ಗಂಭೀರ್ಗೆ ಕೈಫ್ ಕೊಟ್ಟಿದ್ದು 10ಕ್ಕೆ 4 ಅಂಕ.. ಬೆನ್ನಲ್ಲೇ ಮೇಲೆ ಮತ್ತೊಬ್ಬ ದಂತಕತೆ ಆಕ್ರೋಶ..!
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರು ಎರಡು ವರ್ಷ ಪೂರೈಸಿದ್ದಾರೆ. ಬೆನ್ನಲ್ಲೇ ಅವರ ಕಾರ್ಯ ಕ್ಷಮತೆ ಬಗ್ಗೆ ಮಾಜಿ ಕ್ರಿಕೆಟಿಗರು ಪ್ರಶ್ನೆ ಮಾಡಿದ್ದಾರೆ. ಮೊಹ್ಮದ್ ಕೈಫ್ 10ಕ್ಕೆ 4 ಅಂಕ ನೀಡಿದ ಬೆನ್ನಲ್ಲೇ ಜಹೀರ್ ಖಾನ್ ಕೂಡ ರೇಟ್ ನೀಡಿದ್ದಾರೆ. ಎಷ್ಟು ಎಂದು ತಿಳಿದುಕೊಳ್ಳಲು ಸ್ಟೋರಿ ಓದಿ.

ಕೋಚಿಂಗ್ ಶೈಲಿ ಮೇಲೆ ಪ್ರಶ್ನೆ
ನವದೆಹಲಿ: ಟೀಮ್ ಇಂಡಿಯಾದ ಮುಖ್ಯಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗರು ಬಹಿರಂಗವಾಗಿಯೇ ಗರಂ ಆಗಿದ್ದಾರೆ. ಗಂಭೀರ್ ಕೋಚ್ ಆಗಿ ಎರಡು ವರ್ಷಗಳನ್ನು ಪೂರೈಸಿದ್ದು, ಈ ಅವಧಿಯಲ್ಲಿ ಅವರ ಕಾರ್ಯಕ್ಷಮತೆಯನ್ನು (Performance) ಮಾಜಿ ಆಟಗಾರರು ಕಟುವಾಗಿ ವಿಮರ್ಶಿಸುತ್ತಿದ್ದಾರೆ. ವಿಶೇಷವಾಗಿ ಮೊಹಮ್ಮದ್ ಕೈಫ್ ಮತ್ತು ಜಹೀರ್ ಖಾನ್ ಅವರು ಗಂಭೀರ್ ಕೋಚಿಂಗ್ ಶೈಲಿಗೆ ನೀಡಿರುವ ರೇಟಿಂಗ್ ಮತ್ತು ಖಾರವಾದ ಮಾತುಗಳು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಟ್ರೋಫಿಗಳು ಗೆದ್ದರೂ ಟೆಸ್ಟ್ನಲ್ಲಿ ಹೀನಾಯ ಸೋಲು
ಗೌತಮ್ ಗಂಭೀರ್ ನೇತೃತ್ವದಲ್ಲಿ ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿ, 2026ರ ಟಿ20 ವಿಶ್ವಕಪ್ ಮತ್ತು 2025ರ ಏಷ್ಯಾ ಕಪ್ ಗೆಲ್ಲುವ ಮೂಲಕ ದೊಡ್ಡ ಸಾಧನೆಗಳನ್ನೇನೋ ಮಾಡಿದೆ. ಆದರೆ ಗಂಭೀರ್ ಕೋಚಿಂಗ್ನಲ್ಲಿ ಭಾರತದ ಟೆಸ್ಟ್ ಪ್ರದರ್ಶನ ಪಾತಾಳಕ್ಕೆ ಕುಸಿದಿದೆ. ತವರಿನಲ್ಲೇ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಿರುವುದು ಮಾತ್ರವಲ್ಲದೆ, ಬಾರ್ಡರ್-ಗವಾಸ್ಕರ್ ಟ್ರೋಫಿ ಕೂಡ ಕೈತಪ್ಪಿದೆ. ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದ್ದು ಕೂಡ ಗಂಭೀರ್ ಮೇಲಿನ ಒತ್ತಡ ಹೆಚ್ಚಿಸಿದೆ. ಅಷ್ಟೇ ಅಲ್ಲದೆ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲುಗಳು ಗಂಭೀರ್ ಅವರ ಕಾರ್ಯತಂತ್ರವನ್ನು ಪ್ರಶ್ನಿಸುವಂತೆ ಮಾಡಿದೆ.
ಕೇವಲ 4 ಅಂಕ ನೀಡುವೆ ಎಂದ ಕೈಫ್
ಗಂಭೀರ್ ಕೋಚಿಂಗ್ಗೆ 10ಕ್ಕೆ ಕೇವಲ 4 ಅಂಕ ನೀಡಿರುವ ಮೊಹಮ್ಮದ್ ಕೈಫ್, ಅವರ ಸಂವಹನ ಕಲೆಯನ್ನೇ ಪ್ರಶ್ನಿಸಿದ್ದಾರೆ. ನಾನು ಗಂಭೀರ್ಗೆ ಅಂಕಗಳನ್ನು ಕಡಿತಗೊಳಿಸುತ್ತೇನೆ. ಇಲ್ಲಿ ಪಾರದರ್ಶಕತೆಯೇ ಇಲ್ಲ. ವಿರಾಟ್ ಕೊಹ್ಲಿ ಮತ್ತು ಗಂಭೀರ್ ನಡುವೆ ಸಂವಹನ ನಡೆಯುತ್ತಿದೆಯೇ ಅಥವಾ ಇಲ್ಲವೇ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ರೋಹಿತ್ ಮತ್ತು ಗಿಲ್ ಜೊತೆ ಮಾತನಾಡುವ ಕೋಚ್, ಕೊಹ್ಲಿ ಜೊತೆ ಏಕೆ ಸುಮ್ಮನಿರುತ್ತಾರೆ? ಹಿರಿಯ ಆಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಇದು 2027ರ ವಿಶ್ವಕಪ್ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಒಬ್ಬ ಆಟಗಾರನನ್ನು ತಂಡದಿಂದ ಕೈಬಿಟ್ಟಾಗ ಅದಕ್ಕೆ ಸರಿಯಾದ ಕಾರಣವನ್ನು ನೀಡಬೇಕು, ಅದು ಗಂಭೀರ್ ಅವಧಿಯಲ್ಲಿ ಕಾಣುತ್ತಿಲ್ಲ ಎಂದು ಕೈಫ್ ಗರಂ ಆಗಿದ್ದಾರೆ.
ಜಹೀರ್ ಖಾನ್ ನೀಡಿದ್ದು 6 ಅಂಕ
ಜಹೀರ್ ಖಾನ್ ಕೂಡ ಗಂಭೀರ್ ಅವರಿಗೆ 6 ಅಂಕ ನೀಡಿ ಎಚ್ಚರಿಸಿದ್ದಾರೆ. ವಿಶ್ವಕಪ್ ಗೆದ್ದಿರುವುದು ನಿಜಕ್ಕೂ ದೊಡ್ಡ ಸಾಧನೆ. ಆದರೆ ಸಂವಹನ ಮತ್ತು ಪಾರದರ್ಶಕತೆಯ ವಿಷಯದಲ್ಲಿ ಗಂಭೀರ್ ಇನ್ನೂ ಸುಧಾರಿಸಬೇಕಿದೆ. ತಂಡದಲ್ಲಿರುವ ಪ್ರತಿಭೆಯನ್ನು ಹೇಗೆ ಸರಿಯಾಗಿ ಬಳಸಿಕೊಳ್ಳಬೇಕು ಎಂಬ ಗೊಂದಲ ಗಂಭೀರ್ ಅವರಲ್ಲಿ ಕಾಣುತ್ತಿದೆ. ಸುಧಾರಣೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಗಂಭೀರ್ ಈ ಬಗ್ಗೆ ಗಮನ ಹರಿಸಬೇಕು ಎಂದು ಜಹೀರ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ-ಗಂಭೀರ್ ಶೀತಲ ಸಮರ?
ಇತ್ತೀಚಿನ ವರದಿಗಳ ಪ್ರಕಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಮುನ್ನ ನಡೆದ ಅಭ್ಯಾಸದ ವೇಳೆಯಲ್ಲಿ ಗೌತಮ್ ಗಂಭೀರ್ ತಂಡದ ಇತರ ಸದಸ್ಯರೊಂದಿಗೆ ಸಮಯ ಕಳೆದರೂ, ವಿರಾಟ್ ಕೊಹ್ಲಿ ಅವರೊಂದಿಗೆ ಮಾತ್ರ ಸಂಪೂರ್ಣ ಮೌನ ವಹಿಸಿದ್ದರು ಎಂಬುದು ಗಮನಕ್ಕೆ ಬಂದಿದೆ. ಈ ಇಬ್ಬರು ದಿಗ್ಗಜರ ನಡುವಿನ ಶೀತಲ ಸಮರವು ಟೀಮ್ ಇಂಡಿಯಾದ ಭವಿಷ್ಯದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆಯಾಗಿ ಗಂಭೀರ್ ಅವರ ಎರಡು ವರ್ಷಗಳ ಕೋಚಿಂಗ್ ಅವಧಿಯು ಟ್ರೋಫಿಗಳ ಗೆಲುವಿಗಿಂತ ಹೆಚ್ಚು ಆಟಗಾರರೊಂದಿಗಿನ ಸಂಬಂಧ ಮತ್ತು ಟೆಸ್ಟ್ ಸೋಲುಗಳ ಕಾರಣದಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

