ರಂಗಸ್ಥಳದಲ್ಲಿ ವೇಷ ಕುಣಿಸುತ್ತಿದ್ದ ಭಾಗವತ ಮನೆಯಲ್ಲಿ ಬಾಣಸಿಗ: ಎಲ್ಲವೂ ಲಾಕ್ಡೌನ್ ಮಹಿಮೆ
ರಂಗದಲ್ಲಿ ಪ್ರತಿ ವೇಷವನ್ನೂ ಕುಣಿಸುತ್ತಿದ್ದ ಬಡಗು ತಿಟ್ಟಿನ ಪೆರ್ಡೂರು ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ ಜನ್ಸಾಲೆ ಈಗ ಲಾಕ್ಡೌನ್ ಕಾರಣಕ್ಕೆ ಮನೆಯಲ್ಲೇ ಇದ್ದಾರೆ. ಏನ್ಮಾಡ್ತಿದ್ದಾರೆ ನೀವೇ ನೋಡಿ
ಯಕ್ಷಗಾನ ರಂಗಸ್ಥಳದಲ್ಲಿ ಮುಂಡಾಸು ಸುತ್ತಿ ಪದ್ಯ ಹೇಳಲು ಕುಳಿತರೆ ಚಪ್ಪಾಳೆ ಸುರಿಮಳೆ. ರಂಗದಲ್ಲಿ ಪ್ರತಿ ವೇಷವನ್ನೂ ಕುಣಿಸುತ್ತಿದ್ದ ಬಡಗು ತಿಟ್ಟಿನ ಪೆರ್ಡೂರು ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ ಜನ್ಸಾಲೆ ಈಗ ಲಾಕ್ಡೌನ್ ಕಾರಣಕ್ಕೆ ಮನೆಯಲ್ಲೇ ಇದ್ದಾರೆ.
ಸದಾ ತಾಳ ಹಿಡಿದು ಕಲಾವಿದರನ್ನು ಕುಣಿಸುತ್ತಿದ್ದ ಅವರ ಕೈಯಲ್ಲಿ ಈಗ ಗರಗಸದ ವರಸೆ ಹಿಡಿದಿದ್ದಾರೆ. ಅಂದರೆ ಕುಲಕಸುಬು ಮರಗೆಲಸವನ್ನು ಕೂಡ ಮನೆಯಲ್ಲೇ ಮಾಡುತ್ತಿದ್ದಾರೆ. ಮಳೆಗಾಲಕ್ಕೆ ಬೇಕಾದ ಸೌದೆಯನ್ನು ಸಂಗ್ರಹಿಸುವುದರಲ್ಲಿ ನಿರತರಾಗಿದ್ದಾರೆ.
ದಿನವೂ ಸಂಜೆ ಹೊತ್ತು ಗರಗಸ ಹಿಡಿದುಕೊಂಡು ಮುರಿದುಬಿದ್ದ ಮರದ ರೆಂಬೆ, ಕೊಂಬೆಗಳನ್ನು ಕಡಿದು ಉರುವಲು ಮಾಡುತ್ತಿದ್ದಾರೆ. ಅದನ್ನು ತಲೆಯಲ್ಲಿ ಹೊತ್ತು ತಂದು ಮನೆಗೆ ಹಾಕುವುದು ಇವರೇ. ಲಾಕ್ಡೌನ್ ಆರಂಭದ ದಿನಗಳಲ್ಲಿ ತನ್ನ ಮನೆ ಕುಂದಾಪುರ ಸಮೀಪ ಜನ್ಸಾಲೆಯಲ್ಲಿ ಇದ್ದ ರಾಘವೇಂದ್ರ ಆಚಾರ್ಯರು ಈಗ ಪತ್ನಿಯ ಮನೆ ಹೆಮ್ಮಾಡಿಗೆ ಬಂದಿದ್ದಾರೆ.
ಮೇಳದ ತಿರುಗಾಟದ ಬಳಿಕ ಮಳೆಗಾಲದಲ್ಲಿ ಮನೆಯಲ್ಲಿ ಹಂಡೆಗೆ ನೀರು ಹಾಕಿ ಒಲೆಗೆ ಬೆಂಕಿ ಹಾಕಿ ಸ್ನಾನಕ್ಕೆ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯಗೆ ಮನೆ ಕೆಲಸ ಹೊಸದಲ್ಲ. ಮನೆಯಲ್ಲಿದ್ದಾಗ ಅಡುಗೆ ಇವರ ಅಚ್ಚುಮೆಚ್ಚಿನ ಹವ್ಯಾಸವಂತೆ.
ಒಣ ತೆಂಗಿನ ಕಾಯಿಯನ್ನು ಮಿಲ್ಗೆ ನೀಡಿ ಎಣ್ಣೆ ಸಂಗ್ರಹಿಸುವ ಸಮಯ. ರಾಘವೇಂದ್ರ ಆಚಾರ್ಯರು ಒಂದು ವಾರದಿಂದ ನಿತ್ಯವೂ ತೆಂಗಿನ ಕಾಯಿ ಸುಲಿದು, ಅದನ್ನು ಒಣಗಿಸಿ, ಕೊಬ್ಬರಿ ಸಿದ್ಧಮಾಡಿಟ್ಟುಕೊಂಡಿದ್ದಾರೆ. ಲಾಕ್ಡೌನ್ ಮುಗಿದ ಕೂಡಲೇ ತೆಂಗಿನ ಎಣ್ಣೆ ಮಿಲ್ಗೆ ನೀಡುವ ಯೋಚನೆ. ಇದೇ ರೀತಿ ಅಡುಗೆಗೆ ಬೇಕಾದ ತೆಂಗಿನ ಕಾಯಿ ಸುಲಿದು ಕೊಡುವ ಕೆಲಸವೂ ಇವರದ್ದೇ.
ಅನ್ನ, ಸಾಂಬಾರ್, ಪಲ್ಯ, ಪಾಯಸ ಸೇರಿದಂತೆ ವಿವಿಧ ಅಡುಗೆಯನ್ನು ಸ್ವಾದಿಷ್ಟವಾಗಿ ಮಾಡುವುದರಲ್ಲಿ ಕರಗತ ಎನ್ನುವ ರಾಘವೇಂದ್ರ ಆಚಾರ್ಯರು, ಈಗಲೂ ಪತ್ನಿ ಜೊತೆಗೆ ಅಡುಗೆಗೆ ಸಾಥ್ ನೀಡುತ್ತಾರೆ. ತಾನೇ ಕೈಯಾರೆ ಕೈರುಚಿ ಮಾಡುತ್ತಾರೆ. ಕನಿಷ್ಠ 25 ಮಂದಿಗೆ ಅಡುಗೆ ಸಿದ್ಧಪಡಿಸಬಲ್ಲೆ ಎನ್ನುತ್ತಾರೆ.