Mandya: ಅಂಕೇಗೌಡರ ಪುಸ್ತಕಮನೆ ರಕ್ಷಣೆಗೆ ಮುಂದಾದ ರಾಜ್ಯ ಸರ್ಕಾರ!
ಮಂಡ್ಯದ ಅಕ್ಷರ ಸಂತ ಅಂಕೇಗೌಡರ 25 ಲಕ್ಷಕ್ಕೂ ಅಧಿಕ ಪುಸ್ತಕಗಳ ಬೃಹತ್ ಸಂಗ್ರಹವು ಸ್ಥಳಾವಕಾಶದ ಕೊರತೆಯಿಂದಾಗಿ ಹಾಳಾಗುವ ಆತಂಕದಲ್ಲಿದೆ. ಶಾಸಕ ದಿನೇಶ್ ಗೂಳಿಗೌಡರ ಮನವಿಗೆ ಸ್ಪಂದಿಸಿರುವ ಸರ್ಕಾರ, ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಲು ರ್ಯಾಕ್ಗಳ ಅಳವಡಿಕೆಗೆ ಅನುದಾನ ನೀಡುವ ಭರವಸೆ ನೀಡಿದೆ.

ಮಂಡ್ಯದ ಅಕ್ಷರ ಸಂತ ಅಂಕೇಗೌಡರ ಅಪರೂಪದ ಜ್ಞಾನ ಭಂಡಾರವನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಂಕೇಗೌಡರ ಈ ಪುಸ್ತಕ ಪ್ರೀತಿಗಾಗಿ ಕೇಂದ್ರ ಸರ್ಕಾರ ಈ ಬಾರಿಯ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.
ಅಂಕೇಗೌಡರ ‘ಪುಸ್ತಕ ಮನೆ’ಯಲ್ಲಿರುವ ಸುಮಾರು 25 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲು ಅಗತ್ಯವಿರುವ ಪುಸ್ತಕದ ರ್ಯಾಕ್ಗಳ ಅಳವಡಿಕೆಗೆ ಅನುದಾನ ಮಂಜೂರು ಮಾಡುವ ಕುರಿತು ಕಡತ ಮಂಡಿಸುವಂತೆ ಅಧಿಕಾರಿಗಳಿಗೆ ಸಚಿವ ಶಿವರಾಜ್ ತಂಗಡಗಿ ಸೂಚಿಸಿದ್ದಾರೆ.
ಗುರುವಾರ ಶಾಸಕ ದಿನೇಶ್ ಗೂಳಿಗೌಡ ಅವರು ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದರು. ಶಾಸಕರ ಮನವಿಗೆ ಸಚಿವರು ತಕ್ಷಣವೇ ಸ್ಪಂದಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿಯ ಅಂಕೇಗೌಡರು ಸಂಗ್ರಹಿಸಿರುವ 25 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಜೋಡಿಸಿಡಲು ಸ್ಥಳಾವಕಾಶದ ಕೊರತೆ ಇರುವ ಕಾರಣ, ಅವುಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ ರಾಶಿ ಹಾಕಲಾಗಿದೆ.
ಮೌಲ್ಯಯುತ ಪುಸ್ತಕಗಳು ಹಾಳಾಗುವ ಆತಂಕವಿದ್ದು ಅವುಗಳನ್ನು ಸಂರಕ್ಷಿಸಲು ಸುಸಜ್ಜಿತ ಸ್ಟೀಲ್ ರ್ಯಾಕ್ ಅಳವಡಿಸಲು ಇಲಾಖೆಯಿಂದ ವಿಶೇಷ ಅನುದಾನ ನೀಡಬೇಕೆಂದು ಶಾಸಕರು ಕೋರಿದ್ದರು. ಈ ಬಗ್ಗೆ ಉಪಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ ಎಂದು ಗೂಳಿಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
