ಲಾಕ್ ಡೌನ್: ಯುವ ಕಲಾವಿದರಿಗೆ ಫೇಸ್ಬುಕ್ನಲ್ಲೊಂದು ವೇದಿಕೆ
ಲಾಕ್ಡೌನ್ ಹಲವಾರು ಸವಾಲುಗಳ ಜೊತೆಗೆ ಹಲವಾರು ಸಾಧ್ಯತೆಗಳನ್ನು ತೆರೆದಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶ್ರೀ ಮಂಜುನಾಥ ನೃತ್ಯ ಕಲಾಶಾಲೆ ಅಂತಹದ್ದೊಂದು ಸಾಧ್ಯತೆಯನ್ನು ಬಳಸಿಕೊಂಡು ತೆರೆಮರೆಯಲ್ಲಿ ಉಳಿದ ಯುವ ಭರತನಾಟ್ಯ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟು ಅವರನ್ನು ಬೆಳಕಿಗೆ ತರುತ್ತಿದೆ.
ಹೌದು, ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಅವರು ಲಾಕ್ಡೌನ್ ಸಮಯದಲ್ಲಿ ತಮ್ಮ ಮಡದಿ ದೀಪ್ತಿ ಅವರೊಂದಿಗೆ ಚರ್ಚಿಸಿ ಆರಂಭಿಸಿದ ಯೋಜನೆ ಇದು. ಲಾಕ್ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲೇ ಇರುವಾಗ, ಹೊಸ ಪ್ರತಿಭೆಗಳಿಗೆ ಮಣೆ ಹಾಕಿ ಅವರನ್ನು ಬೆಳಕಿಗೆ ತರುವುದು ಇವರ ಉದ್ದೇಶವಾಗಿತ್ತು.
ಈ ಉದ್ದೇಶ ಈಡೇರಿಕೆಗಾಗಿ ಅವರು ಬಳಸಿಕೊಂಡಿದ್ದು ಪ್ರಬಲ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಅನ್ನು. ಇಲ್ಲಿ ಮಂಜುನಾಥ ನೃತ್ಯ ಕಲಾ ಶಾಲೆ ಅನ್ನುವ ಖಾತೆಯೊಂದನ್ನು ತೆರೆದ ಮಂಜುನಾಥ್ ಅವರು, ನೃತ್ಯಾರ್ಪಣಂ ಹೆಸರಿನಲ್ಲಿ ಆನ್ ಲೈನ್ ಭರತನಾಟ್ಯ ಪ್ರದರ್ಶನ
ಆರಂಭಿಸಿದರು. ಈ ಮೂಲಕ ಪ್ರತಿ ದಿನ ಇಬ್ಬರು ಯುವ ಕಲಾವಿದರಿಗೆ ಭರತನಾಟ್ಯ ಪ್ರದರ್ಶನಕ್ಕೆ ಅವಕಾಶ ಕೊಡುವ ಮೂಲಕ ಅವರ ಪ್ರತಿಭೆಯನ್ನು ಜನರಿಗೆ ಪರಿಚಯಿಸುತ್ತಿದ್ದಾರೆ.
ದಕ್ಷಿಣ ಕನ್ನಡದ ಮಟ್ಟಿಗೆ ಫೇಸ್ಬುಕ್ ಮೂಲಕ ಲೈವ್ ಭರತನಾಟ್ಯ ಪ್ರದರ್ಶನ ಇದೇ ಮೊದಲು. ಪ್ರತಿದಿನ ಸಂಜೆ 6.30ರಿಂದ 7.30ರ ವರೆಗೆ ಅರ್ಧ ಗಂಟೆಯ ಎರಡು ಪ್ರದರ್ಶನ ಆಯೋಜಿಸಲಾಗುತ್ತದೆ.
ಮೇ 20ಕ್ಕೆ ಆರಂಭಿಸಿದ ಈ ನೃತ್ಯಾರ್ಪಣಂ ಭರತನಾಟ್ಯ ಯಾನದಲ್ಲಿ ಇಲ್ಲಿಯವರೆಗೆ 32 ಯುವ ಪ್ರತಿಭೆಗಳು ಪ್ರದರ್ಶನ ನೀಡಿದ್ದು, ಒಟ್ಟಾಗಿ 46 ಶಿಕ್ಷಕರ 74 ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ.
ಪ್ರತಿ ದಿನ ಪ್ರದರ್ಶನ ನೀಡಲಿರುವ ಭರತನಾಟ್ಯ ಕಲಾವಿದರಿಗೆ ನೃತ್ಯ ಅರ್ಧ ಗಂಟೆಗೆ ಮೊದಲು 'ಮಂಜುನಾಥ ನೃತ್ಯ ಕಲಾ ಶಾಲೆ' ಫೇಸ್ಬುಕ್ ಖಾತೆಯ ಪಾಸ್ವರ್ಡ್ ನೀಡಲಾಗುತ್ತದೆ.
ಕರಾವಳಿಯ ಬೆಳೆಯುತ್ತಿರುವ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವುದು ಮುಖ್ಯ ಉದ್ದೇಶವಾದರೂ, ಕೋರಿಕೆ ಮೇರೆಗೆ ಆಸ್ಟ್ರೇಲಿಯಾದ ಕಲಾವಿದರೊಬ್ಬರು ಪ್ರದರ್ಶನ ನೀಡಿದ್ದು ), ಅಮೆರಿಕಾದ ಕಲಾವಿದರು ಇನ್ನಷ್ಟೆ ಪ್ರದರ್ಶನ ನೀಡಲಿದ್ದಾರೆ.
ಲೈವ್ ಪ್ರದರ್ಶನವನ್ನು ಸುಮಾರು 125 ಜನ ವೀಕ್ಷಿಸುವುದು ಮಾತ್ರವಲ್ಲದೆ, ಒಟ್ಟಾಗಿ 4 ಸಾವಿರಕ್ಕೂ ಅಧಿಕ ಮಂದಿ ಈ ಭರತನಾಟ್ಯವನ್ನು ವೀಕ್ಷಿಸುವುದು ಈ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ. ಪ್ರತಿಭೆ ಇದ್ದೂ, ಸೂಕ್ತ ವೇದಿಕೆ ಸಿಗದೆ ತೆರೆಮರೆಯಲ್ಲೇ ಇರುವ ಕರಾವಳಿಯ ಅತ್ಯುತ್ತಮ
ಯುವ ಭರತನಾಟ್ಯ ಕಲಾವಿದರಿಗೆ ವೇದಿಕೆ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಆದರೂ ಕರಾವಳಿ ಮಾತ್ರವಲ್ಲದೆ ಬೆಂಗಳೂರು, ಆಸ್ಟ್ರೇಲಿಯಾದಲ್ಲಿರುವ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದೆ. ಜನರ ಹಾಗೂ ಕಲಾವಿದರ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿ ಅದ್ಭುತವಾಗಿದೆ. ಹಿರಿಯ ಕಲಾವಿದರು ಕೂಡ ಯುವ ಕಲಾವಿದರ ಲೈವ್ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇದು ಯುವ ಕಲಾವಿದರಿಗೆ ಹೆಚ್ಚಿನ ಉತ್ಸಾಹವನ್ನು ತುಂಬಿದೆ ಎನ್ನುತ್ತಾರೆ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು.
ಮಂಜುನಾಥ್ ಎನ್. ಪರಿಚಯ
ಜಿ.ಎನ್. ನರಸಿಂಹನ್ ಹಾಗೂ ಗಾಯತ್ರಿ ಎನ್. ದಂಪತಿಯ ಪುತ್ರ ವಿದ್ವಾನ್ ಮಂಜುನಾಥ್ ಎನ್. ಪ್ರತಿಭಾವಂತ ಭರತನಾಟ್ಯ ಕಲಾವಿದ ಹಾಗೂ ಸಂಗೀತಗಾರ. ಇವರು, ಉಪ್ಪಿನಂಗಡಿಯ 'ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆ ಹಾಗೂ ಶ್ರೀ ಮಂಜುನಾಥ ಸುನಾದ ಮ್ಯೂಸಿಕಲ್ಸ್ ನ ನಿರ್ದೇಶಕರೂ ಹೌದು. 2007ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯ ಜೊತೆಗೆ, ಈ ತನಕ ಹಲವಾರು ಪ್ರಶಸ್ತಿಗಳನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ. 2009ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.