಲೇ ಸಂಚಾರಕ್ಕೆ ಅವಕಾಶ ಇದ್ದು, ಅಲ್ಲಿ ಸರಕು ಸಾಗಣೆ ವಾಹನಗಳಿಗೆ ಸಂಚಾರಕ್ಕೆ ಮುಕ್ತ ಅವಕಾಶ ಇದೆ.
ಆದರೆ ಕುಗ್ರಾಮಗಳಿಗೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ಅಕ್ರಮ ಸಂಚಾರ ಮುಂದುವರೆದಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಡಳಿತ ಹೇಳಿದೆ.
ಇನ್ನು ಕೊರೋನಾ ವೈರಸ್ ಪ್ರಕರಣ ವರದಿಯಾದ ಆರಂಭದಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಕ್ರಮ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಕೇರಳಕ್ಕೆ ಸಂಪರ್ಕಿಸುತ್ತಿದ್ದ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಿತ್ತು. ಇದನ್ನು ವಿರೋಧಿಸಿ ಕೇರಳ ಸುಪ್ರೀಂ ಮೆಟ್ಟಿಲೇರಿತ್ತು. ಆದರಡ ಇದೀಗ ಕೇರಳವೇ ಗಡಿಯನ್ನು ಮುಚ್ಚಿದೆ ಎಂಬುವುದು ಉಲ್ಲೇಖನೀಯ.