ಗಾರ್ಡನ್ ಸಿಟಿ ಬೆಂಗಳೂರಲ್ಲಿ ದೇಶದ ಚೊಚ್ಚಲ ಕ್ಲೀನ್ ಏರ್ ಸ್ಟ್ರೀಟ್ಗೆ ಚಾಲನೆ
ಬೆಂಗಳೂರು(ನ.08): ವಾಯು ಗುಣಮಟ್ಟ ಸುಧಾರಿಸಲು ಹಾಗೂ ಸೈಕಲ್ ಮತ್ತು ವಿದ್ಯುತ್ ಚಾಲಿತ ವಾಹನಗಳ ಬಳಕೆ ಪ್ರೋತ್ಸಾಹಿಸಲು ದೇಶದಲ್ಲೇ ಪ್ರಥಮ ಬಾರಿಗೆ ನಗರದ ‘ಚರ್ಚ್ ಸ್ಟ್ರೀಟ್’ನಲ್ಲಿ ‘ಕ್ಲೀನ್ ಏರ್ಸ್ಟ್ರೀಟ್’ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ನಗರದ ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್ನಲ್ಲಿ ಶನಿವಾರ ನಗರ ಭೂ ಸಾರಿಗೆ ನಿರ್ದೇಶನಾಲಯ, ಯುಕೆ ಕ್ಯಾಟಪಲ್ಟ್ , ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ಚರ್ಚ್ ಸ್ಟ್ರೀಟ್ ಆಕ್ಯುಪೆಂಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಯೋಜನೆಗೆ ಚಾಲನೆ ನೀಡಿದ ಯಡಿಯೂರಪ್ಪ
ಬೆಂಗಳೂರಿನಲ್ಲಿ ವಾಯುಮಾಲಿನ್ಯ ತಡೆದು ಸ್ವಚ್ಛ ಗಾಳಿ ಒದಗಿಸಲು ಈ ಯೋಜನೆ ಸಹಕಾರಿ. 2021ರ ಫೆಬ್ರುವರಿ ಅಂತ್ಯದವರೆಗೆ ಚರ್ಚ್ ಸ್ಟ್ರೀಟ್ನಲ್ಲಿ ಯೋಜನೆ ಜಾರಿಯಲ್ಲಿರಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ಮಾರ್ಗದಲ್ಲಿ ಪಾದಚಾರಿಗಳು, ತುರ್ತು ಸೇವೆ ಹಾಗೂ ಸ್ಥಳೀಯ ನಿವಾಸಿಗಳ ವಾಹನ ಬಿಟ್ಟು ಬೇರೆಲ್ಲ ವಾಹನ ನಿರ್ಬಂಧಿಸಲಾಗಿದೆ ಎಂದ ಸಿಎಂ
ಶುದ್ಧ ಗಾಳಿ, ನೀರು ನಾಗರಿಕನ ಹಕ್ಕು. ನಗರದಲ್ಲಿ 85 ಲಕ್ಷಕ್ಕೂ ಅಧಿಕ ವಾಹನಗಳಿದ್ದು, ಶೇ.50ರಷ್ಟುವಾಯುಮಾಲಿನ್ಯ ಉಂಟಾಗುತ್ತಿದೆ. ವಾಯುಮಾಲಿನ್ಯ ವಾರ್ಷಿಕ ಶೇ.10ರಷ್ಟು ಹೆಚ್ಚುತ್ತಿದೆ. ಹೀಗಾಗಿ ಎಲ್ಲರೂ ಪರಿಸರ ಸಂರಕ್ಷಿಸಬೇಕಿದೆ ಎಂದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿರುವ ಚಚ್ರ್ಸ್ಟ್ರೀಟ್ನಲ್ಲಿ ಪಾದಚಾರಿಗಳು ಹೆಚ್ಚು, ಜನದಟ್ಟಣೆಯೂ ಅಧಿಕ. ಸದ್ಯ ಯೋಜನೆಯಿಂದ ಚಚ್ರ್ಸ್ಟ್ರೀಟ್ನಲ್ಲಿ ಸೈಕಲ್ಗಳು, ವಿದ್ಯುತ್ಚಾಲಿತ ವಾಹನಗಳು ಮಾತ್ರ ಸಂಚರಿಸಲಿವೆ ಎಂದು ಹೇಳಿದರು.
ಶಾಸಕ ಎನ್.ಎ.ಹ್ಯಾರಿಸ್ ಮಾತನಾಡಿ, ದೂರದೃಷ್ಟಿಯಿಂದ ಆರಂಭಿಸಿರುವ ಈ ಯೋಜನೆಯಿಂದ ಬೆಂಗಳೂರು ಭವಿಷ್ಯದಲ್ಲಿ ಸಂಚಾರ ದಟ್ಟಣೆ, ವಾಯುಮಾಲಿನ್ಯ ತುಂಬಿಕೊಂಡ ದೆಹಲಿ, ಮುಂಬೈ ಮಹಾನಗರಗಳಂತೆ ಆಗುವುದನ್ನು ತಪ್ಪಿಸಲಿದೆ. ಯೋಜನೆ ಜಾರಿಯಲ್ಲಿರುವ ನಾಲ್ಕು ತಿಂಗಳು ವಿದ್ಯುತ್ ವಾಹನ ಬಳಕೆ ಹೆಚ್ಚಲಿದೆ ಎಂದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 12ರ ವರೆಗೆ ಚರ್ಚ್ ಸ್ಟ್ರೀಟ್ನಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ನಾಲ್ಕು ತಿಂಗಳಲ್ಲಿ ಚಚ್ರ್ಸ್ಟ್ರೀಟ್ನ ವಾಯುಮಾಲಿನ್ಯ ಎಷ್ಟುತಡೆಯಲಾಗಿದೆ ಎಂಬುದನ್ನು ಪರೀಕ್ಷಿಸಲಾಗುವುದು. ಯೋಜನೆ ಯಶಸ್ವಿಯಾದರೆ ರಜಾದಿನದ ಜೊತೆಗೆ ಉಳಿದ ದಿನಗಳಲ್ಲಿ ಯೋಜನೆ ಜಾರಿ ಮಾಡಲಾಗುವುದು ಹಾಗೂ ನಗರದ ಇತರೆಡೆಗೆ ಮತ್ತು ಬೇರೆ ಜಿಲ್ಲೆಗಳಲ್ಲಿ ಯೋಜನೆ ಅಳವಡಿಸಲಾಗುವುದು ಎಂದರು.
ಸಮಾರಂಭದ ಬಳಿಕ ಪ್ರದರ್ಶನದಲ್ಲಿದ್ದ ವಿವಿಧ ಕಂಪನಿಗಳ ವಿನೂತನ ವಿದ್ಯುತ್ ಚಾಲಿತ ದ್ವಿ ಮತ್ತು ತ್ರಿಚಕ್ರ ವಾಹನಗಳು, ಸೈಕಲ್ಗಳನ್ನು ಓಡಿಸಿ ನೆರೆದಿದ್ದ ಸಾರ್ವಜನಿಕರು, ಸ್ಥಳೀಯರು ವಾಯುಮಾಲಿನ್ಯ ಬಗ್ಗೆ ಜಾಗೃತಿ ಮೂಡಿಸಿದರು.
ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಅಪರ ಮುಖ್ಯ ಕಾರ್ಯದರ್ಶಿ ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.