ಉದ್ಯೋಗ ಕಸಿದುಕೊಂಡ ಕೊರೋನಾ: ಕೂಲಿ ಹಣದಿಂದ ಸೈಬರ್ ಕೆಫೆ ಆರಂಭಿಸಿದ ಯುವಕ..!
ಅಪ್ಪಾರಾವ್ ಸೌದಿ
ಬೀದರ್(ಆ.13): ಕೊರೋನಾ ಸಂಕಷ್ಟದ ಈ ದಿನಗಳಲ್ಲಿ ಉದ್ಯೋಗ ಕಳೆದುಕೊಂಡು ಹೊಟ್ಟೆ ಹಿಟ್ಟಿಗೂ ಸಂಕಷ್ಟ ಅನುಭವಿಸಿದ್ದ ಖಾಸಗಿ ಶಾಲಾ ಉದ್ಯೋಗಿಯೋರ್ವ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮಾಡಿ ಕೂಡಿಟ್ಟ ಹಣ, ಗೆಳೆಯರ ಸಹಾಯದಿಂದ ಸೈಬರ್ ಕೆಫೆ ಆರಂಭಿಸಿ ಸರ್ಕಾರದ ವಿವಿಧ ಯೋಜನೆಗಳನ್ನು ಜನರತ್ತ ತಲುಪಿಸುವ ಕಾರ್ಯಕ್ಕೆ ಕೈ ಹಾಕಿ ಮೆಚ್ಚುಗೆ ಗಳಿಸಿದ್ದಾರೆ.
ತಾಲೂಕಿನ ಕಮಠಾಣಾ ಗ್ರಾಮದ ಅರುಣಕುಮಾರ ಅವರೇ ಈ ವ್ಯಕ್ತಿ. ನಗರದ ಖಾಸಗಿ ಶಾಲೆಯೊಂದರಲ್ಲಿ ಕಂಪ್ಯೂಟರ್ ಆಪರೇಟರ್/ ಶಿಕ್ಷಕ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಕೊರೋನಾ ಸಂಕಷ್ಟ ಉದ್ಯೋಗವನ್ನೇ ಕಸಿದುಕೊಂಡಿತ್ತು.
ಕೆಲಸವಿಲ್ಲದೆ ಸ್ವಗ್ರಾಮಕ್ಕೆ ಮರಳುತ್ತಿದ್ದಂತೆ ಕೂಲಿ ಮಾಡುತ್ತಿದ್ದ ತಂದೆ, ತಾಯಿಗೂ ಕೂಲಿ ಸಿಗದೇ ಕಂಗಾಲಾಗಿದ್ದರು. ಅದಾಗ ಏಪ್ರಿಲ್ ತಿಂಗಳಾಂರಭದ ಸಂದರ್ಭದಲ್ಲಿ ಗ್ರಾಮದಲ್ಲಿನ ಕೆಲ ಯುವಕರು ಕೊರೋನಾ ವಾರಿಯರ್ಸ್ಗಳಾಗಿ ಬುದ್ಧ ಬಸವ ಅಂಬೇಡ್ಕರ್ ಟ್ರಸ್ಟ್ನ ಮೂಲಕ ಧುಮುಕುತ್ತಿರುವಾಗ ಅವರೊಟ್ಟಿಗೆ ಸೇರಿದ ಅರುಣಕುಮಾರ ನಾಲ್ಕಾರು ವಾರ ಅಲ್ಲಿನ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡಿದ್ದ ಅರುಣಕುಮಾರ
ಕೂಲಿ ಕೆಲಸ ಮಾಡಿ ಶ್ರಮಿಸಿ ಹಣ ಕೂಡಿಡುವತ್ತ ಸಾಗಿದ್ದಲ್ಲದೆ ಇತರೆ ಸಹಪಾಠಿಗಳಿಗೆ ಬಂದ ಕೂಲಿ ಹಣ, ಮತ್ತಿತರಿಂದ ಸಿಕ್ಕ ಪ್ರೋತ್ಸಾಹದ ಧನ ಸೇರಿ 50 ಸಾವಿರ ರು.ಗಳ ವೆಚ್ಚದಲ್ಲಿ ಸೈಬರ್ ಕೆಫೆ ಆರಂಭಿಸಿದ್ದಾರೆ.
ಸೈಬರ್ ಕೆಫೆಯಲ್ಲಿ ರೇಶನ್ ಕಾರ್ಡ್, ಹೆಲ್ತ್ ಕಾರ್ಡ್, ಲೇಬರ್ ಕಾರ್ಡ್ ಮತ್ತಿತರ ಸರ್ಕಾರದ ಯೋಜನೆಗಳಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದರೊಂದಿಗೆ ಜೀವನೋಪಾಯ ಕಂಡುಕೊಂಡ ಅರುಣಕುಮಾರ
ಉದ್ಯೋಗ ಹಾಗೂ ಉದ್ಯಮಗಳನ್ನೇ ಬುಡಮೇಲು ಮಾಡಿದ್ದ ಮಹಾಮಾರಿ ಕೊರೋನಾ
ಜಿಲ್ಲೆಯ ಖಾಸಗಿ ಶಾಲೆಯ ಕಂಪ್ಯೂಟರ್ ಆಪರೇಟರ್ ಉದ್ಯೋಗ ಖಾತ್ರಿಯಿಂದ ಜೀವನ ಕಂಡುಕೊಂಡು ಇತರರಿಗೆ ಮಾದರಿಯಾದ ಅರುಣಕುಮಾರ
ಕೊರೋನಾ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡು ಸ್ವಾಗ್ರಾಮ ಕಮಠಾಣಾಕ್ಕೆ ಆಗಮಿಸಿದಾಗ ಅಲ್ಲಿನ ಬುದ್ಧ ಬಸವ ಅಂಬೇಡ್ಕರ್ ಟ್ರಸ್ಟ್ನ ಯುವ ಸದಸ್ಯರೆಲ್ಲ ಸೇರಿ ಕೊರೋನಾ ವಾರಿಯರ್ಸ್ಗಳಾಗಿ ಕೆಲಸ ಆರಂಭಿಸಿ ಕೈ ಕೆಲಸಕ್ಕಾಗಿ ಗ್ರಾಪಂನಲ್ಲಿ ಗ್ರಾಮದ ಸುಮಾರು 350ಕ್ಕೂ ಹೆಚ್ಚು ಜನರಿಗೆ ಖಾತ್ರಿ ಕೂಲಿ ಕೊಡಿಸಿ ತಾವೂ ಕೂಲಿಗಿಳಿದಿದ್ದೆ ಸೈಬರ್ ಕೆಫೆ ಆರಂಭಿಸಲು ಸಹಕಾರಿಯಾಗಿದ್ದು ಎಂದು ಕಮಠಾಣಾದ ಎಒನ್ ಸೈಬರ್ ಕೆಫೆ ಮಾಲೀಕ ಅರುಣಕುಮಾರ ಅವರು ತಿಳಿಸಿದ್ದಾರೆ.
ನಮಗೆ ದಾರಿ ದೀಪವಾಗಿದ್ದು ಜನವಾದಿ ಮಹಿಳಾ ಸಂಘಟನೆಯ ಪ್ರಮುಖ ಕಾರ್ಯಕರ್ತೆ ಲಕ್ಷ್ಮಿ ಬಾವಗೆ ಹಾಗೇ ತಾಪಂ ಸಹಾಯಕ ನಿರ್ದೇಶಕ ಶರತಕುಮಾರ ಅಭಿಮಾನ ಅವರ ಸಹಾಯದಿಂದ ಅರುಣಕುಮಾರ ಜೊತೆ ನಾವೆಲ್ಲ ಕಮಠಾಣಾ ಸಮೀಪದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಉದ್ಯೋಗ ಪಡೆದು ಸಹಾಯ ಮಾಡಿದ್ದೇವೆ. ಗ್ರಾಮಸ್ಥರಿಗೂ ಸೈಬರ್ ಕೆಫೆಯಿಂದ ಅನುಕೂಲವಾಗುತ್ತಿದೆ ಎಂದು ಕಮಠಾಣಾದ ಬುದ್ಧ ಬಸವ ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ರಾಜಶೇಖರ ಕುಂಚೆ ಅವರು ತಿಳಿಸಿದ್ದಾರೆ.