ಟ್ರಾಕ್ಟರ್ ರ್ಯಾಲಿ ಗಲಭೆ ಬಳಿಕ ಭಿನ್ನಾಭಿಪ್ರಾಯ ; ಪ್ರತಿಭಟನೆಯಿಂದ ಹಿಂದೆ ಸರಿದ ರೈತ ಸಂಘಟನೆ!
40ಕ್ಕೂ ಹೆಚ್ಚು ರೈತ ಸಂಘಟನೆಗಳು ಕಳೆದೆರಡು ತಿಂಗಳಿನಿಂದ ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಟ್ರಾಕ್ಟರ್ ರ್ಯಾಲಿ ಆಯೋಜನೆ ಬೆನ್ನಲ್ಲೇ ಇದೀಗ ರೈತ ಸಂಘಟನೆಗಳ ನಡುವೆ ಬಿರುಕು ಮೂಡಿದೆ. ದೆಹಲಿ ಗಲಭೆ ಬಳಿಕ ಇದೀಗ ಎರಡು ಕಿಸಾನ್ ಯೂನಿಯನ್ ಪ್ರತಿಭಟನೆಯಿಂದ ಹಿಂದೆ ಸರಿದಿದೆ.
ದೆಹಲಿ ಗಲಭೆ ಬಳಿಕ ರೈತ ಸಂಘಟನೆಗಳ ಮುಖಂಡರ ಮೇಲೆ ಪೊಲೀಸ್ ಕೆಂಗಣ್ಣು ಬೀರಿದೆ. ಹಲವು ರೈತ ಮುಖಂಡರ ಮೇಲೆ FIR ದಾಖಲಾಗಿದೆ. ಇದೀಗ ರೈತ ಸಂಘಟನೆಗಳ ಆತಂಕಕ್ಕೆ ಕಾರಣವಾಗಿದೆ.
![article_image2](https://static-ai.asianetnews.com/images/01ex170vxkxwy3fr06mcdrjx8a/kaka--png_300x239xt.jpg)
ದೆಹಲಿ ರೈತ ಗಲಭೆ ಬಳಿಕ ಇದೀಗ ಎರಡು ಪ್ರಮುಖ ರೈತ ಸಂಘಟನೆಗಳು ಕೃಷಿ ಕಾಯ್ದೆ ಪ್ರತಿಭಟನೆಯಿಂದ ಹಿಂದೆ ಸರಿದಿದೆ. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ, ಭಾರತೀಯ ಕಿಸಾನ್ ಯೂನಿಯನ್ ಹಾಗೂ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ ಪ್ರತಿಭಟೆನೆಯಿಂದ ಹಿಂದೆ ಸರಿದಿದೆ.
ಟ್ರಾಕ್ಟರ್ ರ್ಯಾಲಿ ಕುರಿತು ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮಿತಿ ನಾಯಕ ವಿಎಂ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ. ಉದ್ದೇಶಿತ ಮಾರ್ಗದಲ್ಲಿ ಟ್ರಾಕ್ಟರ್ ರ್ಯಾಲಿ ಸಂಚರಿಸುವ ಕುರಿತು ಕೆಲ ಗೊಂದಲ ನಿರ್ಮಾಣವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಇಷ್ಟೇ ಅಲ್ಲ ಈ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ರೈತ ಸಂಘಟನೆಗಳ ಮೇಲೆ ಗಂಭೀರ ಆರೋಪಗಳು ಕೇಳಿಬರುತ್ತಿದೆ. ಇತ್ತ ಪೊಲೀಸರು FIR ರಿಪೋರ್ಟ್ನಲ್ಲೂ ದಾಖಲಾದ ಬೆನ್ನಲ್ಲೇ ಒಂದೊಂದೆ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದೆ.
ಕೆಂಪು ಕೋಟೆ ಮೇಲೆ ಧ್ವಜ ಹಾರಾಟ, ಕೋಟೆಗೆ ಮುತ್ತಿಗೆ, ಪೊಲೀಸರ ಮೇಲೆ ದಾಳಿಯಿಂದ 300ಕ್ಕೂ ಹೆಚ್ಚು ಮಂದಿಗೆ ಗಾಯ, ಸಾರ್ವಜನಿಕ ವಾಹನಗಳನ್ನು ಜಖಂ ಗೊಳಿಸಿದ ಸೇರಿದಂತೆ ಹಲವು ಪುಂಡಾಟಗಳು ಗಲಭೆಯಲ್ಲಿ ನಡೆದುಹೋಗಿದೆ.
ದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್ ರ್ಯಾಲಿ ಹಾಗೂ ಗಲಭೆ ಬಳಿಕ ರೈತ ಮುಖಂಡರಾದ ದರ್ಶನ್ ಪಾಲ್, ರಜಿಂದರ್ ಸಿಂಗ್, ಬಲ್ಬಿರ್ ಸಿಂಗ್ ರಜೆವಾಲ, ಬೂಟಾ ಸಿಂಗ್ ಬುರ್ಜಿಗಿಲ್, ಹಾಗೂ ಜೋಗಿಂದರ್ ಸಿಂಗ್ ಉಗ್ರಾಹ ವಿರುದ್ಧ FIR ದಾಖಲಾಗಿದೆ.
ಭಾರತೀಯ ಕಿಸಾನ್ ಯೂನಿಯನ್ ಸಂಘಟನೆ ವಕ್ತಾರ ರಾಕೇಶ್ ಟಿಕೈಟ್ ಮೇಲೂ FIR ದಾಖಲಾಗಿದೆ. ಆದರೆ ರೈತ ಸಂಘಟನೆಗಳು ಗಲಭೆಗೆ ತಮಗೂ ಸಂಬಂಧವಿಲ್ಲ ಎಂದಿದ್ದಾರೆ.