ಚಿತ್ರ ಸಂಪುಟ: ಬಿಎಸ್ವೈ ಸಂಪುಟ ಸೇರಿದ 17 ಸಚಿವರಿವರು
ಬಿ. ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ತಿಂಗಳ ಬಳಿಕ ಕೊನೆಗೂ ಸಂಪುಟ ವಿಸ್ತರಣೆಯಾಗಿದೆ. 17 ಮಂದಿ ಶಾಸಕರು ಮೊದಲ ಹಂತದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪುಟ ಸೇರಿದ 17 ಶಾಸಕರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಫೋಟೋ ಕೃಪೆ: ರವಿ (ಕನ್ನಡಪ್ರಭ)
ಬೆಳಗಾವಿಯ ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷ್ಮಣ್ ಸವದಿಗೆ ಬಿಎಸ್ ವೈ ಸಂಪುಟದಲ್ಲಿ ಮಂತ್ರಿ ಸ್ಥಾನ ದೊರಕಿದೆ. ಇವರ ವಿದ್ಯಾರ್ಹತೆ ಪಿಯುಸಿ
ಅಶ್ವತ್ಥ್ ನಾರಾಯಣ್- ಮಲ್ಲೇಶ್ವರಂ ಕ್ಷೇತ್ರದಿಂದ ಸತತ 3ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಒಕ್ಕಲಿಗ ನಾಯಕರಾಗಿದ್ದಾರೆ. ಇವರು ಮಂಗಳೂರು ವಿವಿಯ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ.
ಸಿಎಂ ಯಡಿಯೂರಪ್ಪನ ಪರಮಾಪ್ತ ಹಾಗೂ ದಲಿತ ಸಮುದಾಯದ ಎಡ ಪಂಗಡ ನಾಯಕರಾಗಿರುವ ಕಾರಜೋಳ ಮುಧೋಳ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರ ವಿದ್ಯಾರ್ಹತೆ SSLC.
ಬಿಜೆಪಿ ಪಕ್ಷದಲ್ಲಿ ಹಿರಿಯ ನಾಯಕರಾಗಿ ಗುರುತಿಸಿಕೊಂಡಿರುವ ಜಗದೀಶ್ ಶೆಟ್ಟರ್ ಲಿಂಗಾಯತ ಬಣಜಿಗ ಸಮುದಾಯವರಾಗಿದ್ದಾರೆ. ಹುಬ್ಬಳ್ಳಿ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹುಬ್ಬಳ್ಳಿಯ ಜೆಎಸ್ ಎಸ್ ಲಾ ಕಾಲೇಜಿನಿಂದ 1980 ರಲ್ಲಿ ಎಲ್ ಎಲ್ ಬಿ ಪದವಿ ಪಡೆದಿದ್ದಾರೆ.
ಒಕ್ಕಲಿಗ ಸಮುದಾಯದಲ್ಲಿ ಪ್ರಭಾವಿ ನಾಯಕ ಅಂತ ಗುರುತಿಸಿ ಕೊಂಡವರಲ್ಲಿ ಆರ್. ಅಶೋಕ್ ಒಬ್ಬರು. ಪದ್ಮನಾಭ ನಗರ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿ ಹಾಗೂ ಡಿಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.
ಕೆ.ಎಸ್ ಈಶ್ವರಪ್ಪ, ಶಿವಮೊಗ್ಗ ನಗರ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, 1 ಬಾರಿ ಪರಿಷತ್ ಸದಸ್ಯರಾಗಿ ಹಾಗೂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೇ ಕುರುಬ ಸಮುದಾಯದ ಪ್ರಬಲ ನಾಯಕರಾಗಿರುವ ಇವ್ರು ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಆಗಿದ್ದರು.
ಲಿಂಗಾಯತ ಸಮುದಾಯದ ನಾಯಕ ಹಾಗೂ ಬಿಜೆಪಿ ಹಿರಿಯ ಲೀಡರ್ ಎನಿಸಿಕೊಂಡಿರುವವರಲ್ಲಿ ವಿ. ಸೋಮಣ್ಣ ಕೂಡ ಒಬ್ಬರು. ಗೋವಿಂದ ರಾಜನಗರದಿಂದ 5 ಬಾರಿ ಶಾಸಕರಾಗಿರುವ ಸೋಮಣ್ಣ ಗೆ ಈ ಬಾರಿ ಯಡಿಯೂರಪ್ಪ ಕ್ಯಾಬಿನೆಟ್ನಲ್ಲಿ ಮಂತ್ರಿ ಭಾಗ್ಯ ದೊರೆತಿದೆ.
ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರಾದ 5 ಬಾರಿ ರಾಜಾಜೀನಗರ ಕ್ಷೇತ್ರದಿಂದ ಶಾಸಕರಾಗಿರುವ ಸುರೇಶ್ಕುಮಾರ್ಗೆ ಈ ಬಾರಿ ಬಿಎಸ್ವೈ ಸಂಪುಟದಲ್ಲಿ ಮಂತ್ರಿ ಭಾಗ್ಯ ದೊರೆತಿದೆ. ಬೆಂಗಳೂರು ಯೂನಿವರ್ಸಿಟಿಯಿಂದ 1980 ರಲ್ಲಿ ಬಿ ಎಸ್ಸಿ, ಎಲ್ ಎಲ್ ಬಿ ಪದವಿ ಪಡೆದಿದ್ದಾರೆ.
ವಾಲ್ಮೀಕಿ ಸಮುದಾಯದಲ್ಲಿ ಗುರುತಿಸಿಕೊಂಡಿರುವ ಶ್ರೀರಾಮುಲು ಮೊಣಕಾಲ್ಮೂರು ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಒಂದು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿದ್ದಾರೆ. 2008 ರಲ್ಲಿ ಅಲಗಪ್ಪ ಯೂನಿವರ್ಸಿಟಿಯಿಂದ ಬಿ ಎ ಪದವಿ ಪಡೆದಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿಗೂ ಮಂತ್ರಿ ಭಾಗ್ಯ ದಕ್ಕಿದೆ. ಇವರ ವಿದ್ಯಾರ್ಹತೆ 5 ನೇ ಕ್ಲಾಸ್.
ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿಗೆ ಸಂಪುಟದಲ್ಲಿ ಸ್ಥಾನ ದೊರಕಿದೆ. ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಬಿವಿಬಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನೀಯರಿಂಗ್ ನಲ್ಲಿ ಬಿಇ ಪದವಿ ಪಡೆದಿದ್ದಾರೆ.
ಒಕ್ಕಲಿಗೆ ಸಮುದಾಯದಲ್ಲಿ ಪ್ರಭಾವಿ ಅಂತ ಗುರುತಿಸಿಕೊಂಡಿರುವಲ್ಲಿ ಮತ್ತೋರ್ವ ನಾಯಕ ಅಂದ್ರೆ ಅದು ಸಿಟಿ ರವಿ. ಚಿಕ್ಕಮಗಳೂರು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಸಿಟಿ ರವಿ, ಸಚಿವರಾಗಿಯೂ ಹಾಗೂ ಪಕ್ಷ ಸಂಘಟನೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಮುಕ್ತ ವಿವಿಯಲ್ಲಿ 2012 ರಲ್ಲಿ ಪೋಸ್ಟ್ ಗ್ರಾಜುಯೇಶನ್ ಪಡೆದಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜೆ ಸಿ ಮಧುಸ್ವಾಮಿಗೆ ಬಿಎಸ್ ವೈ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಒಲಿದಿದೆ. ಇವರು ಲಿಂಗಾಯತ ನೊಣಬ ಸಮುದಾಯಕ್ಕೆ ಸೇರಿದ್ದಾರೆ.ಮೈಸೂರು ಯೂನಿವರ್ಸಿಟಿಯಿಂದ ಬಿಎಸ್ಸಿ. ಎಂಎ, ತುಮಕೂರು ಲಾ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪಡೆದಿದ್ದಾರೆ.
ಗದಗ ಜಿಲ್ಲೆ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಸಿ ಪಾಟೀಲ್ಗೆ ಬಿಎಸ್ ವೈ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕಿದೆ. ಇವರ ವಿದ್ಯಾರ್ಹತೆ SSLC.
ಕೋಲಾರ ಜಿಲ್ಲೆ ಮುಳುಬಾಗಿಲು ವಿಧಾನಸಭಾ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿರುವ ನಾಗೇಶ್ ಇಂದು ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಎಲೆಕ್ಟ್ರಾನಿಕ್ಸ್ ನಲ್ಲಿ ಬಿ ಇ ಪದವಿ ಪಡೆದಿದ್ದಾರೆ.
ದಲಿತ ಬಲ ಸಮುದಾಯದ ನಾಯಕರಾಗಿರುವ ಪ್ರಭು ಚೌವ್ಹಾಣ್ ಔರಾದ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ರೆ, ಪಕ್ಷೇತರ ಶಾಸಕರಾದ ನಾಗೇಶ್ ಒಂದು ಭಾರಿ ಶಾಸಕರಾಗಿದ್ದು, ಕ್ಷೇತ್ರದಲ್ಲಿ ಉತ್ತಮ ಕೆಲಸ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಇವರ ವಿದ್ಯಾರ್ಹತೆ 12 th ಪಾಸ್ .
ಮುಖ್ಯವಾಗಿ ಮಹಿಳಾ ಕೋಟಾದಲ್ಲಿ ಈ ಬಾರಿ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆಗೆ ಮಂತ್ರಿಪಟ್ಟ ದಕ್ಕಿದೆ. ಲಿಂಗಾಯತ ಪಂಚಮಸಾಲಿ ಸಮುದಾಯದ ನಾಯಕಿಯಾಗಿರುವ ಶಶಿಕಲಾ ಜೊಲ್ಲೆ, ಸತತ 3 ಬಾರಿ ಶಾಸಕಿಯಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.