ಒಂದೇ ಶಾಲೆಯ 17 ವಿದ್ಯಾರ್ಥಿಗಳು ಅಗ್ನಿವೀರರಾಗಿ ಆಯ್ಕೆ: ಧಾರವಾಡದ ಯುವಕರ ಐತಿಹಾಸಿಕ ಸಾಧನೆ
ಅಚಲ ನಿರ್ಧಾರ, ಸೈನ್ಯಕ್ಕೆ ಸೇರ್ಪಡೆ ಆಗಲೇಬೇಕು ಎಂಬ ತವಕ, ನಿರಂತರ ಪರಿಶ್ರಮ ದೇಹ ದಂಡನೆ ಈ ಎಲ್ಲ ಪ್ರಯತ್ನಕ್ಕೂ ಆ ವಿದ್ಯಾರ್ಥಿಗಳಿಗೆ ಇದೀಗ ಪ್ರತಿಫಲ ಸಿಕ್ಕಿದೆ. ಒಂದೇ ಶಾಲೆಯಲ್ಲಿ ಕಲಿತ ಒಟ್ಟು 17 ಜನ ಯುವಕರು ಇದೀಗ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.

ಶಿಕ್ಷಕರಿಂದ ಅಭಿನಂದನೆ
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಜೂ.08): ಅಚಲ ನಿರ್ಧಾರ, ಸೈನ್ಯಕ್ಕೆ ಸೇರ್ಪಡೆ ಆಗಲೇಬೇಕು ಎಂಬ ತವಕ, ನಿರಂತರ ಪರಿಶ್ರಮ ದೇಹ ದಂಡನೆ ಈ ಎಲ್ಲ ಪ್ರಯತ್ನಕ್ಕೂ ಆ ವಿದ್ಯಾರ್ಥಿಗಳಿಗೆ ಇದೀಗ ಪ್ರತಿಫಲ ಸಿಕ್ಕಿದೆ. ಒಂದೇ ಶಾಲೆಯಲ್ಲಿ ಕಲಿತ ಒಟ್ಟು 17 ಜನ ಯುವಕರು ಇದೀಗ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ಇಷ್ಟಕ್ಕೂ ಈ ಯುವಕರು ಯಾವ ಗ್ರಾಮದವರು? ಯಾವ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ತಮ್ಮ ಶಿಕ್ಷಕರಿಂದ ಅಭಿನಂದನೆ ಪಡೆದುಕೊಳ್ಳುತ್ತಿರುವ ಈ ಯುವಕರು ಉಪ್ಪಿನ ಬೆಟಗೇರಿ ಕಲ್ಲೂರು ಹಾಗೂ ಹನುಮನಹಾಳ ಗ್ರಾಮದವರು ಈ ಎಲ್ಲ ಯುವಕರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪೂರ್ಣಗೊಳಿಸಿದ್ದು, ಉಪ್ಪಿನ ಬೆಟಗೇರಿ ಗ್ರಾಮದ ಎಸ್ಜಿವಿ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಇದೇ ಶಾಲೆಯಲ್ಲಿ ಕಲಿತ ಈ ಯುವಕರಿಗೆ ಭಾರತೀಯ ಸೇನೆ ಸೇರಬೇಕು ಎಂಬ ಆಸೆ ಇತ್ತು. ಆ ಆಸೆ ಹೊತ್ತುಕೊಂಡೇ ತಮ್ಮ ಗುರಿ ಸಾಧಿಸಲು ಪ್ರಯತ್ನ ಆರಂಭಿಸಿದ್ದರು. ನಿರಂತರ ಪರಿಶ್ರಮದ ಫಲವಾಗಿ ಇದೀಗ 17 ಜನ ಯುವಕರು ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಓರ್ವ ಯುವಕ ವಾಯುಸೇನೆಯ ಅಗ್ನಿವೀರನಾಗಿ ಆಯ್ಕೆಯಾಗಿದ್ದಾನೆ.
ʻಅಗ್ನಿವೀರ’ರಾಗಿ ಆಯ್ಕೆ
ಉಪ್ಪಿನಬೆಟಗೇರಿಯ ಶಂಕರ ಕುರಗುಂದ, ಶಿವಾನಂದ ಮಸೂತಿ, ನಿರಂಜನ ಹುಟಗಿ, ಕಲೀಂ ಮುಜಾವರ, ಈರಣ್ಣ ಮಸೂತಿ, ಗಂಗಾಧರ ಅಂಬಣ್ಣವರ, ಶಬ್ಬೀರ್ ನದಾಫ್ ಸೇರಿದಂತೆ ಒಟ್ಟು 7 ಯುವಕರು ಹಾಗೂ ಕಲ್ಲೂರಿನ ಅಭಿಷೇಕ ಚಿಕ್ಕಮಠ, ಪ್ರದೀಪ ಮರೇದ, ಕುಮಾರ ಬುಡರಕಟ್ಟಿ, ಈರಣ್ಣ ಮರೇದ, ಪ್ರದೀಪ ಶಿವಳ್ಳಿ, ಅಮೀತಪೀರ್ ಸೈಯದನವರ ಸೇರಿದಂತೆ ಒಟ್ಟು 6 ಯುವಕರು ಮತ್ತು ಹನುಮನಾಳ ಗ್ರಾಮದ ಗೋಪಾಲ ಅಂಗಡಿ, ಸೋಮಲಿಂಗ ಅಂಗಡಿ, ಗೋಪಾಲ ಗಬ್ಬೂರ ಮೆಳೆಪ್ಪ ಅಂಗಡಿ ಸೇರಿದಂತೆ ಒಟ್ಟು 4 ಯುವಕರು ಹೀಗೆ ಉಪ್ಪಿನಬೆಟಗೇರಿಯ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆಯಲ್ಲಿ ಕಲಿತ ಒಟ್ಟು 17 ಯುವಕರು ʻಅಗ್ನಿವೀರ’ರಾಗಿ ಆಯ್ಕೆಯಾಗಿದ್ದಾರೆ.
ಯುದ್ಧಕ್ಕೂ ಹೆದರುವ ಮಾತಿಲ್ಲ
ಒಂದೇ ಶಾಲೆಯಲ್ಲಿ ಕಲಿತು ಒಟ್ಟಿಗೇ ಭಾರತೀಯ ಸೇನೆಗೆ ಸೇರಿದ ಈ ಯುವಕರು ಉಳಿದ ಮಕ್ಕಳಿಗೂ ಪ್ರೇರಣೆಯಾಗಲಿ ಎಂದು ಎಸ್ಜಿವಿ ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಕರು ಆ ಯುವಕರನ್ನು ಶಾಲೆಗೆ ಕರೆಯಿಸಿ ಅವರಿಂದ ಪ್ರೇರಣಾದಾಯಕ ಮಾತುಗಳನ್ನಾಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಶಾಲೆಯಲ್ಲೇ ಕಲಿತ ಮಕ್ಕಳು ಇದೀಗ ಭಾರತೀಯ ಸೇನೆಗೆ ಆಯ್ಕೆಯಾಗಿರುವುದಕ್ಕೆ ಶಿಕ್ಷಕರು ಕೂಡ ಹೆಮ್ಮೆಪಡುವುದರ ಜೊತೆಗೆ ಇದೇ ಶಾಲೆಯಿಂದ ಇನ್ನಷ್ಟು ಮಕ್ಕಳು ಭಾರತೀಯ ಸೇನೆಗೆ ಸೇರುವಂತಾಗಲಿ ಎಂದಿದ್ದಾರೆ ಒಟ್ಟಾರೆ ಒಂದೇ ಶಾಲೆಯಲ್ಲಿ ಕಲಿತು ಇದೀಗ ಒಂದೇ ಬಾರಿಗೆ ಭಾರತೀಯ ಸೇನೆಗೆ ಆಯ್ಕೆಯಾದ ಈ ವಿದ್ಯಾರ್ಥಿಗಳು, ಸೇನೆಗೆ ಆಯ್ಕೆಯಾಗಿದ್ದೇವೆ ಎಂದರೆ ಯುದ್ಧಕ್ಕೂ ಹೆದರುವ ಮಾತಿಲ್ಲ. ತಾಯಿ ಭಾರತಿಗೆ ನಾವು ಸೇನೆಯಲ್ಲಿ ಇರುವಷ್ಟು ದಿನ ಸೇವೆ ಸಲ್ಲಿಸಿ ಬರುತ್ತೇವೆ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ. ಇವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಎಂದು ನಾವೂ ಹಾರೈಸೋಣ.

