ಗಾಯಾಳು ಟ್ರೆಂಟ್ ಬೌಲ್ಟ್ ಫೈನಲ್ ಆಡ್ತಾರಾ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?
ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಇದರ ನಡುವೆಯೇ ತಂಡದ ಮಾರಕ ವೇಗಿ ಟ್ರೆಂಟ್ ಬೌಲ್ಟ್ ಗಾಯಕ್ಕೆ ತುತ್ತಾಗಿದ್ದು, ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಆತಂಕ ಮನೆಮಾಡುವಂತೆ ಮಾಡಿದೆ. ಇದೆಲ್ಲದರ ನಡುವೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಎಡಗೈ ವೇಗಿಯ ಲಭ್ಯತೆಯ ಬಗ್ಗೆ ತುಟಿಬಿಚ್ಚಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಎದುರು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 57 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಡೆಲ್ಲಿ ಎದುರು ಸಂಘಟಿತ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ಅನಾಯಾಸವಾಗಿ ಫೈನಲ್ ಪ್ರವೇಶಿಸಿದೆ.
ಮುಂಬೈ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿ ಡೆಲ್ಲಿ ಹೀನಾಯ ಸೋಲು ಕಂಡಿತು.
201 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೊದಲ ಓವರ್ನಲ್ಲೇ ಟ್ರೆಂಟ್ ಬೌಲ್ಟ್ ಆರಂಭಿಕ ಬ್ಯಾಟ್ಸ್ಮನ್ಗಳಾದ ಪೃಥ್ವಿ ಶಾ ಹಾಗೂ ಅಜಿಂಕ್ಯ ರಹಾನೆ ವಿಕೆಟ್ ಕಬಳಿಸಿ ಮುಂಬೈಗೆ ಮುನ್ನಡೆ ದಕ್ಕಿಸಿಕೊಟ್ಟರು.
ಮಹತ್ವದ ಪಂದ್ಯದಲ್ಲಿ ಬೌಲ್ಟ್ ಕೇವಲ 2 ಓವರ್ ಬೌಲಿಂಗ್ ಮಾಡಿ ಒಂದು ಮೇಡನ್ ಸಹಿತ ಕೇವಲ 9 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಆದರೆ ಆ ಬಳಿಕ ತೊಡೆಸಂದಿನ ನೋವಿಗೆ ತುತ್ತಾದ ಬೌಲ್ಟ್ ಮೈದಾನ ತೊರೆದರು. ಬೌಲ್ಟ್ ಬೌಲಿಂಗ್ ಕೋಟಾವನ್ನು ಕಿರಾನ್ ಪೊಲ್ಲಾರ್ಡ್ ಪೂರೈಸಿದರು.
ಪಂದ್ಯದ ಎರಡನೇ ಓವರ್ನಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಬೌಲ್ಟ್ ತೊಡೆಸಂದಿನ ನೋವಿಗೆ ತುತ್ತಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ರಾಂತಿ ಪಡೆಯಲು ಪೆವಿಲಿಯನ್ ಸೇರಿದರು.
ಪಂದ್ಯ ಮುಕ್ತಾಯದ ಬಳಿಕ ಬೌಲ್ಟ್ ಬಗ್ಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಅವರೂ ಅಷ್ಟೇನು ಗಂಭೀರವಾದ ಗಾಯಕ್ಕೆ ತುತ್ತಾಗಿದ್ದಾರೆ ಎಂದು ನನಗನಿಸುತ್ತಿಲ್ಲ. ಇನ್ನು ಮೂರು ದಿನಗಳ ಬಳಿಕ ಮಹತ್ವದ ಪಂದ್ಯ ನಡೆಯಲಿದ್ದು, ಆ ವೇಳೆಗೆ ಬೌಲ್ಟ್ ತಂಡ ಕೂಡಿಕೊಳ್ಳುವ ವಿಶ್ವಾಸವಿದೆ ಎಂದು ರೋಹಿತ್ ಹೇಳಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 10 ರಂದು ನಡೆಯಲಿದ್ದು, ದುಬೈನಲ್ಲಿ ನಡೆಯಲಿರುವ ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾವ ತಂಡ ಸವಾಲೆಸೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.