ಸೇಬಿಗಿಂತ ಈರುಳ್ಳಿಯೇ ದುಬಾರಿ: ಗ್ರಾಹಕರ ಜೇಬಿಗೆ ಕತ್ತರಿ..!
ಶಿವಕುಮಾರ ಕುಷ್ಟಗಿ
ಗದಗ(ಅ.22): ರಾಜ್ಯಾದ್ಯಂತ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು, ಸೇಬಿಗಿಂತಲೂ ದುಬಾರಿ ದರದಲ್ಲಿ ಮಾರಾಟವಾಗುತ್ತಿದೆ. ಇದು ಒಂದೆಡೆ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದ್ದರೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿರುವ ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬಿತ್ತನೆಯಾಗಿದ್ದ ಈರುಳ್ಳಿಯ ಶೇ. 95ರಷ್ಟು ಅತಿಯಾದ ಮಳೆಯಿಂದಾಗಿ ಕೊಳೆತು ಹೋಗಿದ್ದು, ದರದಲ್ಲಿ ಆಗಿರುವ ಭಾರೀ ಹೆಚ್ಚಳದ ಲಾಭ ರೈತರಿಗೂ ಸಿಗುತ್ತಿಲ್ಲ.
ಜಿಲ್ಲೆಯಲ್ಲಿ ಸೇಬಿನ ಬೆಲೆ ಕೆಜಿಗೆ 80 ರಿಂದ 100 ವರೆಗೆ ಇದ್ದರೆ, ಈರುಳ್ಳಿ ಕೆಜಿಗೆ 80 ರಿಂದ 120ರ ವರೆಗೆ ಮಾರಾಟವಾಗುತ್ತಿದೆ. ಸಗಟು ದರದಲ್ಲಿ ಈರುಳ್ಳಿಯು 4500 ಮಾರಾಟವಾಗುತ್ತಿದೆ. ಆದರೆ, ಇದರ ಲಾಭ ಮಾತ್ರ ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಬೆಳೆಗಾರರಿಗೆ ಸಿಗುತ್ತಿಲ್ಲ. ನಿರಂತರ ಮಳೆಯಿಂದ ಈರುಳ್ಳಿ ಕೊಳೆತುಹೋಗಿದೆ. ಅದರಲ್ಲಿಯೂ ಕಪ್ಪು ಮಣ್ಣಿನಲ್ಲಿ ಬೆಳೆಯುವ ಈರುಳ್ಳಿ ಹೆಚ್ಚು ತೇವಾಂಶದಿಂದ ಕೂಡಿರುತ್ತದೆ. ರೈತರ ಹೊಲದಲ್ಲಿ ಈರುಳ್ಳಿಯೇ ಉಳಿದಿಲ್ಲ. ಸದ್ಯ ಸೇಬು ಹಣ್ಣಿಗಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿರುವ ಈರುಳ್ಳಿ ಬೆಲೆಯ ಲಾಭ ರೈತರಿಗೆ ಮಾತ್ರ ಸಿಗುತ್ತಿಲ್ಲ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಆದರೆ, ಸತತವಾಗಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ 95 ಸಾವಿರ ಹೆಕ್ಟೇರ್ ಪ್ರದೇಶದ ಈರುಳ್ಳಿ ಸಂಪೂರ್ಣವಾಗಿ ನೆನೆದು ಹೋಗಿದ್ದು, ಕೀಳಲು ಸಹ ಬಾರದಂತಹ ಸ್ಥಿತಿಯಲ್ಲಿ ಇದೆ. ಇದರಿಂದಾಗಿ ಪ್ರತಿ ಹೆಕ್ಟೇರ್ಗೆ . 20ರಿಂದ 30 ಸಾವಿರ ಖರ್ಚು ಮಾಡಿದ್ದ ಜಿಲ್ಲೆಯ ರೈತರಿಗೀಗ ಈರುಳ್ಳಿಗೆ ಉತ್ತಮ ಬೆಲೆ ಇದ್ದರೂ ಮಾಡಿದ ಖರ್ಚು ಮರಳಿ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ಗದಗ ಮಾರುಕಟ್ಟೆಗೆ ಕಳೆದೆರಡು ದಿನಗಳಿಂದ ವ್ಯಾಪಕ ಪ್ರಮಾಣ ಈರುಳ್ಳಿ ಮಾರಾಟಕ್ಕೆ ಬರುತ್ತಿದೆ. ಅತಿಯಾದ ಮಳೆಯಿಂದಾಗಿ ಗುಣಮಟ್ಟದ ಈರುಳ್ಳಿ ಬರುತ್ತಿಲ್ಲ. ಅದೇ ಕಳಪೆ ಗುಣಮಟ್ಟದ ಈರುಳ್ಳಿಗೆ ಭಾರೀ ಬೇಡಿಕೆ ಬಂದಿರುವುದು ಎಲ್ಲರಿಗೂ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.
ದರದಲ್ಲಿ ಆಗಿರುವ ಭಾರೀ ಹೆಚ್ಚಳದ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಿದ್ದು, ನಿತ್ಯವೂ ಮನೆಯಲ್ಲಿ ಬೇಕಾಗುವ ಈ ತರಕಾರಿಗೆ ಇಷ್ಟೊಂದು ಬೆಲೆ ನೀಡಿ ಖರೀದಿಸುವಂತಾಗಿದೆ. ಒಂದೆಡೆ ಅತಿಯಾದ ಮಳೆಯಿಂದ ಕೊಳೆತಿರುವ ಈರುಳ್ಳಿ ಬಿತ್ತನೆ ಮಾಡಿದ್ದ ರೈತರ ಪಾಲಿಗೆ ಕಣ್ಣೀರುಳ್ಳಿ ಆಗಿದ್ದರೆ, ಇತ್ತ ನಿತ್ಯವೂ ಉಪಯೋಗಿಸುವ ಗ್ರಾಹಕರಿಗೆ ಇದು ಕಣ್ಣೀರುಳ್ಳಿಯೇ ಆಗಿದೆ. ಹಾಗಾಗಿ ಪ್ರಸಕ್ತ ಸಾಲಿನ ಅತಿಯಾದ ಮಳೆ ರೈತರಿಗೆ ಹಾಗೂ ಗ್ರಾಹಕರಿಗೂ ತೀವ್ರ ನಷ್ಟವನ್ನುಂಟು ಮಾಡಿದೆ.
ಮುಂಗಾರಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದೆವು. ಆದರೆ, ಅತಿಯಾದ ಪ್ರಮಾಣದಲ್ಲಿ ಮಳೆಯಾಗಿ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ. ನಮ್ಮ ಮನೆಗೆ ನಾವು ಈರುಳ್ಳಿ ಕೊಂಡು ತಂದು ತಿನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೊಲದಲ್ಲಿನ ಎಲ್ಲ ಈರುಳ್ಳಿ ಸಂಪೂರ್ಣವಾಗಿ ನೆನೆದು ಕೊಳೆತು ಹೋಗಿವೆ. ಮಾರುಕಟ್ಟೆಯಲ್ಲಿ ಮಾತ್ರ ಉತ್ತಮ ಬೆಲೆ ಇದೆ. ಆದರೆ ಮಾರಾಟ ಮಾಡಲು ಈರುಳ್ಳಿಯೇ ಉಳಿದಿಲ್ಲ. ಅಳಿದುಳಿದ ಅಲ್ಪ ಈರುಳ್ಳಿ ಮಾರಾಟಕ್ಕೆ ತಂದರೆ ವ್ಯಾಪಾರಸ್ಥರು ಹಸಿ ಈರುಳ್ಳಿಗೆ ಹೆಚ್ಚಿನ ದರವಿಲ್ಲ ಎಂದು ಎಂದಿನಂತೆ ಶೋಷಣೆ ಮಾಡುತ್ತಿದ್ದಾರೆ ಎಂದು ಸವಡಿ ಗ್ರಾಮದ ರೈತರಾದ ಸುರೇಶ ಜಿಗಳೂರ, ರಾಮನಗೌಡ ಅರಹುಣಸಿ ಅವರು ತಿಳಿಸಿದ್ದಾರೆ.