ವೈದ್ಯಕೀಯ ಕ್ಷೇತ್ರದಲ್ಲಿ ಲಾಭ-ನಷ್ಟದ ಯೋಚನೆ ಬೇಡ: ಡಿಸಿಎಂ ಅಶ್ವತ್ಥ ನಾರಾಯಣ
ಬೆಂಗಳೂರು(ಮಾ.11): ವೈದ್ಯಕೀಯ ಕ್ಷೇತ್ರದಲ್ಲಿ ಲಾಭ-ನಷ್ಟದ ಯೋಚನೆ ಮಾಡಬಾರದು. ಸೇವಾ ದೃಷ್ಟಿಯಿಂದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು, ನೈತಿಕತೆ ರೂಢಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ನೂತನ ವೈದ್ಯರಿಗೆ ಕಿವಿಮಾತು ಹೇಳಿದರು.
ಕೋರಮಂಗಲದ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಘಟಿಕೋತ್ಸವದಲ್ಲಿ ಎಂಬಿಬಿಎಸ್, ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅಶ್ವತ್ಥ ನಾರಾಯಣ, ಕೊರೋನಾ ಬಿಕ್ಕಟ್ಟು ಬಂದ ಮೇಲೆ ವೈದ್ಯರಿಗೆ ಸಾಕಷ್ಟುಸವಾಲುಗಳು ಎದುರಾಗಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸಬೇಕು. ಹಣ ಮಾಡಲು ಹಲವಾರು ಕ್ಷೇತ್ರಗಳಿದ್ದು, ವೈದ್ಯ ವೃತ್ತಿ ಸೇವೆಗೆ ಮೀಸಲಿಡಬೇಕು ಎಂದರು.
ವೈದ್ಯರಾದ ಮೇಲೆ ಕೇವಲ ನಗರಕ್ಕೆ ಸೀಮಿತರಾದರೆ ಉಪಯೋಗವಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಸೇವೆ ಸಿಗಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಲಭ್ಯವಾಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಸೇಂಟ್ ಜಾನ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ ಅಶ್ವತ್ಥ ನಾರಾಯಣ
ಸದ್ಯಕ್ಕೆ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಸುಧಾರಣೆಗಳನ್ನು ಮಾಡುತ್ತಿದ್ದು, ಉತ್ತಮ ಕಲಿಕೆ ಮತ್ತು ಬೋಧನೆ ಗುರಿಗಳನ್ನಿಟ್ಟುಕೊಂಡು ಹೆಜ್ಜೆಗಳನ್ನು ಇಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಇದೇ ವರ್ಷ ಜಾರಿಯಾಗುತ್ತಿದೆ. ಹೀಗಾಗಿ ಬಹು ವಿಷಯಗಳ ಆಯ್ಕೆ ಹಾಗೂ ಸಂಶೋಧನೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ ಸಚಿವರು
ಕಾರ್ಯಕ್ರಮದಲ್ಲಿ ರೆವರೆಂಡ್ ಆರ್ಚ್ ಬಿಷಪ್ ಡಾ. ಜಾರ್ಜ್, ಸಂಸ್ಥೆಯ ನಿರ್ದೇಶಕ ರೆವರೆಂಡ್ ಫಾದರ್ ಡಾ. ಪಾಲ್, ಸಂಸ್ಥೆಯ ಡೀನ್ ಡಾ. ಡಿಸೋಜ ಉಪಸ್ಥಿತರಿದ್ದರು.