ಅಮ್ಮನನ್ನೊಮ್ಮೆ ಕೊನೇ ಬಾರಿ ಕಣ್ತುಂಬಿಕೊಳ್ಳಲೂ ಬಿಡಲಿಲ್ಲ ಲಾಕ್ಡೌನ್, ಕಾರ್ಗಿಲ್ನಲ್ಲಿ ಮಗ
ಕೊರೋನಾ ಸೋಂಕಿನ ಪರಿಣಾಮ ದೇಶದೆಲ್ಲೆಡೆ ಲಾಕ್ಡೌನ್ ಆಗಿದ್ದು, ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಯೋಧನಿಗೆ ಕೊನೆಯ ಬಾರಿ ಮೃತಪಟ್ಟತಾಯಿ ಮುಖ ನೋಡಲು ಸಾಧ್ಯವಾಗದ ಮನ ಕಲುಕುವ ಸನ್ನಿವೇಶ ಎದುರಾಗಿದೆ. ಇಲ್ಲಿವೆ ಫೋಟೋಸ್
ಲಾಕ್ಡೌನ್ ಪರಿಣಾಮದಿಂದಾಗಿ ತಾಯಿಯ ಅಂತ್ಯ ಸಂಸ್ಕಾರಕ್ಕೂ ಬರಲಾಗದೆ ಕೊಡಗಿನ ಯೋಧ ನೂತನ್ ಜೋಯಪ್ಪ ನೋವಿನ ನಡುವೆ ದೇಶ ಕಾಯುವಲ್ಲಿ ನಿರತನಾಗಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪಾರಾಣೆಯಲ್ಲಿಯ ಗಿಣಿ ಅಕ್ಕವ್ವ (68) ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದರು. ಜಮ್ಮು ಕಾಶ್ಮೀರದ ಕಾರ್ಗಿಲ್ನ ಲೇ ನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಗ ನೂತನ್ ಜೋಯಪ್ಪ ಅವರು ಲಾಕ್ಡೌನ್ನಿಂದ ವಿಮಾನ, ರೈಲು ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಿಂದ ಬರಲಾಗದ ಸ್ಥಿತಿ ಎದುರಾಗಿದೆ.
ಪಂಜಾಬ್ನಲ್ಲಿ ಸೇನೆಯಲ್ಲಿದ್ದ ಸಹೋದರ ರೋಷನ್ ತಿಂಗಳ ಹಿಂದೆ ರಜೆಯಲ್ಲಿ ಬಂದಿದ್ದರು. ಇದೀಗ ನೂತನ್ ಅನುಪಸ್ಥಿತಿಯಲ್ಲಿ ಜವಾಬ್ದಾರಿ ಹೊತ್ತು ತನ್ನ ಅಣ್ಣ ರೋಷನ್ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.
ಊರಿಗೆ ಹೊರಡಲು ಸಾಧ್ಯವಾದಷ್ಟುಪ್ರಯತ್ನ ಪಟ್ಟಿದ್ದು, ಕಾರ್ಗಿಲ್ನಿಂದ ಲೇಗೆ ಹೊರಟಿದ್ದೇನೆ. ಆದರೆ ಊರಿಗೆ ತೆರಳಲು ಆಗುತ್ತೋ ಇಲ್ವೋ ಅಂತ ಗೊತ್ತಿಲ್ಲ. ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ಹೋಗಲು ಸಾಧ್ಯವಾಗಿಲ್ಲ ಎಂದು ಕಾರ್ಗಿಲ್ನಲ್ಲಿ ಸೇವೆಯಲ್ಲಿರುವ ನೂತನ್ ಜೋಯಪ್ಪ ಕನ್ನಡಪ್ರಭದೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಪಾರಾಣೆ ಗ್ರಾಮದ ಈ ಕುಟುಂಬದ ಎಲ್ಲರೂ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆ ತಿಮ್ಮಯ್ಯ ಕೂಡ ಬಿಎಸ್ಎಫ್ನ ನಿವೃತ್ತ ಯೋಧ. ಇವರ ಹಿರಿಯ ಪುತ್ರ ರೋಷನ್ ಪಂಜಾಬ್ನಲ್ಲಿ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಿರಿಯ ಪುತ್ರ ನೂತನ್ ಜೋಯಪ್ಪ ಕಾರ್ಗಿಲ್ನ ಲೇ ಎಂಬಲ್ಲಿ ನಾಯಕನಾಗಿ ನಿರ್ವಹಿಸುತ್ತಿದ್ದಾರೆ.