ವಿರಾಟ್ ಕೊಹ್ಲಿಗಿಂತ ರೋಹಿತ್ ಅತ್ಯುತ್ತಮ ನಾಯಕ ಎಂದ ಆರ್ಸಿಬಿ ಕ್ರಿಕೆಟಿಗ..!
ಬೆಂಗಳೂರು: ಬಹುನಿರೀಕ್ಷಿತ ಭಾರತದಲ್ಲೇ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ಕೆಲವು ತಿಂಗಳುಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಟೀಂ ಇಂಡಿಯಾ ನಾಯಕತ್ವ ಬದಲಾವಣೆ ಬಗ್ಗೆ ಕ್ರಿಕೆಟ್ ವಲಯದಲ್ಲಿ ಬಹುದೊಡ್ಡ ಚರ್ಚೆ ಶುರುವಾಗಿದೆ.
ಟೀಂ ಇಂಡಿಯಾ ಟಿ20 ನಾಯಕತ್ವ ಪಟ್ಟವನ್ನು ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾಗೆ ನೀಡಬೇಕು ಎನ್ನುವ ಚರ್ಚೆ ಜೋರಾಗಿದೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರನೊಬ್ಬ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಬೆಸ್ಟ್ ನಾಯಕ ಎನ್ನುವ ಮೂಲಕ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾಗೆ ಟೀಂ ಇಂಡಿಯಾ ಟಿ20 ನಾಯಕತ್ವ ನೀಡಬೇಕು ಎನ್ನುವ ಕೂಗು ಜೋರಾಗಿದೆ.
ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ ದಾಖಲೆಯ 5 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇದೇ ವೇಳೆ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.
ಇದೆಲ್ಲದರ ನಡುವೆ ಆರ್ಸಿಬಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್, ಸೀಮಿತ ಮಾದರಿಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ನಾಯಕ ಎಂದು ಗುಣಗಾನ ಮಾಡಿದ್ದಾರೆ.
ಪಾರ್ಥಿವ್ ಪಟೇಲ್ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದಡಿ ಆಡಿದ ಅನುಭವವಿದೆ.
2015ರಿಂದ 2017ರ ಅವಧಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಪಾರ್ಥಿವ್ ಪಟೇಲ್ ಪ್ರತಿನಿಧಿಸಿದ್ದರು.
ಇನ್ನು 2018ರಿಂದ ಇಲ್ಲಿಯವರೆಗೆ ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದಾರೆ.
ನಾನು ಈ ಇಬ್ಬರ ನಾಯಕತ್ವದಲ್ಲಿ ತಲಾ 3 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇನೆ. ಈ ಪೈಕಿ ರೋಹಿತ್ ಶರ್ಮಾ ನಾಯಕತ್ವ ನನಗೆ ಹೆಚ್ಚು ಇಷ್ಟವಾಗುತ್ತದೆ ಎಂದು ಪಟೇಲ್ ಹೇಳಿದ್ದಾರೆ.
ಮೈದಾನದಲ್ಲಿ ರೋಹಿತ್ ಶರ್ಮಾ ಯಾವಾಗಲೂ ಶಾಂತವಾಗಿ ವರ್ತಿಸುತ್ತಾರೆ ಹಾಗೆಯೇ ಒತ್ತಡದ ಸಂದರ್ಭದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಂಡ ಕಟ್ಟುವ ವಿಚಾರದಲ್ಲಿ ರೋಹಿತ್ ಉತ್ತಮ ನಾಯಕ ಎಂದು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಿಟ್ಮ್ಯಾನ್ ಅವರನ್ನು ಕೊಂಡಾಡಿದ್ದಾರೆ.
ರೋಹಿತ್ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಮರ್ಥವಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮೈದಾನದಲ್ಲಿರುವ ಇತರ ಆಟಗಾರರ ಸಲಹೆಯ ಮೇರೆಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಪಟೇಲ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ನನಗ್ಯಾವ ಬೇಸರವೂ ಇಲ್ಲ. ಆದರೆ ರೋಹಿತ್ರಂತೆ ಟೂರ್ನಿಯನ್ನು ಹೇಗೆ ಗೆಲ್ಲಬೇಕು ಎನ್ನುವ ಕಲೆ ಕೊಹ್ಲಿ ಗೊತ್ತಿಲ್ಲ ಎಂದು ಅಹಮದಾಬಾದ್ ಮೂಲದ ಪಾರ್ಥಿವ್ ಅಭಿಪ್ರಾಯಪಟ್ಟಿದ್ದಾರೆ.
ನಾವು ವಿರಾಟ್ ಒಳ್ಳೆಯ ನಾಯಕನಲ್ಲ ಎಂದು ಹೇಳುತ್ತಿಲ್ಲ. ಆದರೆ ಇಲ್ಲಿ ಯಾವ ನಾಯಕ ಹೆಚ್ಚು ಟ್ರೋಫಿ ಜಯಿಸಿದ್ದಾನೆ ಎನ್ನುವುದು ಹೆಚ್ಚು ಮಹತ್ವದ್ದಾಗುತ್ತದೆ. ಟೂರ್ನಿ ಗೆದ್ದಾಗಲೇ ಆ ತಂಡವನ್ನು ನಾಯಕ ಹೇಗೆ ಮುನ್ನಡೆಸಿದ್ದ ಎನ್ನುವುದು ಅರ್ಥವಾಗುತ್ತದೆ ಎಂದು ಪಟೇಲ್ ಹೇಳಿದ್ದಾರೆ.
ಮಹತ್ವದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ವಿರಾಟ್ ಕೊಹ್ಲಿ ಎಡವಿದ್ದಾರೆ ಎನ್ನಲು ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಹಾಗೂ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಸಾಕಲ್ಲವೇ ಎಂದು ಪಾರ್ಥಿವ್ ಪಟೇಲ್ ಮಾತು ಮುಗಿಸಿದ್ದಾರೆ.