ಮಂಗಳೂರು(ಜ. 10) ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಉತ್ಸವಕ್ಕೆ ಶುಕ್ರವಾರ ಅದ್ದೂರಿ ಚಾಲನೆ ದೊರೆತಿದೆ. ಜ.19ರವರೆಗೆ 10 ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ನಗರದ ಕೇಂದ್ರ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಜಾನಪದ-ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ 40ಕ್ಕೂ ಅಧಿಕ ವಿವಿಧ ಕಲಾ ತಂಡಗಳು, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಆಗ್ರಹವುಳ್ಳ ಟ್ಯಾಬ್ಲೋ ಮನಸೂರೆಗೊಂಡಿತು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಮೈದಾದನಲ್ಲಿ ಅತಿಥಿಗಳಿಗೆ ತುಳು ನಾಡಿನ ಸಾಂಪ್ರದಾಯಿಕ ಮುಟ್ಟಾಳೆ ತೊಡಿಸಿ ಕಲ್ಲಿಗೆ ತೆಂಗಿನ ಕಾಯಿ ಒಡೆದು ಮೆರವಣಿಗೆ ಚಾಲನೆ ನೀಡಿದರು.
ನಿರ್ದೇಶಕ, ರಿಶಭ್ ಶೆಟ್ಟಿ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಇದ್ದರು.
ಮಂಗಳೂರು ಮೂಕಾಂಬಿಕಾ ಚಂಡೆ ಬಳಗ, ದೇರೆಬೈಲು ಯಕ್ಷಾಭಿನಯ (ಬಡಗು) ಬಳಗ, ತುಳುನಾಡಿನ ಪಂಚವಾದ್ಯ ವೈವಿಧ್ಯಮಯ, ತುಳು ಮಾತೆ ಪ್ರದರ್ಶನ ಸ್ತಬ್ಧಚಿತ್ರ, ಸುಳ್ಯ ರಮೇಶ್ ಮತ್ತು ಬಳಗದ ಆಟಿ ಕಳಂಜ, ಇಬ್ರಾಹಿಂ ಬಾಷಾ ಅವರ ಒಪ್ಪನ ನೃತ್ಯ, ಉಪ್ಪಳ ಮೊಹಮ್ಮದ್ ಹನೀಫ್ ಅವರ ಕಲಾ ತಂಡ ಈ ಬಾರಿಯ ಉತ್ಸವ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು.
ನೆಹರೂ ಮೈದಾನದಿಂದ ಹೊರಟ ಸಾಂಸ್ಕೃತಿಕ ಮೆರವಣಿಗೆ ಕ್ಲಾಕ್ ಟವರ್, ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ಎಂ.ಜಿ.ರಸ್ತೆ, ಲಾಲ್ಬಾಗ್ ಮೂಲಕ ಕರಾವಳಿ ಉತ್ಸವ ಮೈದಾನ ತಲುಪಿತು.
ಮೆರವಣಿಗೆಯಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನ ಗಿರಿ- ಸಿರಿ ಜಾನಪದ ಕಲಾ ತಂಡದ ಕೊರಗರ ಡೋಲು- ಕೋಲು ಕುಣಿತ, ಕನ್ಯಾನ ಶಿವಗಿರಿ ಹೊಗೆಗದ್ದೆಯ ಕರಡಿ- ಸಿಂಹ ನೃತ್ಯ ಇದ್ದವು.
ಸಾಧಕರಿಂದ ಭಾಷಣ
ನಿರ್ದೇಶಕ ರಿಶಭ್ ಶೆಟ್ಟಿಗೆ ಸನ್ಮಾನ
ಕಲಾತಂಡಗಳ ಮೆರವಣಿಗೆ
ರಾಮನಗರದ ಪೂಜಾ ಕುಣಿತ, ಕಾರವಾರದ ಸುಗ್ಗಿ ಕುಣಿತ, ಹಾವೇರಿ ಬೇಡರ ಕುಣಿತ, ಚಿಕ್ಕಮಗಳೂರು ಮಹಿಳಾ ವೀರಗಾಸೆ, ಮಾಗಡಿ ನಂದಿ ಧ್ವಜ, ಗದಗ ಕೋಲಾಟ, ಮೈಸೂರಿನ ವೀರಭದ್ರ ಕುಣಿತ, ಶಿವಮೊಗ್ಗ ಮಹಿಳಾ ಡೊಳ್ಳು, ಚಾಮರಾಜನಗರ ಗೊರವರ ಕುಣಿತ ಗಮನ ಸೆಳೆದವು.
ತುಮಕೂರು ಸೋಮನ ಕುಣಿತ, ಧಾರವಾಡದ ಜಗ್ಗಲಿಗೆ, ಹಾವೇರಿ ಪುರವಂತಿಕೆ, ಮೊಂಟೆಪದವಿನ ಕಂಸಾಳೆ ಜಾನಪದ ನೃತ್ಯ, ತೊಕ್ಕೊಟ್ಟು ನಲಿಪು ಜನಪದ ಕೂಟದ ಕಂಗೀಲು ಜಾನಪದ ನೃತ್ಯ ಸಹ ಇದ್ದವು.
ಉಡುಪಿ ಬಂಟಕಲ್ಲು ದುರ್ಗಾ ಮಹಿಳಾ ಚೆಂಡೆ ಬಳಗ, ಬಜಪೆ ಶ್ರೀಗುರು ವಿಜಯ ವಿಠಲ ಯಕ್ಷ ಕಲಾ ಕೇಂದ್ರ, ಬಿ.ಸಿ.ರೋಡು ಚಿಲಿಪಿಲಿ ಗೊಂಬೆ ಬಳಗ, ಪಾಣೆಮಂಗಳೂರು ಹಾಸ್ಯಗಾರ ಗೊಂಬೆ ತಂಡಗಳು ಇದ್ದವು.
Karavali Utsav
ಕರಾವಳಿ ಉತ್ಸವ ಪ್ರಯುಕ್ತ ಕರಾವಳಿ ಉತ್ಸವ ವೇದಿಕೆ ಹಾಗೂ ಕದ್ರಿ ಉದ್ಯಾನವನದಲ್ಲಿ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದಲ್ಲದೆ, ವಿವಿಧ ಆಟೋಟ ಸ್ಪರ್ಧೆಗಳು, ಗಾಳಿಪಟ ಉತ್ಸವ ಮತ್ತು ಬೀಚ್ ಉತ್ಸವ ಕರಾವಳಿ ಉತ್ಸವಕ್ಕೆ ಹೆಚ್ಚಿನ ಮೆರುಗು ನೀಡಲಿದೆ.
ಪಣಂಬೂರು ಕಡಲ ಕಿನಾರೆಯಲ್ಲಿ ಜ.17, 18 ಮತ್ತು 19ರಂದು ಮಂಗಳೂರು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. 17ರಂದು ನಗರದ ಪುರಭವವನದಲ್ಲಿ ಗಾಳಿಪಟ ಕುರಿತು ಕಾರ್ಯಾಗಾರ ನಡೆಯಲಿದೆ. ಬೀಚ್ ವಾಲಿಬಾಲ್, ಬೀಚ್ ತ್ರೋಬಾಲ್, ಆಹಾರ ಉತ್ಸವಗಳು ಕರಾವಳಿ ಉತ್ಸವಕ್ಕೆ ವಿಶೇಷ ಮೆರುಗು ನೀಡಲಿದೆ.