Mandya| ಶ್ರೀರಂಗಪಟ್ಟಣ ದಸರಾಕ್ಕೆ ಚುಂಚನಗಿರಿ ಶ್ರೀ ಚಾಲನೆ
ಶ್ರೀರಂಗಪಟ್ಟಣ(ಅ.10): ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಶನಿವಾರ ಅಧಿಕೃತ ಚಾಲನೆ ನೀಡಿದರು.
ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ತಾಯಿ ಚಾಮುಂಡೇಶ್ವರಿಯ ಪೂರ್ಣ ಆಶೀರ್ವಾದದಿಂದ ಎಲ್ಲ ಸಂಕಷ್ಟಗಳೂ ದೂರವಾಗಿ ರೈತರ ಮೊಗದಲ್ಲಿ ನಗು ಮೂಡಲಿ, ನಾಡಿನಲ್ಲಿ ಸಂಪತ್ತು ನೆಲೆಸಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್ ಗೌಡ ಈ ಸಂದರ್ಭದಲ್ಲಿದ್ದರು.
ಗೋಪಾಲಸ್ವಾಮಿ ಆನೆಯ ಮೇಲೆ ಚಾಮುಂಡೇಶ್ವರಿ ವಿಗ್ರಹವಿದ್ದ ಮರದ ಅಂಬಾರಿಯನ್ನು ಇರಿಸಲಾಗಿತ್ತು. ಈ ವೇಳೆ ಪಟಾಕಿ ಸಿಡಿತ ಹಾಗೂ ಜಾನಪದ ಕಲಾತಂಡಗಳ ಸದ್ದಿಗೆ ಬೆದರಿ ಆನೆ ದಿಕ್ಕಾಪಾಲಾಗಿ ಓಡಲು ಶುರುಮಾಡಿತು.
ಕೊನೆಗೆ ಮಾವುತ ಆನೆ ಕಾಲಿಗೆ ಸರಪಣಿ ಬಿಗಿದು ಆಗಬಹುದಿದ್ದ ಭಾರೀ ಅನಾಹುತ ತಡೆದರು. ಕೊನೆಗೆ ಜಂಜೂಸವಾರಿ ರದ್ದುಗೊಳಿಸಿ, ಚಾಮುಂಡೇಶ್ವರಿ ವಿಗ್ರಹವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು.