- Home
- Karnataka Districts
- ಗಂಗಾ-ಪಂಚಮಿ ಮಾತಿಗೆ ಮರುಳಾದ್ರೆ ಸರ್ವಸ್ವವೂ ಉಡೀಸ್; ನಿರ್ಜನ ಪ್ರದೇಶಕ್ಕೆ ಎಂಟ್ರಿಯಾದ್ರೆ ಕ್ಲೋಸ್!
ಗಂಗಾ-ಪಂಚಮಿ ಮಾತಿಗೆ ಮರುಳಾದ್ರೆ ಸರ್ವಸ್ವವೂ ಉಡೀಸ್; ನಿರ್ಜನ ಪ್ರದೇಶಕ್ಕೆ ಎಂಟ್ರಿಯಾದ್ರೆ ಕ್ಲೋಸ್!
ಯುವಕರನ್ನೇ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಐವರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳಿಂದ ಪೊಲೀಸರು 10.20 ಲಕ್ಷ ಮೌಲ್ಯದ ಚಿನ್ನ, ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಲದಿಂದ ಇನ್ನಷ್ಟು ಮಂದಿ ಮೋಸ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಹನಿಟ್ರ್ಯಾಪ್ ಗ್ಯಾಂಗ್
ದಾವಣಗೆರೆಯಲ್ಲಿ ಆಕ್ಟಿವ್ ಆಗಿದ್ದ ಹನಿಟ್ರ್ಯಾಪ್ ಗ್ಯಾಂಗ್ನ ಐವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದು, ಪ್ರಾಥಮಿಕ ತನಿಖೆಯಲ್ಲಿ ಗ್ಯಾಂಗ್ ಸದಸ್ಯರ ಅಸಲಿ ಮುಖವಾಡ ಬಯಲಾಗಿದೆ.

ಸ್ಥಿತಿವಂತ ಯುವಕರೇ ಟಾರ್ಗೆಟ್
ಜಗದೀಶ್ (35), ಗಂಗಾ ಮಲ್ಲೇಶ್ ನಾಯ್ಕ (25), ವೆಂಕಟೇಶ್ (30), ಪಂಚಮಿ (34) ಮತ್ತು ಸುರೇಶ್ ಬಂಧಿತ ಆರೋಪಿಗಳು. ಈ ತಂಡದಲ್ಲಿದ್ದ ಗಂಗಾ ಮತ್ತು ಪಂಚಮಿ ಮೊದಲು ಆರ್ಥಿಕವಾಗಿ ಸದೃಢವಾಗಿರುವ ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದರು. ನಂತರ ನಯವಾದ ಮಾತುಗಳಿಂದ ಯುವಕರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಇತ್ತೀಚೆಗೆ ಪ್ರತಿಷ್ಟಿತ ಮನೆತನದ ಯುವಕನೋರ್ವನ ಪರಿಚಯವನ್ನು ಪಂಚಮಿ ಮಾಡಿಕೊಂಡಿದ್ದಳು. ಯುವಕನ್ನು ಪುಸಲಾಯಿಸಿ ಶಿವನಹಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಗಂಗಾ, ಜಗದೀಶ್, ವೆಂಕಟೇಶ್ ಮತ್ತು ಸುರೇಶ್ ದಾಳಿ ನಡೆಸಿದ್ದಾರೆ. ಯುವಕನ ಮೇಲೆ ಹಲ್ಲೆ ನಡೆಸಿ ಆತ ಧರಿಸಿದ ಚಿನ್ನಾಭರಣ, ಆತನಲ್ಲಿದ್ದ ಹಣ ಪಡೆದುಕೊಂಡು ಪರಾರಿಯಾಗಿದ್ದರು.
10.20 ಲಕ್ಷ ರೂಪಾಯಿ ಮೌಲ್ಯದ 80.16ಗ್ರಾಂ ಚಿನ್ನ
ಈ ಸಂಬಂಧ ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ 10.20 ಲಕ್ಷ ರೂಪಾಯಿ ಮೌಲ್ಯದ 80.16ಗ್ರಾಂ ಚಿನ್ನ, 8 ಲಕ್ಷ ರೂ. ಮೌಲ್ಯದ ಇನೋವಾ ಕಾರ್ ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ರೀತಿ ಬೇರೆಯವರಿಗೆ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

