23 ದಿನದ ರೈತ ಪ್ರತಿಭಟನೆಯಲ್ಲಿ 24 ಮಂದಿ ಸಾವು; ಪರಿಹಾರಕ್ಕೆ ಆಗ್ರಹಿಸಿದ ಸಂಘಟನೆ!
ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕಳೆದ 23 ದಿನಗಳಿಂದ ನಡೆಯುತ್ತಿದೆ. ಈ ಪ್ರತಿಭಟನೆ ನಡುವ ಭಾರತ್ ಬಂದ್, ಹೆದ್ದಾರಿ ಬಂದ್ ಸೇರಿದಂತೆ ಹಲವು ಉಗ್ರ ರೂಪದ ಹೋರಾಟವನ್ನು ರೈತ ಸಂಘಟನೆಗಳು ಆಯೋಜಿಸಿತ್ತು. ಇದೀಗ ಪ್ರತಿಭಟನಾ ನಿರತ ರೈತರು ಹೊಸ ಅಂಕಿ ಅಂಶ ತೆರೆದಿಟ್ಟಿದ್ದಾರೆ. ಕಳೆದ 23 ದಿನದ ಹೋರಾಟದಲ್ಲಿ 24 ರೈತರು ಸಾವನ್ನಪ್ಪಿರುವ ಕುರಿತು ಮಾಹಿತಿ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ನವೆಂಬರ್ 26 ರಿಂದ ಆರಂಭಗೊಂಡಿರುವ ರೈತರ ಪ್ರತಿಭಟನೆ ಇದೀಗ 23 ದಿನಗಳಾಗಿದೆ. ನಿರಂತರ ಹೋರಾಟ ಮಾಡುತ್ತಿರುವ ರೈತರು, ಸಂಘಟನೆಗಳು ಕೃಷಿ ಮಸೂದೆ ಹಿಂಪಡೆಯಲು ಆಗ್ರಹಿಸಿದ್ದಾರೆ.
ರೈತರ ಪ್ರತಿಭಟನೆಗೆ ವಿರೋಧ ಪಕ್ಷಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದೆ. ಇತ್ತ ರೈತರು ತಮ್ಮ ಪಟ್ಟು ಬಿಗಿಗೊಳಿಸಿದ್ದಾರೆ.
ಕಳೆದ 23 ದಿನಗಳಿಂದ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಒಟ್ಟು 24 ಮಂದಿ ಸಾವನ್ನಪ್ಪಿದ್ದಾರೆ ಎಂದು ರೈತ ಮುಖಂಡ ಬಲ್ಬೀರ್ ಸಿಂಗ್ ರಜೆವಾಲ್ ಮಾಹಿತಿ ಬಹಿರಂಗ ಪಡಿಸಿದ್ದಾರೆ
ಡಿಸೆಂಬರ್ 20 ರಂದು ಹೋರಾಟದಲ್ಲಿ ಪಾಲ್ಗೊಂಡು ಸಾವೀಗೀಡಾದ ರೈತರಿಗೆ ಗೌರವ ನೀಡುವ ಸಲುವಾಗಿ ಸ್ಮರಣೆ ದಿನ ಆಚರಿಸಲಾಗುವುದು ಎಂದು ರೈತ ಸಂಘಟನೆಗಳು ಹೇಳಿವೆ.
ತಿಕ್ರಿ ಗಡಿಯಲ್ಲಿ ನಡೆಯತ್ತಿರುವ ಈವರೆಗಿನ ಹೋರಾಟದಲ್ಲಿ 7 ರೈತರು ತೀವ್ರ ಚಳಿ ಹಾಗೂ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ. ಸಿಂಘು ಗಡಿಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
9 ರೈತರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೆಲ ರೈತರು ತಮ್ಮ ಮನೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲ ಆಗಮಿಸುತ್ತಿರುವ ವೇಳೆ ಅಪಘಾತವಾಗಿದ್ದರೆ, ಇನ್ನು ಕೆಲ ರೈತರು ವಾಪಸ್ ತೆರಳುವ ವೇಳೆ ಅಪಘಾತಕ್ಕೆ ಬಲಿಯಾಗಿದ್ದಾರೆ
ಕೇಂದ್ರ ಸರ್ಕಾರ, ಪಂಜಾಬ್ ಹಾಗೂ ಹರ್ಯಾಣ ಸರ್ಕಾರ ಸಾವಿಗೀಡಾದ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಬಲ್ಬೀರ್ ಸಿಂಗ್ ರಜೆವಾಲ್ ಆಗ್ರಹಿಸಿದ್ದಾರೆ.
ದೆಹಲಿ, ಪಂಜಾಬ್ ಹಾಗೂ ಹರ್ಯಾಣದಲ್ಲಿ ತೀವ್ರ ಚಳಿ ವಾತಾವರಣ ಇರುವುದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ರೈತರು, ಯಾವುದೇ ಪರಿಸ್ಥಿತಿಯಲ್ಲಿ ಬೇಡಿಕೆ ಈಡೇರುವ ವರೆಗೆ ಹೋರಾಡಲಿದ್ದಾರೆ ಎಂದು ರೈತ ಸಂಘಟನೆಗಳು ಹೇಳಿವೆ.