- Home
- News
- India News
- "ನಮ್ಮನ್ನು ಮಕ್ಕಳ ಹಿಂದೆ ಕೂರಿಸಿದ್ದು ಅವಮಾನ": ಗಣರಾಜ್ಯೋತ್ಸವದ ಆಸನ ವಿವಾದಕ್ಕೆ ಖರ್ಗೆ ಕೆಂಡಾಮಂಡಲ!
"ನಮ್ಮನ್ನು ಮಕ್ಕಳ ಹಿಂದೆ ಕೂರಿಸಿದ್ದು ಅವಮಾನ": ಗಣರಾಜ್ಯೋತ್ಸವದ ಆಸನ ವಿವಾದಕ್ಕೆ ಖರ್ಗೆ ಕೆಂಡಾಮಂಡಲ!
ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ತಮಗೆ ಮತ್ತು ರಾಹುಲ್ ಗಾಂಧಿಗೆ 3ನೇ ಸಾಲಿನಲ್ಲಿ ಆಸನ ನೀಡಿ ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

‘ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ನನ್ನನ್ನು ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು 3ನೇ ಸಾಲಿನಲ್ಲಿ, ಮಕ್ಕಳ ಹಿಂದೆ ಕೂರಿಸಲಾಗಿತ್ತು. ನಮ್ಮ ಬಳಿ ರಾಜ್ಯ ಸಚಿವರು ಆಸೀನರಾಗಿದ್ದರು. ಇದರಿಂದ ನಮಗೆ ಅವಮಾನವಾಗಿದ್ದು, ಸರ್ಕಾರ ಕ್ಷಮೆ ಯಾಚಿಸಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಜತೆಗೆ, ಅಸ್ಸಾಂನ ಅಂಗವಸ್ತ್ರವಾದ ಗಮೋಸಾವನ್ನು ರಾಷ್ಟ್ರಪತಿ ಕರೆದಿದ್ದ ಚಹಾಕೂಟದಲ್ಲಿ ರಾಹುಲ್ ಧರಿಸಿರಲಿಲ್ಲವೆಂಬ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ‘ರಾಹುಲ್ ಅದನ್ನು ತೊಟ್ಟು, ಬಳಿಕ ಕೈಯ್ಯಲ್ಲಿ ಹಿಡಿದುಕೊಂಡಿದ್ದರು. ಆದರೆ ಇದನ್ನು ಬಳಸಿಕೊಂಡು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಕೂಡ ಗಮೋಸಾ ಧರಿಸಿರಲಿಲ್ಲ’ ಎಂದರು.
77ನೇ ಗಣರಾಜ್ಯೋತ್ಸವದ ಮುಗಿದ ಬೆನ್ನಲ್ಲೇ ರಾಜಕೀಯ ವಾಕ್ಸಮರ ತಾರಕಕ್ಕೇರಿದೆ. ಕರ್ತವ್ಯ ಪಥದಲ್ಲಿ ನಡೆದ ಮೆರವಣಿಗೆಯ ವೇಳೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮೂರನೇ ಸಾಲಿನಲ್ಲಿ ಆಸನ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿತ್ತು. ಇದು 'ಶಿಷ್ಟಾಚಾರದ ಉಲ್ಲಂಘನೆ' ಮತ್ತು ವಿರೋಧ ಪಕ್ಷದ ನಾಯಕರಿಗೆ ಮಾಡಿದ ಅಪಮಾನ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪ್ರಧಾನಿ ಮೋದಿ ಅವರು ಉದ್ದೇಶಪೂರ್ವಕವಾಗಿ ವಿರೋಧ ಪಕ್ಷದ ನಾಯಕರನ್ನು ಕಡೆಗಣಿಸಲು ಇಂತಹ ವ್ಯವಸ್ಥೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
2014ರಲ್ಲಿ ಯುಪಿಎ ಸರ್ಕಾರವಿದ್ದಾಗ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಮೊದಲ ಸಾಲಿನಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಈಗ ಪ್ರೋಟೋಕಾಲ್ ಏಕೆ ಬದಲಾಗಿದೆ? ಎಂದು ಕಾಂಗ್ರೆಸ್ ಸಚೇತಕ ಮಾಣಿಕ್ಕಂ ಟ್ಯಾಗೋರ್ ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಎಂಬುದು ಸಾಂವಿಧಾನಿಕವಾಗಿ ಕ್ಯಾಬಿನೆಟ್ ಸಚಿವ ದರ್ಜೆಯ ಹುದ್ದೆ. ಅವರನ್ನು ರಾಜ್ಯ ಸಚಿವರು ಹಾಗೂ ಅವರ ಮಕ್ಕಳ ಪಕ್ಕದಲ್ಲಿ ಕುಳ್ಳಿರಿಸಿರುವುದು ಸರಿಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಶೇ. 65ರಷ್ಟು ಜನರ ಧ್ವನಿಯಾಗಿರುವ ವಿರೋಧ ಪಕ್ಷದ ನಾಯಕರನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ರಣದೀಪ್ ಸುರ್ಜೇವಾಲಾ ಟೀಕಿಸಿದ್ದಾರೆ.
ಇನ್ನೊಂದೆಡೆ, ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಆಸನ ವ್ಯವಸ್ಥೆಯನ್ನು ಅಧಿಕೃತ 'ಟೇಬಲ್ ಆಫ್ ಪ್ರೆಸಿಡೆನ್ಸ್' (Table of Precedence) ಪ್ರಕಾರವೇ ಮಾಡಲಾಗಿದೆ. ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ ಮತ್ತು ಖರ್ಗೆ ಅವರ ಆರೋಗ್ಯದ ದೃಷ್ಟಿಯಿಂದ ಅವರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಂದು ಸಮರ್ಥಿಸಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

