Sarvadharma Sammelana: ಸುಖಿ, ನಿರೋಗಿ ಸಮಾಜಕ್ಕೆ ಧರ್ಮಸ್ಥಳ ಶ್ರಮ: ರಾಜ್ಯಪಾಲ
ಬೆಳ್ತಂಗಡಿ(ಡಿ.03): ಸರ್ವರೂ ಸುಖಿಗಳಾಗಿರಬೇಕು, ನಿರೋಗಿಗಳಾಗಿರಬೇಕು ಎಂಬ ನಮ್ಮ ಪೂರ್ವಜರ ಆಶಯವನ್ನು ಸಾಕಾರಗೊಳಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ(Dharmasthala) ಅಹರ್ನಿಶಿ ಶ್ರಮಿಸುತ್ತಿದೆ ಎಂದು ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thaawarchand Gehlot) ಹೇಳಿದ್ದಾರೆ.
ಧರ್ಮಸ್ಥಳ ಲಕ್ಷದೀಪೋತ್ಸವದ ಸಂದರ್ಭ ಗುರುವಾರ ನಡೆದ 89ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿದ ರಾಜ್ಯಪಾಲ(Governor of Karnataka) ಥಾವರ್ ಚಂದ್ ಗೆಹ್ಲೋಟ್
ಮಾನವ ವಿಕಾಸದ ಸರ್ವೋತ್ಕೃಷ್ಟಸ್ಥಳ ಧರ್ಮಸ್ಥಳ. ಭಕ್ತಿಯ ಮೂಲಕ ಸಾಮಾಜಿಕ ಪರಿವರ್ತನೆಯನ್ನೂ ಮಾಡಲಾಗುತ್ತಿದೆ. ಇದರಿಂದ ದೇವಸ್ಥಾನದ(Temple) ಪರಂಪರೆ ಉನ್ನತಿಗೇರಿದೆಯಲ್ಲದೆ ದೇಶದಲ್ಲಿ ಮಾತ್ರವಲ್ಲದೆ ವಿಶ್ವವ್ಯಾಪಿಯಾಗುತ್ತಿದೆ ಎಂದ ಗೆಹ್ಲೋಟ್
ಧಾರ್ಮಿಕತೆ, ಸಾಂಸ್ಕೃತಿಕತೆಯೊಂದಿಗೆ ಆರ್ಥಿಕ ಪ್ರಗತಿಗೆ ಅನೇಕ ಯೋಜನೆಗಳನ್ನು ಇಲ್ಲಿ ತಂದಿರುವುದು ಅದ್ವಿತೀಯ. ಹೆಗ್ಗಡೆಯವರ ಸರಳತೆ, ಆದರ್ಶ ಜೀವನ ಎಲ್ಲರಿಗೂ ಪ್ರೇರಣೆ ನೀಡುವಂತಾಗಿದೆ. ಅವರು ತಿಳಿಸಿದ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯುವಂತಾಗಬೇಕು. ಮಾನವ ಸೇವೆಗಾಗಿ ಅವರಿಗೆ ಪದ್ಮವಿಭೂಷಣ ಸಂದಿರುವುದನ್ನು ನೆನಪಿಸಿದ ಅವರು, ಧರ್ಮಾಧಿಕಾರತ್ವದ ಸುವರ್ಣ ಕಾಲ ಇದಾಗಿದೆ ಎಂದು ವಿಶ್ಲೇಷಿಸಿದ ರಾಜ್ಯಪಾಲರು
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಎಸ್.ವ್ಯಾಸ ಯೋಗ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಭಟ್ಟ ಅವರು, ಧರ್ಮವು ಸಮಸ್ತ ವಿಶ್ವದ ಚಾಲನೆಗೆ ಆಧಾರ. ಧರ್ಮದಲ್ಲಿಯೇ ಎಲ್ಲವೂ ಪ್ರತಿಷ್ಠಿತವಾಗಿದೆ. ಧರ್ಮದಲ್ಲಿ ಬುದ್ಧಿ ನೆಲೆಗೊಳ್ಳಬೇಕು. ಧರ್ಮದಲ್ಲಿ ವೈಯಕ್ತಿಕ ಬೇಡಿಕೆಗಳನ್ನು ತಂದಾಗ ಅದು ಸಂಕುಚಿತವಾಗುತ್ತದೆ ಎಂದರು.
ಭಾರತೀಯ ಶಿಕ್ಷಣ ಪದ್ಧತಿಯಲ್ಲಿ(Indian Education System) ಸಾಮರಸ್ಯ ಪರಂಪರೆ ಅಳವಡಿಸಬೇಕು. ಶಿಕ್ಷಣ ಸಂಸ್ಕೃತ-ಸಂಸ್ಕೃತಿಯ ವಾಹಕವಾಗಬೇಕು. ಮನುಷ್ಯ- ಮನುಷ್ಯನ ನಡುವೆ ಬಿರುಕು ತರುವುದು ಎಂದಿಗೂ, ಯಾವತ್ತಿಗೂ ಮಾನ್ಯವಾಗುವುದಿಲ್ಲ. ಇಲ್ಲಿ ಹೆಗ್ಗಡೆಯವರು ಭೇಟಿಯಾದ ಸಾವಿರಾರು ಭಕ್ತರೊಂದಿಗೆ ಆಪ್ತಸಂವಾದ ನಡೆಸುವುದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ. ಇದು ಭಗವಂತನ ಪ್ರೇರಣೆಯಿಂದ ಮಾತ್ರ ಸಾಧ್ಯ ಎಂದ ಪ್ರೊ. ರಾಮಚಂದ್ರ ಭಟ್ಟ
ತಾವು ಪೀಠದ ಕರ್ತವ್ಯ ಸ್ವೀಕರಿಸಿದ ದಿನದಿಂದ ದೇಶದಲ್ಲಿನ ವಿವಿಧ ಧರ್ಮಗಳ ಮಹತ್ ಸಂದೇಶಗಳ ಸದ್ವಿಚಾರಗಳನ್ನು ತಿಳಿದು ನಮ್ಮ ಪರಂಪರೆ ಪಾಲಿಸುತ್ತಾ, ಯಾವುದೇ ಸಂಕುಚಿತ ಭಾವನೆಗಳಿಗೆ ನಿರ್ಬಂಧಿಸಿಕೊಳ್ಳದೆ, ಪ್ರಗತಿಪರ ಚಿಂತನೆಗಳೊಂದಿಗೆ, ಲೌಕಿಕ ಹಾಗೂ ಪಾರಮಾರ್ಥಿಕ ಎರಡೂ ದಿಕ್ಕುಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಿದ್ದೇನೆ ಎಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ(Dr Veerendra Heggade)
ಸ್ವಾತಂತ್ರ್ಯ ದೊರಕಿದ ಬಳಿಕ 75 ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಮೇಲು-ಕೀಳು ಎಂಬಂತಹ ವ್ಯತ್ಯಾಸ ಮೊದಲಿಗಿಂತ ಕಡಿಮೆಯಾಗಿದೆ. ಧರ್ಮದ ಮರ್ಮವಿರುವುದು ಆಚರಣೆಯಲ್ಲಿ. ಆದ್ದರಿಂದಲೇ ಸತ್ಯಂ ವದ ಧರ್ಮಂ ಚರ ಎಂದು ಉಪನಿಷತ್ತಿನಲ್ಲಿ ಹೇಳಿರುವುದು ಎಂದು ಹೆಗ್ಗಡೆ ವಿವರಿಸಿದರು.
ಕನ್ನಡ ಪ್ರಾಧ್ಯಾಪಕ, ಪರಸ್ಪರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ಸರ್ಫಾಜ್ ಚಂದ್ರಗುತ್ತಿ ಅವರು ಭಾರತೀಯ ಧರ್ಮಗಳು ಎಂಬ ವಿಚಾರದ ಬಗ್ಗೆ, ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಎಸ್.ಪದ್ಮ ಅವರು ಜೈನ ಧರ್ಮದ ಮೌಲಿಕತೆ ಮತ್ತು ಮಹತ್ವದ ಕುರಿತು ಹಾಗೂ ಶಿವಮೊಗ್ಗ ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ವೀರೇಶ್ ವಿ.ಮೊರಾಸ್ ಅವರು ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ್ಯ ಕುರಿತು ಉಪನ್ಯಾಸ ನೀಡಿದರು.
ಉದ್ಘಾಟಕರ ಸಮ್ಮಾನ ಪತ್ರವನ್ನು ಉಪನ್ಯಾಸಕ ಸುನಿಲ್ ಪಂಡಿತ್, ಅಧ್ಯಕ್ಷರ ಸಮ್ಮಾನ ಪತ್ರವನ್ನು ಶ್ರದ್ಧಾ ಅಮಿತ್ ವಾಚಿಸಿದರು. ರಾಜ್ಯಪಾಲ ಹಾಗೂ ಅಧ್ಯಕ್ಷರನ್ನು ಡಾ.ಹೆಗ್ಗಡೆ ಸಮ್ಮಾನಿಸಿದರು. ಉಪನ್ಯಾಸಕರನ್ನು ಡಿ.ಸುರೇಂದ್ರ ಕುಮಾರ್ ಸಮ್ಮಾನಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗುರುವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಭವ್ಯ ಮೆರವಣಿಗೆಯಲ್ಲಿ ಅವರನ್ನು ಸ್ವಾಗತಿಸಲಾಯಿತು. ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಡಿ. ಶ್ರೇಯಸ್ ಕುಮಾರ್ ರಾಜ್ಯಪಾಲರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.
ದೇವರ ದರ್ಶನದ ಬಳಿಕ ರಾಜ್ಯಪಾಲರು ಅನ್ನಪೂರ್ಣ ಭೋಜನಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯಪಾಲರು ಮಂಜೂಷಾ ವಸ್ತು ಸಂಗ್ರಹಾಲಯ ಹಾಗೂ ಕಾರ್ ಮ್ಯೂಸಿಯಂಗೂ ಭೇಟಿ ನೀಡಿ ಸವಿವರ ಮಾಹಿತಿ ಪಡೆದರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಇದ್ದರು.
ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯಲ್ಲಿ ರಾಜ್ಯಾದ್ಯಂತ 5.55 ಲಕ್ಷ ಸ್ವಸಹಾಯ ಸಂಘಗಳಿದ್ದು 50 ಲಕ್ಷ ಕುಟುಂಬಗಳು ಲಾಭ ಪಡೆಯುತ್ತಿವೆ. ಬ್ಯಾಂಕುಗಳಿಂದ 14 ಸಾವಿರ ಕೋಟಿ ರು.ಗಳಷ್ಟು ವ್ಯವಹಾರಕ್ಕೆ ಒದಗಿಸಲಾಗಿದೆ. 20 ಲಕ್ಷ ಮಂದಿ ಜೀವನ ಮಧುರ ಪಾಲಿಸಿ ಹೊಂದಿದ್ದಾರೆ. ಧರ್ಮೋತ್ಥಾನ ಟ್ರಸ್ಟ್ ಮೂಲಕ 843 ದೇವಾಲಯಗಳ ಪುನರ್ ನಿರ್ಮಾಣಕ್ಕಾಗಿ 14 ಕೋಟಿ ರು.ಗಳ ಸಹಾಯ ಮಾಡಲಾಗಿದೆ. ಆರ್ಸೆಟಿ ಮೂಲಕ ದೇಶಾದ್ಯಂತ 585 ತರಬೇತಿ ಕೇಂದ್ರಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಸ್ವ-ಉದ್ಯೋಗ ತರಬೇತಿ ನೀಡಿ ಸ್ವಂತ ಉದ್ಯೋಗ ಪ್ರಾರಂಭಿಸುವಂತೆ ಮಾಡಲಾಗಿದೆ ಎಂದು ತಿಳಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ