- Home
- Karnataka Districts
- 'ಮನೇಲಿ ಗ್ಯಾಸ್ ಖಾಲಿ, ಅಡುಗೆ ಆಗಿಲ್ಲ ಸಾರ್..' : ಪರೀಕ್ಷೆ ಬರೆಯಲು ಹೋಗದೇ ಗ್ಯಾಸ್ಗಾಗಿ ಕ್ಯೂ ನಿಂತ ಸ್ಟೂಡೆಂಟ್!
'ಮನೇಲಿ ಗ್ಯಾಸ್ ಖಾಲಿ, ಅಡುಗೆ ಆಗಿಲ್ಲ ಸಾರ್..' : ಪರೀಕ್ಷೆ ಬರೆಯಲು ಹೋಗದೇ ಗ್ಯಾಸ್ಗಾಗಿ ಕ್ಯೂ ನಿಂತ ಸ್ಟೂಡೆಂಟ್!
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಪ್ರಾರಂಭವಾಗಿ 27ನೇ ದಿನಕ್ಕೆ ಕಾಲಿಟ್ಟಿದ್ದು, ಅದರ ಬಿಸಿ ಭಾರತದ ಹಳ್ಳಿಹಳ್ಳಿಗೂ ತಟ್ಟಿದೆ. ಗಡಿಜಿಲ್ಲೆ ಬೀದರ್ ಜಿಲ್ಲೆಯಲ್ಲಿ ಅಡುಗೆ ಅನಿಲದ (LPG) ತೀವ್ರ ಕೊರತೆಯಿಂದ ಜನಸಾಮಾನ್ಯರನ್ನ ಹೈರಾಣಾಗಿಸಿದೆ.

ಪರೀಕ್ಷೆಗೆ ಹೋಗದೆ ಗ್ಯಾಸ್ಗಾಗಿ ಕಾಯುತ್ತಿರುವ ಸ್ಟೂಡೆಂಟ್!
ಇಂದು ಬೆಳಿಗ್ಗೆ ಬೀದರ್ ನಗರದ ಜಿಲ್ಲಾ ಕ್ರೀಡಾಂಗಣದ ಬಳಿಯಿರುವ ಹೆಚ್ಪಿ ಗ್ಯಾಸ್ ಏಜೆನ್ಸಿ ಮುಂದೆ ಮನಕಲುಕುವ ದೃಶ್ಯವೊಂದು ಕಂಡುಬಂತು. ವಿವೇಕಾನಂದ ಎಂಬ ವಿದ್ಯಾರ್ಥಿ ಇಂದು ಬೆಳಿಗ್ಗೆ 11 ಗಂಟೆಗೆ ಪರೀಕ್ಷೆಗೆ ಪರೀಕ್ಷೆಗೆ ತಯಾರಿ ನಡೆಸಬೇಕಿತ್ತು, ಪರೀಕ್ಷೆ ಬರೆಯಲು ಸಿದ್ಧವಾಗಬೇಕಿತ್ತು. ಆದರೆ ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲದ ಕಾರಣ, ಪರೀಕ್ಷೆಯ ಸಿದ್ಧತೆಯನ್ನು ಬಿಟ್ಟು ಬೆಳಿಗ್ಗೆ 7 ಗಂಟೆಯಿಂದಲೇ ಖಾಲಿ ಸಿಲಿಂಡರ್ ಹಿಡಿದು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾನೆ.
ಮನೇಲಿ ಗ್ಯಾಸ್ ಇಲ್ಲ ಸರ್, ಅಡುಗೆ ಆಗಿಲ್ಲ..
ಮನೆಯಲ್ಲಿ ಗ್ಯಾಸ್ ಇಲ್ಲದೆ ಅಡುಗೆಯೂ ಆಗಿಲ್ಲ, ಟಿಫನ್ ಕೂಡ ಮಾಡಿಲ್ಲ. ಹಸಿವಿನಿಂದಲೇ ಸಿಲಿಂಡರ್ ಹಿಡಿದು ಸಾಲಿನಲ್ಲಿ ನಿಂತಿದ್ದೇನೆ ಎಂದು ವಿವೇಕಾನಂದ ಸುವರ್ಣ ನ್ಯೂಸ್ ಮುಂದೆ ತನ್ನ ನೋವನ್ನು ತೋಡಿಕೊಂಡಿದ್ದಾನೆ. 'ಗ್ಯಾಸ್ ಬುಕ್ ಮಾಡಿ ಎಂಟು ದಿನಗಳಾಗಿವೆ. ದಿನವೂ ಏಜೆನ್ಸಿ ಮುಂದೆ ಬಂದು ಕಾಯುವುದೇ ಕೆಲಸವಾಗಿದೆ. ಈಗ ಅನಿವಾರ್ಯವಾಗಿ ಹೋಟೆಲ್ನಲ್ಲಿ ತಿಂಡಿ ತಿಂದು ಪರೀಕ್ಷೆಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ' ಎಂದು ಆತ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.
ಸುಡುವ ಬಿಸಿಲಿನಲ್ಲಿ ಜನರ ಪರದಾಟ
ಬೀದರ್ನಲ್ಲಿ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದರೂ, ಜನರು ಮಾತ್ರ ಇದ್ಯಾವುದು ಲೆಕ್ಕಿಸದೇ ಗ್ಯಾಸ್ಗಾಗಿ ಏಜೆನ್ಸಿಗಳ ಮುಂದೆ ಮುಗಿಬೀಳುತ್ತಿದ್ದಾರೆ. ಬಿಸಿಲಿದ್ದರೂ ನಮ್ಮ ಹೊಟ್ಟೆಗೆ ಊಟ ಮುಖ್ಯ. ಇಲ್ಲಿ ಕಷ್ಟಪಟ್ಟರೆ ಮಾತ್ರ ಅಡುಗೆ ಮಾಡಲು ಗ್ಯಾಸ್ ಸಿಗುತ್ತದೆ ಎನ್ನುವುದು ಜನರ ಆಕ್ರೋಶದ ನುಡಿ. ಗ್ಯಾಸ್ ವಿತರಣೆಯಲ್ಲಿನ ಈ ವಿಳಂಬವು ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿರುವುದು ಜಿಲ್ಲಾಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ.
ಏಜೆನ್ಸಿಗಳ ಮುಂದೆ ಕ್ಯೂ
ನಗರದ ಬಹುತೇಕ ಗ್ಯಾಸ್ ಏಜೆನ್ಸಿಗಳ ಮುಂದೆ ನಿತ್ಯವೂ ನೂರಾರು ಅಡಿ ಉದ್ದದ ಸರತಿ ಸಾಲುಗಳು ಕಂಡುಬರುತ್ತಿವೆ. ಗ್ಯಾಸ್ ಅಭಾವಕ್ಕೆ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವೋ ಅಥವಾ ಸ್ಥಳೀಯ ವಿತರಣಾ ದೋಷವೋ ಎಂಬ ಗೊಂದಲದಲ್ಲಿ ಗ್ರಾಹಕರಿದ್ದಾರೆ.
ಗ್ಯಾಸ್ ವಿತರಣೆ ಯಾವಾಗ?
ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಸಾರ್ವಜನಿಕರ ಪ್ರತಿಭಟನೆ ಉಗ್ರರೂಪ ತಾಳುವ ಸಾಧ್ಯತೆಯಿದೆ.

