'ಪೊಲೀಸರು ವಿಷ ಕಂಠರಂತೆ ಕೆಲಸ ಮಾಡಿ'
ಬೆಂಗಳೂರು(ಏ.03): ಕೆಲವು ಸಂಕೀರ್ಣ ಪ್ರಕರಣಗಳನ್ನು ತನಿಖೆ ನಡೆಸುವ ವೇಳೆ ಪೊಲೀಸರಿಗೆ ಟೀಕೆ-ಟಿಪ್ಪಣಿ, ಹೊಗಳಿಕೆ-ತೆಗಳಿಕೆ ಬರುತ್ತವೆ. ಅದಕ್ಕೆಲ್ಲ ಪೊಲೀಸರು ತಲೆಕೆಡಿಸಿಕೊಳ್ಳದೆ ವಿಷಕಂಠರಂತೆ ಕೆಲಸ ಮಾಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ಕೋರಮಂಗಲದ ಕೆಎಸ್ಆರ್ಪಿ ಪರೇಡ್ ಮೈದಾನದಲ್ಲಿ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ‘ಪೊಲೀಸ್ ಧ್ವಜ ದಿನಾಚರಣೆ ಹಾಗೂ ಮುಖ್ಯಮಂತ್ರಿ ಪದಕ ಪ್ರದಾನ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂಕೀರ್ಣ ಪ್ರಕರಣಗಳ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಪೊಲೀಸರು ಸಹನೆ ಕಳೆದುಕೊಳ್ಳದೆ ಅತ್ಯಂತ ಚಾಣಾಕ್ಷತನದಿಂದ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈಬರ್ ಅಪರಾಧ ಕೃತ್ಯಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬ್ಯಾಂಕುಗಳಲ್ಲಿ ವಂಚನೆ ಕೃತ್ಯಗಳನ್ನು ಆರ್ಬಿಐ ಸಹಕಾರದಲ್ಲಿ ನಿಯಂತ್ರಿಸಿದ್ದೇವೆ. ಆದ್ದರಿಂದಲೇ ಕರ್ನಾಟಕ ಪೊಲೀಸರಿಗೆ ದೇಶದಲ್ಲೇ ಅತ್ಯುತ್ತಮ ಹೆಸರು ಕೀರ್ತಿ ಸಂದಿದೆ. ಆದರೂ ಟೀಕೆ ಟಿಪ್ಪಣೆ ಕೇಳಿಬರುತ್ತವೆ. ವೃತ್ತಿ ಜೀವನದಲ್ಲಿ ಇವೆಲ್ಲ ಸರ್ವೆ ಸಾಮಾನ್ಯ ವಿಷಯ ಎಂದರು.
ರಾಜ್ಯಕ್ಕೆ ಕಂಟಕವಾಗಿದ್ದ ಮಾದಕ ವಸ್ತು ಮಾಫಿಯಾವನ್ನು ಸದೆ ಬಡೆದಿದ್ದು ನಮ್ಮ ಹೆಮ್ಮೆಯ ಪೊಲೀಸರು. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾವನ್ನು ತಾರ್ಕಿಕವಾಗಿ ಅಂತ್ಯ ಕಾಣಿಸಲಾಗುತ್ತದೆ. ಈ ಜಾಲದಲ್ಲಿದ್ದ ಪ್ರಭಾವಿಗಳು ಜೈಲು ಸೇರಿದ್ದಾರೆ. ಸೈಬರ್ ಕ್ರೈಂ ಪತ್ತೆಯಲ್ಲಿ ಪೊಲೀಸರು ದಕ್ಷತೆ ಮೆರೆದಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ ಕುರಿತಂತೆ ತರಬೇತಿ ನೀಡುವ ಚಿಂತನೆ ಇದೆ. ಕೆಲವು ಸಂದರ್ಭದಲ್ಲಿ ಮಹಿಳೆಯರೇ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು. ಇದಕ್ಕಾಗಿ ಅನುಭವಿ ಅಧಿಕಾರಿಗಳಿಂದ ತರಬೇತಿ ಕೊಡಿಸಲಾಗುತ್ತದೆ ಎಂದು ಹೇಳಿದರು.
ಗೃಹ ಇಲಾಖೆಯ ಹಲವು ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಕಲ ರೀತಿಯ ನೆರವು ನೀಡಿದ್ದಾರೆ. ಪೊಲೀಸರಿಗೆ ಮನೆ ನಿರ್ಮಿಸುವ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಣೆಗೆ 20 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಇದರಲ್ಲಿ ಈಗಾಗಲೇ .7 ಕೋಟಿ ಬಿಡುಗಡೆ ಸಹ ಆಗಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆ ಭರ್ತಿಗೆ ಕೂಡಾ ಅವರು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಗಣನೀಯ ಸೇವೆ ಸಲ್ಲಿಸಿದ 120 ಪೊಲೀಸರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳ ಪದಕವನ್ನು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶದಲ್ಲಿ ದಕ್ಷ ಮತ್ತು ಪ್ರಾಮಾಣಿಕತೆಗೆ ಕರ್ನಾಟಕ ಪೊಲೀಸರು ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಆ ಗೌರವವನ್ನು ಉಳಿಸಿ-ಬೆಳೆಸುವುದು ನಿಮ್ಮ (ಪೊಲೀಸರ) ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶವೇ ಮೆಚ್ಚುವಂತೆ ರಾಜ್ಯ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಪೊಲೀಸರ ನಿಸ್ವಾರ್ಥ ಸೇವೆಯಿಂದ ಶಾಂತಿ ನೆಲೆಯೂರಲು ಸಾಧ್ಯವಾಗಿದೆ. ಶಾಂತಿ ನೆಲೆವೀಡಾದ ಕರ್ನಾಟಕದಲ್ಲಿ ಭಯೋತ್ಪಾದಕ ಮತ್ತು ನಕ್ಸಲ್ ಚಟುವಟಿಕೆಗಳು ನಡೆಯುತ್ತಿದ್ದವು. ಜೀವದ ಹಂಗನ್ನು ತೊರೆದು ಆ ಸಮಾಜಘಾತುಕ ಶಕ್ತಿಗಳನ್ನು ಸೆದೆ ಬಡಿಯುವಲ್ಲಿ ಪೊಲೀಸರ ಕರ್ತವ್ಯ ನಿಷ್ಠೆಗೆ ಅಭಾರಿಯಾಗಿದ್ದೇನೆ ಎಂದು ಪ್ರಶಂಸಿಸಿದರು.