ಕನ್ನಡ ಬೆಳವಣಿಗೆಗೆ ಶಿಕ್ಷಣ ನೀತಿ ಸಹಕಾರಿ: ಡಿಸಿಎಂ ಅಶ್ವತ್ಥ ನಾರಾಯಣ
ಬೆಂಗಳೂರು(ನ.12): ಸಾಹಿತ್ಯವಾಗಿ ಮತ್ತು ಮಾತೃಭಾಷೆಯಾಗಿ ಕನ್ನಡ ಬೆಳೆಯಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್ಇಪಿ-2020) ಸಹಕಾರಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕೆಂಪೇಗೌಡ ರಸ್ತೆಯಲ್ಲಿರುವ ಎಫ್ಕೆಸಿಸಿಐ ಭವನದಲ್ಲಿ ರೋಟರಿ ಜಿಲ್ಲೆ-3190 ಸಹಯೋಗದಲ್ಲಿ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿದ ಅವರು, ಶಿಕ್ಷಣ ನೀತಿಯಲ್ಲಿ 3ರಿಂದ 6 ವಯಸ್ಸಿನಲ್ಲಿಯೇ ಕನಿಷ್ಠ 3 ಭಾಷೆ ಕಲಿಸಲು ಅವಕಾಶ ಕಲ್ಪಿಸಿರುವುದರಿಂದ ಕನ್ನಡದ ಜೊತೆಗೆ ಇನ್ನಿತರ ಭಾಷೆ ಕಲಿಕೆಗೂ ಸಹಕಾರಿಯಾಗಲಿದೆ ಎಂದರು.
ಸಂಸದ ಪಿ.ಸಿ. ಮೋಹನ್ ಮಾತನಾಡಿ, ಕನ್ನಡಿಗರು ಸಹೃದಯರಾಗಿರುವುದು ಖುಷಿಯ ವಿಚಾರ. ಆದರೆ, ಅನ್ಯ ಭಾಷಿಕರಿಗೆ ಕನ್ನಡ ಕಲಿಸದೆ ತಾವೇ ಅನ್ಯ ಭಾಷೆಯನ್ನು ಕಲಿಯುತ್ತಿರುವುದೇ ಕನ್ನಡಕ್ಕೆ ಮುಳುವಾಗಿದೆ. ಆದ್ದರಿಂದ ತಾವು ಬೇರೆ ಭಾಷೆಯನ್ನು ಕಲಿಯುವ ಜೊತೆಗೆ ಬೇರೆಯವರಿಗೂ ಕನ್ನಡ ಕಲಿಸುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳ 11 ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ. ಸುಂದರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್. ನಾಗಾಭರಣ, ರೋಟರಿ ಜಿಲ್ಲಾ ಪಾಲಕರಾದ ಬಿ.ಎಲ್. ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರವು ಈ ವರ್ಷ ‘ಕನ್ನಡ ಕಾಯಕ ವರ್ಷಾಚರಣೆ’ ಆಚರಿಸುತ್ತಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ವಿದೇಶದಿಂದ ಬಂದು ನೆಲೆಸಿರುವವರಿಗೂ ಕನ್ನಡ ಕಲಿಸುವ ಪೂರಕ ವಾತಾವರಣ ನಿರ್ಮಿಸಬಹುದು. ಇದರ ಜೊತೆಗೆ ಕನ್ನಡ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ವಿಶ್ವಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಪರಿಚಯಿಸುವುದು ಮತ್ತು ಜಾಗತಿಕವಾಗಿ ಕನ್ನಡ ಪಸರಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರು ತಮ್ಮ ಕ್ಷೇತ್ರಗಳಲ್ಲಿ ವ್ಯವಹಾರಕವಾಗಿ ಕನ್ನಡ ಬಳಕೆ ಮಾಡುವುದು ಮತ್ತು ಪ್ರತಿದಿನ ಕನ್ನಡವನ್ನೇ ಮಾತನಾಡಿದರೆ ಇದಕ್ಕಿಂತ ಕನ್ನಡ ಸೇವೆ ಮತ್ತೊಂದಿಲ್ಲ. ಇದರ ಜೊತೆಗೆ ಸಾಧ್ಯವಾದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇನ್ನಿತರ ಸಂಘಟನೆಗಳೊಂದಿಗೆ ಸೇರಿ ಮತ್ತಷ್ಟು ಕನ್ನಡ ಕಾಯಕ ಮಾಡೋಣ ಎಂದು ಹೇಳಿದರು.