ಕೃಷಿ ಮಸೂದೆ ಬೆಂಬಲಿಸುವವರಿಗೆ ಸಾಮಾಜಿಕ ಬಹಿಷ್ಕಾರ; ಸಿಖ್ ಸಂಘಟನೆ ಕರೆ
ಕೇಂದ್ರ ಕೃಷಿ ಮಸೂದೆ ವಿರೋಧಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕೃಷಿಯೇತರ ಬೇಡಿಕೆ, ಕೂಗು, ಆಕ್ರೋಷಗಳು ವ್ಯಕ್ತವಾಗಿದೆ. ಈಗಾಗಲೇ ಪ್ರತಿಭಟನಾ ನಿರತ ರೈತರು ಜಿಯೋ ಸಿಮ್ ಬಹಿಷ್ಕರಿಸಲು ಕರೆ ನೀಡಿದ್ದರು. ಇದೀಗ ಕೃಷಿ ಮಸೂದೆ ಬೆಂಬಲಿಸುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲು ಕರೆ ನೀಡಲಾಗಿದೆ.
ಕೇಂದ್ರದ ಕೃಷಿ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ದಾರಿ ತಪ್ಪುತ್ತಿದೆ, ರಾಜಕೀಯ ಕಾರಣಕ್ಕೆ ರೈತರು ಬಲಿಯಾಗುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ.
ರೈತರ ಹೋರಾಟ ಹೈಜಾಕ್ ಮಾಡಲಾಗಿದೆ ಅನ್ನೋ ಆರೋಪದ ಬೆನ್ನಲ್ಲೇ ಇದೀಗ ಸಿಖ್ ಸಂಘಟನೆ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ.
ತಮ್ಮ ಸಮುದಾಯದವರು ಯಾರಾದರೂ ಕೇಂದ್ರ ಕೃಷಿ ಕಾಯ್ದೆಯನ್ನು ಬೆಂಬಲಿಸುತ್ತಿದ್ದರೆ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಎಂದು ಸಿಖ್ ಸಂಘಟನೆ ಕರೆ ನೀಡಿದೆ.
ಉತ್ತರ ಖಂಡ ಸಿಖ್ ಸಂಘಟನೆ ಈ ರೀತಿಯ ಕರೆ ನೀಡಿದೆ. ಸಿಖ್ ಸಮುದಾಯದವರು ಕೃಷಿ ಕಾಯ್ದೆಯನ್ನು ಬೆಂಬಲಿಸಿದರೆ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲೇಬೇಕು ಎಂದಿದೆ.
ಉತ್ತರಖಂಡ ಸಿಖ್ ಸಂಘಟನೆ ಸದಸ್ಯರು ಇದೀಗ ದೆಹಲಿಗೆ ತೆರಳುತ್ತಿದ್ದಾರೆ. ಡಿಸೆಂಬರ್ 19 ರಂದು ಸಿಖ್ ಗುರು ತೇಜ್ ಬಹದ್ದೂರ್ 9ನೇ ಪುಣ್ಯಸ್ಮರಣೆಗಾಗಿ ದೆಹಲಿ ತೆರಳುತ್ತಿದ್ದಾರೆ. ಈ ವೇಳೆ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿಖ್ ಸಮುದಾಯದ ಬಹತೇಕರು ಕೃಷಿಕರಾಗಿದ್ದಾರೆ. ಇವರೆಲ್ಲಾ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ಕಪ್ಪು ಪಟ್ಟಿ ಧರಿಸಿ, ಕಪ್ಪು ಬಾವುಟ ಪ್ರದರ್ಶಿ ನಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ಉತ್ತರಖಂಡ ಸಿಖ್ ಸಂಘಟನೆ ಹೇಳಿದೆ.
ಸ್ಥಳೀಯ ಗುರುದ್ವಾರದಲ್ಲಿ ಸಭೆ ನಡೆಸಿದ್ದೇವೆ. ಈ ಸಭೆಯಲ್ಲಿ ತಮ್ಮ ಸಮುದಾಯವರಿಗೆ ಸೂಚನೆ ನೀಡಲಾಗಿದೆ. ಕೃಷಿ ಕಾಯ್ದೆ ಬೆಂಬಲಿಸಿದವರಿಗೆ ಬಹಿಷ್ಕಾರ ಹಾಕಲಾಗುತ್ತದೆ ಎಂದು ಉತ್ತರ ಖಂಡ ಸಿಖ್ ಸಂಘಟನೆ ಹೇಳಿದೆ.