ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಉಪಗ್ರಹ ತಯಾರಿಸಿದರೆ ಬೆಂಬಲ: ಡಿಸಿಎಂ ಅಶ್ವತ್ಥ ನಾರಾಯಣ
ಬೆಂಗಳೂರು(ಏ.07): ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಉಪಗ್ರಹ ತಯಾರಿಕೆಗೆ ಉತ್ತೇಜಿಸಲು ಸರ್ಕಾರ ಉತ್ಸುಕವಾಗಿದ್ದು, ಸಂಬಂಧಿಸಿದ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದೆ ಬಂದರೆ ಅದಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಉಪಗ್ರಹ, ಯುನಿಟಿಸ್ಯಾಟ್ (UNITYSAT) ಸಕ್ಸಸ್ ಮೀಟ್ನಲ್ಲಿ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ (ಐಟಿಸಿಎ) ವತಿಯಿಂದ ನೀಡಲಾದ ಗೌರವ ಫೆಲೋಶಿಪ್ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಸ್ತುತ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾತ್ರ ಸಣ್ಣ ಉಪಗ್ರಹ ತಯಾರಿಕೆಯಲ್ಲಿ ತೊಡಗಿದ್ದಾರೆ. ಸರ್ಕಾರಿ ಶಾಲೆಗಳ ಮಟ್ಟದಲ್ಲಿಯೇ ಈ ರೀತಿಯ ಯೋಜನೆಯನ್ನು ಪ್ರಾರಂಭಿಸಲು ಐಟಿಸಿಎ ಮುಂದೆ ಬಂದರೆ, ಸರ್ಕಾರ ಎಲ್ಲ ಅಗತ್ಯ ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದರು.
ನಾವಿನ್ಯತೆ ಮತ್ತು ಹೊಸತನವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ವಿದ್ಯಾರ್ಥಿ ಉಪಗ್ರಹ ಯೋಜನೆಗಳಿಗೆ ಯಾವಾಗಲೂ ಉತ್ತೇಜನ ನೀಡುತ್ತದೆ. ಇಸ್ರೇಲ್ ಶಾಲೆಗಳು ಉಪಗ್ರಹ ಯೋಜನೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತವೆ. ಅದೇ ರೀತಿ ರಾಜ್ಯದಲ್ಲೂ ವಿದ್ಯಾರ್ಥಿಗಳ ಉಪಗ್ರಹ ಯೋಜನೆಗಳನ್ನು ಪ್ರೋತ್ಸಾಹಿಸಲು ಸರಕಾರ ಉದ್ದೇಶಿಸಿದೆ. ಸ್ಥಳೀಯ ತಂತ್ರಜ್ಞಾನ ಮತ್ತು ಇತರ ಪೂರಕ ಅಂಶಗಳಿಂದಾಗಿ ಉಪಗ್ರಹಗಳ ತಯಾರಿಕೆ ವೆಚ್ಚ ಕಡಿಮೆಯಾಗಿದೆ ಎಂದು ಅವರು ನುಡಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ತಯಾರಿಸಿ ಯಶಸ್ವಿಯಾಗಿ ಉಡಾವಣೆ ಮಾಡಿದ ಯುನಿಸ್ಯಾಟ್ ತಂಡದಲ್ಲಿದ್ದ ಎಲ್ಲರನ್ನು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಗೌರವಿಸಿದರು. ಐಟಿಸಿಎ ಅಧ್ಯಕ್ಷ ಡಾ. ಎಲ್.ವಿ.ಮಲ್ಲಿಕಾರ್ಜುನ ರೆಡ್ಡಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಆರ್.ಎಂ.ವಾಸಗಂ, ಡಾ. ಮೈಲ್ಸಾಮಿ ಅಣ್ಣಾದುರೈ, ಇಸ್ರೋ ಚಂದ್ರಯಾನ ಯೋಜನೆಯ ಮಾಜಿ ನಿರ್ದೇಶಕ ಗಣೇಶನ್ ನಂಜುಂಡಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.