ಮೊದಲು ಈತನನ್ನು ಟೀಂ ಇಂಡಿಯಾದಿಂದ ಗೇಟ್ ಪಾಸ್ ಕೊಡಿ: ಕಿಡಿಕಾರಿದ ಗವಾಸ್ಕರ್
ಅಡಿಲೇಡ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ಆಸ್ಟ್ರೇಲಿಯಾ ಎದುರು ಆಘಾತಕಾರಿ ಸೋಲು ಕಂಡಿದೆ. ಮೊದಲ ಇನಿಂಗ್ಸ್ನಲ್ಲಿ ಮುನ್ನಡೆಯ ಹೊರತಾಗಿಯೂ ಎರಡನೇ ಇನಿಂಗ್ಸ್ನಲ್ಲಿ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ಕಾಂಗರೂ ಪಡೆಗೆ ಸುಲಭ ತುತ್ತಾಗಿದೆ.
ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪರೇಡ್ಗೆ ಕ್ರಿಕೆಟ್ ಪಂಡಿತರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಓರ್ವ ಕ್ರಿಕೆಟಿಗನನ್ನು ತಂಡದಿಂದಲೇ ಕೈಬಿಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆಸ್ಟ್ರೇಲಿಯಾ ಎದುರು ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದೆ.
ಮೊದಲ ಇನಿಂಗ್ಸ್ನಲ್ಲಿ 53 ರನ್ಗಳ ಮುನ್ನಡೆ ಗಳಿಸಿದ್ದರೂ ಎರಡನೇ ಇನಿಂಗ್ಸ್ನಲ್ಲಿ ಕೇವಲ 36 ರನ್ ಗಳಿಸಿ ಭಾರತ ತನ್ನ ಬ್ಯಾಟಿಂಗ್ ಹೋರಾಟ ಅಂತ್ಯಗೊಳಿಸಿತ್ತು.
ಅಂತಿಮವಾಗಿ ಗೆಲ್ಲಲು ಕೇವಲ 90 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ಕೇವಲ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ನಗೆ ಬೀರಿತು. ಇದರ ಜತೆಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇದರ ಬೆನ್ನಲ್ಲೇ ಎರಡು ಇನಿಂಗ್ಸ್ಗಳಲ್ಲೂ ಬೇಜವಾಬ್ದಾರಿಯುತವಾಗಿ ವಿಕೆಟ್ ಕೈ ಚೆಲ್ಲಿದ ಟೀಂ ಇಂಡಿಯಾ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ವಿರುದ್ದ ಟೀಕೆಗಳ ಸುರಿಮಳೆಯೇ ಹರಿದು ಬಂದಿದೆ.
ಮೊದಲ ಇನಿಂಗ್ಸ್ನಲ್ಲಿ ಶೂನ್ಯ ಸುತ್ತಿದ್ದ ಪೃಥ್ವಿ ಎರಡನೇ ಇನಿಂಗ್ಸ್ನಲ್ಲಿ ಕೇವಲ 4 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದರು. ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಳ್ಳದ ಪೃಥ್ವಿ ಮೇಲೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.
ಒಳಬರುವ ಎಸೆತಗಳನ್ನು ಎದುರಿಸಲು ವೈಫಲ್ಯ ಅನುಭವಿಸುವ ಪೃಥ್ವಿ ವೀಕ್ನೆಸ್ ಗ್ರಹಿಸಿ ಪೆವಿಲಿಯನ್ನಿಗಟ್ಟುವಲ್ಲಿ ಆಸ್ಟ್ರೇಲಿಯಾ ವೇಗಿಗಳು ಸಫಲರಾಗಿದ್ದರು.
ಪೃಥ್ವಿ ಶಾ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಗವಾಸ್ಕರ್, ಪೃಥಿ ಶಾ ತಾಂತ್ರಿಕ ತೊಂದರೆಯನ್ನು ಎದುರಿಸುತ್ತಿದ್ದಾರೆ. ಅವರನ್ನು ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಿಂದ ಕೈಬಿಡಬೇಕು ಎಂದು ಕಿಡಿಕಾರಿದ್ದಾರೆ.