ಬಿಜೆಪಿ VS ಮಮತಾ, ಪಶ್ಚಿಮ ಬಂಗಾಳದಿಂದ ಬಂದ ಭಯಾನಕ ಪೋಟೋಗಳು!
ಕೋಲ್ಕತ್ತಾ (ಅ. 08) ಪಶ್ಚಿಮ ಬಂಗಾಳದಲ್ಲಿ ವಾತಾವಾರಣ ಕೈಮೀರುವ ಹಂತಕ್ಕೆ ತಲುಪಿದೆ. ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯ ಆಕ್ರೋಶದ ಕಟ್ಟೆ ಒಡೆದಿದ್ದು ಎಲ್ಲೆಲ್ಲಿಯೂ ಪ್ರತಿಭಟನೆ.
ಬಿಜೆಪಿ ಹಮ್ಮಿಕೊಂಡಿದ್ದ ರ್ಯಾಲಿ ಮೇಲೆ ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗ ಮಾಡಲಾಗಿದೆ. ಮಮತಾ ಬ್ಯಾನರ್ಜಿಯೇ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಇನ್ನೊಂದು ಕಡೆಯಿಂದ ಆರೋಪಿಸಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಸರಣಿ ಹತ್ಯೆಗಳನ್ನು ಖಂಡಿಸಿ, ಬಿಜೆಪಿ ಹಮ್ಮಿಕೊಂಡಿದ್ದ ರ್ಯಾಲಿ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನೆಡೆದಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಚೇರಿಯತ್ತ ಮುನ್ನುಗ್ಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತೆ ಸರಣಿ ಕೊಲೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿವೆ ಎಂದಿರುವ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ, ಈ ಅನ್ಯಾಯವನ್ನು ಪ್ರತಿಭಟಿಸಿದರೆ ಮಮತಾ ನಮ್ಮ ಮೇಲೆ ಲಾಠಿ ಬೀಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಕಾರ್ಯಕರ್ತರು ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಚೇರಿಯತ್ತ ಮುನ್ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಪ್ರತಿಭಟನಾಕಾರರ ನಡುವೆ ಭಾರೀ ಘರ್ಷಣೆ ಸಂಭವಿಸಿದೆ.
ಮಮತಾ ಬ್ಯಾನರ್ಜಿ ಬಿಜೆಪಿ ಆಗ್ರಹ ಮಾಡುತ್ತಿರುವ ಅಂಶಗಳನ್ನು ಕಂಡು ಹೆದರಿದ್ದಾರೆ. ಅದೆ ಕಾರಣಕ್ಕೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ನಾಯಕರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ತಿಂಗಳುಗಳಿಂದ ನಡೆದುಕೊಂಡು ಬಂದಿದ್ದ ಬಿಜೆಪಿ ಮತ್ತು ಮಮತಾ ನಡುವಿನ ಘರ್ಷಣೆ ಮತ್ತೊಂದು ಹಂತಕ್ಕೆ ತಲುಪಿದೆ.