ಮರದಿಂದ ನೋಟುಗಳ ಮಳೆ, ಮುಗಿ ಬಿದ್ದ ಜನ: ಅಸಲಿಯತ್ತು ಕೇಳಿ ಶಾಕ್!
ಆಗ್ರಾದಲ್ಲಿ ಅಕೇಶಿಯಾ ಮರವೊಂದರಿಂದ ನೋಟುಗಳ ಮಳೆ ಸುರಿದಿದೆ. ಮರದಿಂದ ಬೀಳುತ್ತಿದ್ದ 50 ರೂಪಾಯಿಯನ್ನು ಕಂಡ ಜನ ಇವುಗಳನ್ನು ಹೆಕ್ಕಲು ಮುಗಿ ಬಿದ್ದಿದ್ದಾರೆ. ಹತ್ತಿರ ಹೋದವರಿಗೆ ಈ ನೋಟುಗಳನ್ನು ಕೋತಿಯೊಂದು ಎಸೆಯುತ್ತಿದೆ ಎಂಬ ಸತ್ಯ ಅರಿವಾಗಿದೆ. ಒಂದೆರಡು ನೋಟುಗಳನ್ನು ಕೆಳಗೆಸೆಯುತ್ತಿದ್ದ ಕೋತಿ ಮತ್ತೆ ಬೇರೆ ರೆಂಬೆಗೆ ಹಾರಿ ಕುಳಿತುಕೊಳ್ಳುತ್ತಿತ್ತು. ಬರೋಬ್ಬರಿ ಐವತ್ತು ಸಾವಿರ ಮುಗಿಯುವವರೆಗೆ ಕೋತಿ ತನ್ನಾಟ ಮುಂದುವರೆಸಿದೆ. ಈ ಕೋತಿ ಹಣವನ್ನು ಗಾಡಿಯೊಂದರಿಂದ ಎಗರಿಸಿಕೊಂಡು ಬಂದಿತ್ತು. ಕಾರಿನಲ್ಲಿ ಒಟ್ಟು ಐದು ಲಕ್ಷ ರೂಪಾಯಿ ಇರಿಸಲಾಗಿತ್ತು, ಆದರೆ ಕಿಟಕಿ ಮುಚ್ಚಲು ಚಾಲಕ ಮರೆತಿದ್ದ.
ಬಾಹ್ನ ಮಹಿಳಾ ಆಸ್ಪತ್ರೆ ಬಳಿ ಮಧ್ಯಾಹ್ನ 12 ಗಂಟೆಗೆ ಇದ್ದಕ್ಕಿದ್ದಂತೆ ಅಕೇಶಿಯಾ ಮರವೊಂದರಿಂದ ಐನೂರು ರೂಪಾಯಿ ನೋಟು ಬೀಳುತ್ತಿರುವುದನ್ನು ಅಲ್ಲಿದ್ದ ಜನ ಗಮನಿಸಿದ್ದು, ಕೂಡಲೇ ಇದನ್ನು ಹೆಕ್ಕಲು ಮರದತ್ತ ಧಾವಿಸಿದ್ದಾರೆ.
ಜೈತ್ಪುರದ ತುಳಸೀರಾಮ್ ಎಂಬಾತ ಹೊಲವೊಂದನ್ನು ಖರೀದಿಸಿದ್ದ. ಸೋಮವಾರ ಬೆಳಗ್ಗೆ ಸುಮಾರು 11.30 ಕಾರಿನಲ್ಲಿ ತಹಸೀಲ್ಗೆ ತೆರಳಿದ್ದರು. ಅಲ್ಲಿದ್ದ ಮಹಿಳಾ ಆಸ್ಪತ್ರೆ ಬಳಿ ತನ್ನ ಕಾರನ್ನು ಪಾರ್ಕ್ ಮಾಡಿದ್ದರು. ಕಾರಿನಲ್ಲಿ ಚೀಲವೊಂದರಲ್ಲಿ ಐದು ಲಕ್ಷವನ್ನೂ ಇರಿಸಿದ್ದರು. ಕಾರು ನಿಲ್ಲಿಸಿದ ರಾಕೇಶ್ ತನ್ನ ವಕೀಲರನ್ನು ಭೇಟಿಯಾಗಲು ತೆರಳಿದ್ದರು. ಹೀಗಿರುವಾಗ ಕೋತಿಯೊಂದು ಕಾರಿನೊಳಗೆ ನುಗ್ಗಿದೆ.
ಚೀಲದಲ್ಲಿದ್ದ ಹಣವನ್ನು ಚೆಲ್ಲಾಪಿಲ್ಲಿಯಾಗಿಸಿದ್ದಲ್ಲದೇ ಅದರಲ್ಲಿದ್ದ ಐವತ್ತು ಸಾವಿರ ರೂಪಾಯಿ ಕೊಂಡೊಯ್ದಿದೆ. ಇನ್ನು ಈ ಘಟನೆಯ ಪ್ರತ್ಯಕ್ಷದರ್ಶಿ ಗ್ರಾಮಸ್ಥ ರಾಜಕುಮಾರ್ ಮಾತನಾಡುತ್ತಾ, ಮಧ್ಯಾಹ್ದನ ಇದ್ದಕ್ಕಿದ್ದಂತೆಯೇ ಅಕೇಶಿಯಾ ಮರದಲ್ಲಿದ್ದ ಕೋತಿಯ ಕೈಯ್ಯಿಂದ ನೋಟುಗಳು ಸುರಿಯಲಾರಂಭಿಸಿವೆ. ಅಲ್ಲಿದ್ದ ಮಹಿಳೆಯರು ನೋಟುಗಳನ್ನು ಹೆಕ್ಕಲಾರಂಭಿಸಿದ್ದಾರೆ. ಜನರ ಗುಂಪೇ ಇಲ್ಲಿ ಸೇರಿದೆ. ಇದನ್ನು ಕಂಡ ಕೋತಿ ಕೂಡಾ ಹಣವನ್ನು ಮತ್ತೆ ಮತ್ತೆ ಎಸೆಯಲಾರಂಭಿಸಿದೆ.
ಹೆಚ್ಚು ಹೆಚ್ಚು ಜನರು ಸೇರುತ್ತಿರುವ ಮಾಹಿತಿ ಪಡೆದ ಪೊಲೀಸರು ಕೂಡಾ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕೋತಿ ಕೈಯ್ಯಲ್ಲಿದ್ದ ನೋಟಿನ ಕಂತೆ ಮುಗಿದಿದೆ. ಈ ನಡುವೆ ಕಾರಿನತ್ತ ಮರಳಿ ಬಂದ ರಾಕೇಶ್ಗೆ ವಾಸ್ತವ ವಿಚಾರ ತಿಳಿದು ಶಾಕ್ ಆಗಿದೆ. ಎಣಿಸಿದಾಗ ತಾನು ತಂದಿದ್ದ ಹಣದಲ್ಲಿ ಒಂದು ಕಂತೆ ಮಾಯವಾಗಿರುವುದು ತಿಳಿದು ಬಂದಿದೆ.
ಇನ್ನು ಕೋತಿ ಕೇವಲ ಒಂದು ಕಂತೆ ಕೊಂಡೊಯ್ದಿರುವುದರಿಂದ ಹೆಚ್ಚೇನು ನಷ್ಟವಾಗಿಲ್ಲ, ಚೀಲದಲ್ಲಿದ್ದ ಎಲ್ಲಾ ಹಣ ಸಾಗಿಸಿದ್ದರೆ ತಾನು ಭಾರೀ ನಷ್ಟ ಅನುಭವಿಸಬೇಕಾಗಿತ್ತು ಎಂದು ರಾಕೇಶ್ ಹೇಳಿದ್ದಾರೆ.