ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಆರ್ಸಿಬಿಗೆ ಸರಿಯಾದ ಸಮಯ: ಗೌತಮ್ ಗಂಭೀರ್
ಮುಂಬೈ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಪ್ಲೇ ಆಫ್ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದೆ. ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ಗಳ ಹೀನಾಯ ಸೋಲು ಕಂಡು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ.
ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿದ್ದು, ನಿರೀಕ್ಷೆಯಂತೆಯೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಆರ್ಸಿಬಿ ತಂಡ ಕೊಹ್ಲಿಯನ್ನು ನಾಯಕತ್ವದ ಕೆಳಗಿಳಿಸಲು ಇದು ಸುಸಮಯ ಎಂದು ಸಲಹೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಬರೋಬ್ಬರಿ 3 ವರ್ಷಗಳ ಬಳಿಕ ಪ್ಲೇ ಆಫ್ ಹಂತ ಪ್ರವೇಶಿಸಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಎದುರು 6 ವಿಕೆಟ್ಗಳ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ಇದೀಗ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವದ ಬಗ್ಗೆ ಟೀಕಾಕಾರರು ತಮ್ಮ ಟೀಕಾಸ್ತ್ರ ಪ್ರಯೋಗಿಸಲಾರಂಭಿಸಿದ್ದಾರೆ.
ಇದೀಗ 2 ಬಾರಿ ಕೋಲ್ಕತ ನೈಟ್ ರೈಡರ್ಸ್ ತಂಡಕ್ಕೆ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಗೌತಮ್ ಗಂಭೀರ್ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಯ ನಾಯಕತ್ವವನ್ನು ಮತ್ತೊಮ್ಮೆ ಪ್ರಶ್ನೆ ಮಾಡಿದ್ದಾರೆ.
ಆರ್ಸಿಬಿ ತಂಡಕ್ಕೆ ಕಳೆದ 8 ವರ್ಷಗಳಿಂದ ನಾಯಕರಾಗಿರುವ ವಿರಾಟ್ ಅವರನ್ನು ನಾಯಕತ್ವದ ಕೆಳಗಿಸಲು ಆರ್ಸಿಬಿಗೆ ಇದು ಸರಿಯಾದ ಸಮಯ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ವರ್ಷವಲ್ಲ, ಎರಡು ವರ್ಷವಲ್ಲ ಬರೋಬ್ಬರಿ 8 ವರ್ಷ. ನನಗೆ ವಿರಾಟ್ ಬಗ್ಗೆ ಯಾವುದೇ ಬೇಸರವಿಲ್ಲ. ಆದರೆ ಈಗಲಾದರೂ ವಿರಾಟ್ ಕೊಹ್ಲಿ ಸೋಲಿಗೆ ನಾನೇ ಜವಾಬ್ದಾರ, ನಾನೇ ಹೊಣೆಗಾರ ಎನ್ನುವುದನ್ನು ಒಪ್ಪಿಕೊಳ್ಳಲಿ ಎಂದು ಗಂಭೀರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ 2013ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದಾರೆ. 2016ರಲ್ಲಿ ವಿರಾಟ್ ನೇತೃತ್ವದ ಆರ್ಸಿಬಿ ಫೈನಲ್ ಪ್ರವೇಶಿಸಿತ್ತಾದರೂ, ಅಂತಿಮ ಸುತ್ತಿನಲ್ಲಿ ಸನ್ರೈಸರ್ಸ್ಗೆ ಶರಣಾಗಿತ್ತು. ಇದಾಗಿ 3 ವರ್ಷಗಳ ಬಳಿಕ ಈ ಬಾರಿ ಪ್ಲೇ ಆಫ್ ಹಂತ ಪ್ರವೇಶಿಸಿತ್ತು.
ಇದೇ ವೇಳೆ ರೋಹಿತ್ ಶರ್ಮಾ ಹಾಗೂ ಎಂ ಎಸ್ ಧೋನಿ ಏಕೆ ದೀರ್ಘಕಾಲದಿಂದ ನಾಯಕರಾಗಿ ಮುಂದುವರೆದಿದ್ದಾರೆ ಎನ್ನುವುದಕ್ಕೆ ಸೂಕ್ತ ಉದಾಹರಣೆಯನ್ನು ನೀಡಿದ್ದಾರೆ.
8 ವರ್ಷದ ಅವಧಿ ಕಡಿಮೆಯೇನಲ್ಲ. ಅಶ್ವಿನ್ ಅವರನ್ನೇ ನೋಡಿ, ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು 2 ವರ್ಷ ಮುನ್ನಡೆಸಿದ್ದರು. ಆದರೆ ಅವರಿಂದ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಶ್ವಿನ್ ಅವರನ್ನು ನಾಯಕತ್ವದ ಕೆಳಗಿಳಿಸಲಾಯಿತು.
ಅದೇ ರೀತಿ ಧೋನಿ ಚೆನ್ನೈ ತಂಡಕ್ಕೆ 3 ಬಾರಿ ಗೆಲ್ಲಿಸಿಕೊಟ್ಟಿದ್ದಾರೆ, ಇನ್ನು ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿಯೇ ಅವರು ದೀರ್ಘಕಾಲದಿಂದ ನಾಯಕರಾಗಿ ಮುಂದುವರೆದಿದ್ದಾರೆ.
ಒಂದು ವೇಳೆ ರೋಹಿತ್ ಶರ್ಮಾ ಕೂಡಾ ನಾಯಕತ್ವದಲ್ಲಿ ಯಶಸ್ವಿಯಾಗದೇ ಹೋಗಿದ್ದರೆ ಅವರನ್ನು ಫ್ರಾಂಚೈಸಿ ಯಾವುದೇ ಮುಲಾಜಿಲ್ಲದೇ ಕೆಳಗಿಳಿಸುತಿತ್ತು. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಅಳತೆಗೋಲು ಇರುವುದಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ 10 ಪಂದ್ಯಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಪಂದ್ಯಗಳನ್ನು ಜಯಿಸಿತ್ತು, ಆದರೆ ಆ ಬಳಿಕ ಗೆಲುವಿನ ಲಯ ಕಳೆದುಕೊಂಡ ಆರ್ಸಿಬಿ ಸತತ 5 ಪಂದ್ಯ ಸೋತು ಟೂರ್ನಿಯಿಂದ ಹೊರಬಿದ್ದಿದೆ.