ಹೊಸ ಕೈಗಾರಿಕಾ ನೀತಿ, ಕೈಗಾರಿಕೋದ್ಯಮಿಗಳಿಗೆ ಸಹಕಾರಿ: ಸಚಿವ ಜಗದೀಶ ಶೆಟ್ಟರ್
ಗದಗ(ಆ.15): 2020-25ರ ಹೊಸ ಕೈಗಾರಿಕಾ ನೀತಿ ಕೈಗಾರಿಕೋದ್ಯಮಿಗಳಿಗೆ ಹೆಚ್ಚು ಸಹಕಾರಿಯಾಗಿದ್ದು, ಇದರಿಂದಾಗಿ 5 ವರ್ಷದಲ್ಲಿ ಸುಮಾರು 20 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಶುಕ್ರವಾರ ಗದಗ ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಸಭಾಂಗಣದಲ್ಲಿ ನಡೆದ ಕೈಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗದಗ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಸ್ಥಾಪನೆಗೆ ಹೇರಳ ಅವಕಾಶಗಳಿವೆ. ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಪಡಿಸಲು ಹೆಚ್ಚು ಆದ್ಯತೆ ನೀಡಬೇಕಲ್ಲದೇ, ಅಧಿಕಾರಿಗಳು ಅದಕ್ಕೆ ಪೂರಕವಾದ ಕೆಲಸ ಮಾಡಬೇಕು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಕೈಗಾರಿಕೋದ್ಯಮವು ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ನರಸಾಪುರ ಕೈಗಾರಿಕಾ ಪ್ರದೇಶವು 165.75 ಎಕರೆ ವಿಸ್ತಿರ್ಣದಲ್ಲಿ 147 ನಿವೇಶನಗಳನ್ನು ಅಭಿವೃದ್ಧಿಪಡಿಸಿ ಎಲ್ಲ ನಿವೇಶನಗಳನ್ನು ಕೈಗಾರಿಕೋದ್ಯಮಿಗಳಿಗೆ ವಿತರಿಸಲಾಗಿದೆ. ಇದರಲ್ಲಿ 74 ಕೈಗಾರಿಕೆಗಳು ಈಗಾಗಲೆ ಸ್ಥಾಪನೆಗೊಂಡಿದ್ದು, ಇನ್ನುಳಿದ ಕೈಗಾರಿಕೆಗಳು ಅನುಷ್ಠಾನ ಹಂತದಲ್ಲಿವೆ. ಇಲ್ಲಿಯ ಬೇಡಿಕೆ ಅನುಗುಣವಾಗಿ 214 ಎಕರೆ ಭೂಮಿ ಅಭಿವೃದ್ಧಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅಧಿಕಾರಿಗಳು ಉದ್ಯಮಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳುವುದರ ಮೂಲಕ ಬಂಡವಾಳ ಹೂಡುವಂತಹ ವಾತಾವರಣ ಸೃಷ್ಟಿಸಬೇಕು. ಕೈಗಾರಿಕೆ ಆರಂಭಿಸಲು ತಾಂತ್ರಿಕ ಸಮಸ್ಯೆಗಳಿದ್ದರೆ ಆಡಳಿತಾತ್ಮಕವಾಗಿ ಬಗೆಹರಿಸಬೇಕು.
ಐಟಿ, ಬಿಟಿ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಬಂಡವಾಳ ಹೂಡಿಕೆಯಲ್ಲಿಯೇ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ವಿಶೇಷವಾಗಿ ಎಸ್ಐಆರ್ (ಸ್ಪೇಷಲ್ ಇನ್ವೆಸ್ಟಮೆಂಟ್ ರೀಜನ್) ಎಂದು ಗದಗ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಕೈಗಾರಿಕೆಗಳ ಬಂಡವಾಳ ಹೂಡಿಕೆಗಾಗಿ ವಿಶೇಷ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಬೆಂಗಳೂರು, ಮುಂಬಯಿ ಇಂಡಸ್ಟ್ರೀಯಲ್ ಕಾರಿಡಾರ ಎಂದು ಘೋಷಿಸಲಾಗಿದ್ದು, ಇದರಿಂದ ವಿಶೇಷ ಕೈಗಾರಿಕಾ ಅಭಿವೃದ್ಧಿ ಕಾಣಬಹುದು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದಾಗಿ ಕೈಗಾರಿಕೋದ್ಯಮಿಗಳಲ್ಲಿ ಹೊಸ ಚೈತನ್ಯ ಮೂಡಿದ್ದು, ಕೆಲವು ಕಾನೂನು ಅಡೆತಡೆಗಳನ್ನು ಸರಳೀಕರಣಗೊಳಸಿಲಾಗಿದೆ. ರೈತರಿಂದಲೇ ನೇರವಾಗಿ ಸುಮಾರು 100 ಎಕರೆವರೆಗೆ ಭೂಮಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ, ಕೈಗಾರಿಕೋದ್ಯಮ ಬೆಳೆಸಲು ಸಹಕರಿಸಬೇಕು. ಕೋವಿಡ್-19 ಸೋಂಕುವಿನಿಂದಾಗಿ ಪ್ರತಿ ಕ್ಷೇತ್ರದಲ್ಲೂ ಹಿನ್ನಡೆಯಾಗಿದ್ದು, ಅದರಂತೆ ಕೈಗಾರಿಕೆಗಳು ನೆಲಕಚ್ಚಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ದಂಡ, ತೆರಿಗಿಗೆ ಸಂಬಂಧಿಸಿದ ತೊಡಕುಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದರು.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಮಾತನಾಡಿ, ಜಿಲ್ಲೆ ನೇಕಾರಿಕೆಗೆ ಹೆಸರುವಾಸಿ ಆಗಿದ್ದು, ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳ ಜವಳಿ ಆಧಾರಿತ ಕೈಗಾರಿಕೆಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿಪಡಿಸಿ ಬೆಳಸಲು ಸಾಕಷ್ಟುಅವಕಾಶಗಳಿದ್ದು, ಈ ದಿಶೆಯಲ್ಲಿ ಅಧಿಕಾರಿಗಳು ಜವಾಬ್ದಾರಿಯುತ ಕೆಲಸ ಮಾಡಬೇಕು ಎಂದರು.
ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಕೈಗಾರಿಕಾ ಸ್ಥಾಪನೆಗೆ ಬೇಕಾಗುವಂತಹ ಭೂಮಿ, ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಉದ್ಯಮಿಗಳಿಗೆ ಒದಗಿಸಿ ಕೊಡಬೇಕು. ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸುಗಮ ಸಾರಿಗೆ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 6513 ಕೈಗಾರಿಕೆಗಳು ಒಟ್ಟು 63413 ಲಕ್ಷ ಬಂಡವಾಳ ಹೂಡಿ ಒಟ್ಟು 29813 ಜನರಿಗೆ ಉದ್ಯೋಗವಕಾಶ ಕಲ್ಪಿಸಿದೆ. ಗದಗ ಜಿಲ್ಲೆಯಲ್ಲಿ ಆಹಾರ ಪದಾರ್ಥ ಮತ್ತು ಜವಳಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಶಾಸಕರಾದ ರಾಮಣ್ಣ ಲಮಾಣಿ, ಎಚ್.ಕೆ. ಪಾಟೀಲ್, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ್ ದುಂದೂರ, ಜಿಲ್ಲಾಧಿಕಾರಿ ಎಂ. ಸುಂದರೇಶ್ಬಾಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಉದ್ಯಮಿಗಳು ಸಭೆಯಲ್ಲಿ ಇದ್ದರು.